Sunday, June 11, 2017

ನಾವಲ್ಲ : ಕಥಾಸಂಕಲನ

Navalla - Sethuram

 



ಮುನ್ನುಡಿಯಿಂದ

ಎಚ್. ಎಸ್. ವೆಂಕಟೇಶಮೂರ್ತಿ :

ರಂಗಭೂಮಿಯಲ್ಲಿ ನಾಟಕ ಕರ್ತೃ, ನಟ, ನಿರ್ದೇಶಕರಾಗಿ ಹೆಸರು ಮಾಡಿರುವ ಗೆಳೆಯ ಸೇತೂರಾಮ್, ಈಗ ತಮ್ಮ ಆರು ಕಥೆಗಳ ಸಂಕಲನ ಹೊರತರುತ್ತಿದ್ದಾರೆ. ನಿಷಿತವಾದ ಕತ್ತಿಯಲುಗಿನಂಥ ಭಾಷೆಯೇ ಅವರ ಅಪೂರ್ವ ಶಕ್ತಿ. ಬದುಕಿನ ಆಳ ಅಗಲಗಳನ್ನು ಅನುಭವಗತ ಮಾಡಿಕೊಂಡಿರುವ ಈ ಸೂಷ್ಕ್ಮ ಸಂವೇದಿ. ಜೀವನ ಮತ್ತು ಅದರ ಕಠೋರ ಮುಖವನ್ನು ನಿರ್ಮಮವಾಗಿ ತಮ್ಮ ಕಥೆಗಳಲ್ಲಿ ಪದರಪದರವಾಗಿ ಸೀಳಿ ಇಡುವರಾದರೂ ಆಳದಲ್ಲಿ ಗಾಢವಾಗಿ ಜೀವನಪ್ರೀತಿಯುಳ್ಳವರು. ಅವರ ಕಥೆಗಳ ತಿಕ್ಕಾಟ ಹುಟ್ಟುವುದೇ ಈ ಘರ್ಷಣದಲ್ಲಿ, ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಬದುಕು ಹದಗೆಟ್ಟಿದೆ ಎಂಬ ಅರಿವಿದ್ದೂ. ಈ ಕಥೆಗಳಲ್ಲಿ, ಕಾತ್ಯಾಯನಿಯಂಥ, ಮಂದಾಕಿನಿಯಂಥ  ಹೆಣ್ಣುಮಕ್ಕಳು ತಮ್ಮ ಅಭಿಮಾನ ಮತ್ತು ಸ್ತ್ರೀತ್ವದ ಧಾರಣಶಕ್ತಿಯನ್ನು ಕೊನೆಯವರೆಗೂ ಹೋರಾಡುತ್ತಲೇ ರಕ್ಷಿಸಿಕೊಳ್ಳುತ್ತಾರೆ. ಸೇತೂರಾಮ್ ಸೃಷ್ಠಿಸಿರುವ ಇಂಥ ಸ್ತ್ರೀಪಾತ್ರಗಳು ಹೆಣ್ಣಿನ ಬಗ್ಗೆ ಅವರಿಗೆ ಸಹಜವಾಗಿಯೇ ಇರುವ ಗೌರವಾದರಗಳನ್ನು ಪರೋಕ್ಷವಾಗಿ ಸೂಚಿಸುತ್ತದೆ. ಆ ನೆಲೆಯಲ್ಲಿ 'ಕಾತ್ಯಾಯನಿ' ಮತ್ತು 'ಮೌನಿ'(ಮಂದಾಕಿನಿಯ ಕತೆ) ಸಂಗ್ರಹದ ಅಗ್ರಗಣ್ಯ ಕಥೆಗಳಾಗಿವೆ. 

ಹಾಗೆ ನೋಡಿದರೆ 'ಮೌನಿ' ಒಂದು ಆಶಯದ ಕಥೆ. ಹೆಣ್ಣು, ಬದುಕಿನಲ್ಲಿ ಒಮ್ಮೆ ಹೀಗೆ ಮಂದಾಕಿನಿಯಂತೆ ಸ್ಪೋಟಿಸಿ, ತನ್ನನ್ನು ಪುರುಷ ಜಗತ್ತಿನೆದುರು ಸ್ಥಾಪಿಸಿಕೊಳ್ಳಬೇಕೆಂಬುದೇ ಪ್ರಬಲವೂ ಧನಾತ್ಮಕವೂ ಆದ ಆ ಸಾತ್ವಿಕ ರೋಷದ ಆಶಯ. ಆ ಆಶಯವನ್ನು ಹಿಡಿಯಲಿಕ್ಕಾಗಿಯೇ ಒಡ್ಡಿದ ಭಾಷೆಯ ಬಲೆಯ ಹಾಗಿದೆ ಈ ಕಥೆ. ಕಥೆಯ ಕೊನೆಯಲ್ಲಿ ಬರುವ ಮಂದಾಕಿನಿಯ, ಮೌನ ಮುರಿದ ಕಿಡಿನುಡಿಯ ಆಸ್ಪೋಟವನ್ನು ಕೇಳಿ; 'ರಾಜಕುಮಾರ.... ತಲೆ ಎತ್ತಿ ನೋಡೋ. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡೋ.... ಪ್ರೀತಿಸ್ತೀನಿ... ಅಗಾಧವಾಗಿ ಪ್ರೀತಿಸ್ತೀನಿ...ಹೆಣ್ಣು... ನಾನು... ಪ್ರಕೃತಿ.... ಪ್ರೀತಿಸ್ತೀನಿ. ಜೀವಂತವಾಗಿರೋದನ್ನೆಲ್ಲಾ ಪ್ರೀತಿಸ್ತೀನಿ...ಸತ್ರೆ ಏನು ಮಾಡ್ಲಿ ಹೇಳೋ... ? ಕರಗಿಸಿ ಮಣ್ಣು ಮಾಡಿ ನನ್ನದೇ ಭಾಗ ಮಾಡ್ಕೋತೀನಿ... ಕೋಣೆಯಿಂದ ಹೊರಗೆ ಹೋಗ್ತಾ ಮುಖದಲ್ಲಿ ನಗು ಇರಲಿ ಸರದಾರ.... ಇಲ್ಲಿ ಹೇಳ ಬಿದ್ದಿಲ್ಲ ಇದೇನು ಸೂತಕದ ಕೋಣೆ ಅಲ್ಲ'

"ವಿದ್ಯೆಯ ಸರಸ್ವತಿಗೆ ಮಕ್ಳಳಿಲ್ಲ, ಸುಖದ ಲಕ್ಷ್ಮಿಗೆ ಮಕ್ಳಳಿಲ್ಲ, ಹಸಿವು ನೀಗುವ ಅನ್ನಪೂರ್ಣೇಶವರಿಗೆ ಮಕ್ಳಿಳಿಲ್ಲ. ಕಾಯೋ ದೇವಿ ದುರ್ಗೇನೂ ಬಂಜೇನೇ. ಹೇರೋರು ತಾಯಿ ಆದ್ರೂ, ಹೆರದೋರು ದೇವರಾದ್ರು ತಾಯಿಯಾಗ್ಲಿಲ್ಲ ಬಿಡು, ದೇವಿ ಆಗ್ತೀನಿ...." ಈ ಮಾತುಗಳಲ್ಲಿ ಹೆಣ್ಣಿನ ಆಕ್ರೋಷ ನಿಧಾನಕ್ಕೆ ತನ್ನದಾಗಿ ಮಾಡಿಕೊಳ್ಳುವ ಹೊಸ ಸಾಧ್ಯತೆಯ ಧ್ವನಿಶಕ್ತಿ ಬೆರಗು ಮೂಡಿಸುವಂತದು.

'ಕಾತ್ಯಾಯನಿ', ಮೌನಿಗಿಂತ ಘನವಾದ ಕಥೆ. ಭಾವನೆಗಳಲ್ಲಿ ಅದ್ದಿದ ಮನಸ್ಸು. ಆದರೆ ಬದುಕಿನ ಕಠೋರತೆಗೆ ತೆರೆದುಕೊಂಡ ಅಸ್ತಿತ್ವ. ಈ ಘರ್ಷಣೆಯೇ ಕಾತ್ಯಾಯನಿಯ ಕಥೆ. ಅವಳ ಬದುಕಿನ ಛಲ ಭಾವುಕತೆಯನ್ನು ಅದುಮಿಕೊಂಡು, ಜೀವನದ ಕರಾಳ ಮುಖವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಅಂತಸ್ಥಿಯಿಂದ ಉಂಟಾದದ್ದು. ಹೆಣ್ಣಿನ ವ್ಯಕ್ತಿತ್ವದ ಅನಂತ ಮುಖಗಳು ಇಲ್ಲಿ ಪದರಪದರವಾಗಿ ಸೀಳಿಕೊಳ್ಳುತ್ತವೆ. ಹಾಗೆ ಸೀಳಿಕೊಳ್ಳಲಿಕ್ಕೆ ಭಾಷೆ ಒಂದು ಹರಿತವಾದ ಅಲಗುಕತ್ತಿಯಾಗಿ  ಲೇಖಕರಿಗೆ ಒದಗಿ ಬರುತ್ತದೆ. ಕತೆಗಾರ ಆಯಾ ಸಂದರ್ಭಕ್ಕೆ ತಕ್ಕಂತೆ ಮಾಡುವ ಸ್ತ್ರೀ-ಪುರುಷರ ಕುರಿತು ವ್ಯಾಖ್ಯೆಯನ್ನು ನಾವು ಒಪ್ಪದಿರಬಹುದು. ಆದರೆ ಕಾತ್ಯಾಯನಿಯ ಧೀರೋದಾತ್ತತೆಯನ್ನು ಒಪ್ಪದೇ ಒರಲಿಕ್ಕೆ ಸಾಧ್ಯವಿಲ್ಲ. 
'ಸ್ಮಾರಕ;  ಕಥೆಯಲ್ಲಿ ಬರುವ ತಾಯಿ ಮತ್ತು ಮಗಳು ಧ್ರುವಾಂತರಗಳಲ್ಲಿ ಇದ್ದಾರೆ. ವ್ಯವಕಾರಿಕ ಚಾಣಾಕ್ಷತೆಯ ಆಳದಲ್ಲಿ ಕಂಡೂಕಾಣದಂತೆ  ತೋರಿಸಿಕೊಳ್ಳುವ ಮಾತೃತ್ವದ ಸೆಲೆ ಅಚ್ಚರಿಹುಟ್ಟಿಸುವಂತಿಕೆ ಕಥೆಯಲ್ಲಿ ಅಭಿವ್ಯಕ್ತಿಪಡೆದಿದೆ. ರೊಮ್ಯಾಟಿಕ್ ಆಗದೆ ಭಾವದ ಆರ್ದ್ರತೆ ಡಾಕಿಸಿಕೂಳ್ಳುವ ಸೇತೂರಾಮರ ಕಥೆಗಳ ಈ ಸ್ವಭಾವ ಅಸಾಮಾನ್ಯವಾದುದಾಗಿದೆ.

'ಮೋಕ್ಷ' ಸಂಗ್ರಹದಲ್ಲಿ ನಾನು ಬಹುವಾಗಿ ಮೆಚ್ಚಿನ ಮತ್ತೊಂದು ಕಥೆ. ಇದು ಅಸಂಗತ ಎಂಬಂತೆ ಓದಿಸಿಕೊಳ್ಳುವ ಕಠೋರ ವಾಸ್ತವದ ಕಥೆ. ಮಠವೊಂದರ ಕಪ್ಪುಮುಖ, ಅರಿವಿದ್ದೂ ಇದ್ದೂ ಅದಕ್ಕೆ ಕಾವಲು ಕೂತಂತಿರುವ ಜಗದ್ಗುರುವಿನ ಮನೋತುಮುಲ, ಕೊನೆಗೆ ಕಪ್ಪುಕುಳಗಳನ್ನು ಕಚ್ಚಿ ಸೇಡುತೀರಿಸಿಕೊಳ್ಳಬೇಕೆಂಬ ಸ್ವಾಮಿಯ ಹಠ. ಪರಿಣಾಮವಾಗಿ ಆತ್ಮಹತ್ಯೆಯೊಂದಿಗೆ ಅವನು ಪಡೆಯುವ ಮುಕ್ತಿ. ಇದನ್ನು ರೆಝೋರ್ರಿನಷ್ಟು ಹರಿತವಾದ ಭಾಷೆಯಲ್ಲಿ ಕಥೆ ಬಿಚ್ಚಿಡುತ್ತಾ ಹೋಗುತ್ತದೆ. ಆಧ್ಯಾತ್ಮದ ನೆಲೆ ತಪ್ಪಿಹೋದಾಗಿ ಮೋಕ್ಷ ಎಂಬ ಮಾತು ಪಡೆಯುವ ವ್ಯಂಗ್ಯಾರ್ಥವು ಕಥೆಯಲ್ಲಿ ಸಹಜವಾಗಿ ಸ್ಪೋಟಗೊಂಡು, ಕೇಟ್ಗೆ ಬೇರೆ ಒಂದು ಆಯಾಮವನ್ನೇ ದೊರಕಿಸುತ್ತದೆ.

'ಸಂಭವಾಮಿ' ಮತ್ತು 'ನಾವಲ್ಲ' ಕಥೆಗಳು ಒಂದು ಸಮಾಜವು ತನ್ನ ಸನ್ನಡತೆಯನ್ನು ಪೂರ್ಣಪ್ರಮಾಣದಲ್ಲಿ ಕಳೆದುಕೊಂಡಾಗ ಸಂವೇದನೆ ಶೀಲಾನಾದ ಕತೆಗಾರನಲ್ಲಿ ಉಂಟಾಗುವ ಸಾತ್ವಿಕ ಆಕ್ರೋಷದ ನೆಲೆಯ ಅಭಿವ್ಯಕ್ತಿಯಾಗಿದೆ. ಅದು ಎಲ್ಲ ಕಡೆಯೂ ದೋಷವನ್ನೇ ಕಾಣುವ ಒಂದು ಅತಿಗೆ ಹೋಗಬಹುದು. ಈ ಮನ:ಸ್ಥಿತಿ ಕೊನೆಗೆ ಒಂದು ಬಗೆಯ ಸಿನಿಕತನಕ್ಕೂ ದಾರಿ ಮಾಡಿಕೊಡಬಹುದು. ಮಾನವತೆಯ ಹುಡುಕಾಟದಲ್ಲಿ ಲೇಖಕ ಹತಾಶಗೊಳ್ಳಬಾರದೆಂದು ನನಗೆ ಯಾವಾಗಲೂ ಅನ್ನಿಸುತ್ತದೆ. ಆ ಕಾರಣದಿಂದಲೇ 'ಕಾತ್ಯಾಯನಿ' ಮತ್ತು 'ಮೌನಿ' ಸಂಗ್ರಹದಲ್ಲಿ ನಾನು ಬಹುವಾಗಿ ಮೆಚ್ಚುವ ಕಥೆಗಳಾಗಿವೆ. ಕಳೆಯ ಅಮೃತತ್ವದಲ್ಲಿ ಲೇಖಕರ ಉದ್ವಿಗ್ನತೆ ತಣಿದಾಗ ಕಥೆನವು ದೀರ್ಘಬಾಳಿಕೆಯ ಚಿರಂಜೀವತ್ವ ಪಡೆಯುವುದೆಂಬುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ ಸೇತೂರಾಮ್ ಅಂತಹ ಕಲಾದವ್ಯಕ್ಕೆ ಹಪಹಪಿಸುವ ಕ್ರಿಯಾಶೀಲ ವ್ಯಗ್ರತೆಯ ಕತೆಗಾರರರಾಗಿದ್ದಾರೆ.