Friday, July 3, 2015

ಇಲ್ಲಿಯವರೆಗೆ ಇಷ್ಟು - ಜೋಗಿ ( ಗಿರೀಶ್ ರಾವ್ )

Illiyavarege Istu -Jogi ( Girish Rao )

ಪುಸ್ತಕದ ಮುನ್ನುಡಿಯಿಂದ:


ನೇಪಾಳದಲ್ಲಿ ಅಂಥ ದಟ್ಟ ಕಾಡುಗಳಿವೆ ಅನ್ನುವುದು ಗೊತ್ತಿರಲಿಲ್ಲ. ನಮ್ಮನ್ನು ಅಲ್ಲಿಗೆ ಕರೆದೊಯ್ದ ಪುಣ್ಯಾತ್ಮ ಚಿತ್ವನ್ ಎಂಬ ಅಭಯಾರಣ್ಯಕ್ಕೆ ಕರೆದೊಯ್ದಾ ಅಲ್ಲಿರುವ ಒಂದು ರೆಸಾರ್ಟಿನಲ್ಲಿ ಬಿಟ್ಟ ನಡುರಾತ್ರಿ ನಿದ್ದೆಬಾರದೇ ಹೊರಗೆ ಬಂದರೆ ಉದ್ದಕ್ಕೂ ಹಬ್ಬಿದ ಕಾಡು. ಬೆಳದಿಂಗಳು ಇಷ್ಟಿಷ್ಟೇ ಸೋರುತ್ತಿತ್ತು. ಆ ಕತ್ತಲಲ್ಲಿ ನಡೆಯುತ್ತಾ ಹೋದರೆ ಧುತ್ತನೆ ಎದುರಾದದ್ದು ಅಷ್ಟೆತ್ತರದ ಆನೆ. ಅದರ ಬುಡಕ್ಕೇ ಬಂದು ನಿಂತುಬಿಟ್ಟಿದೆ. ಆನೆ ಲೇಖಕನೆಂಬ ಕಾರಣಕ್ಕೋ ಏನೋ ಏನೂ ಮಾಡಲಿಲ್ಲ.

ಆ ರಾತ್ರಿ ಎದೆ ಝಲ್ಲೆಂದದ್ದು ಈಗಲೂ ಬೆಚ್ಚಿಬೀಳಿಸುತ್ತದೆ. ಹಾಗೆ ಭಯಗೊಂಡ ಎಷ್ಟೋ ವರುಷಗಳೇ ಆಗಿದ್ದವು. ನಮ್ಮೂರಲ್ಲಿ ತೆಂಗಿನ ಗರಿಯನ್ನು ಒಟ್ಟಾಗಿ ಕಟ್ಟಿ ಅದರ ತುದಿಗೆ ಬೆಂಕಿ ಹಚ್ಚಿ ಕೊಳ್ಳಿ ಮಾಡಿಕೊಂಡು ನಡುರಾತ್ರಿ ಹೊತ್ತಿಗೆ ಆರೆಂಟು ಮೈಲು ನಡೆದು ಮನೆ ಸೇರುತ್ತಿದ್ದೆ ದಿನಗಳಲ್ಲೂ ಅಷ್ಟೊಂದು ಭಯವಾಗಿರಲಿಲ್ಲ.

ಬದುಕು ಭಯಬೀಳಿಸುವುದನ್ನು ಬಿಟ್ಟೇ ಬಿಟ್ಟಿದ್ದೆ. ಎಲ್ಲವನ್ನೂ ತುಂಬ ನಿರ್ವಿಕಾರವಾಗಿ ನೋಡಲು ಆರಂಭಿಸಿದ್ದೇವೆ. ಒಂದು ಸಣ್ಣ ರೋಚಕತೆ ಬೇಕು ಅನ್ನಿಸಿದಾಗಲೂ ನಾವು ಮೊರೆಹೋಗುವುದು ವರ್ತಮಾನ ಪತ್ರಿಕೆ, ಟೀವಿ ಅಥವಾ ಸಿನಿಮಾಗಳಿಗೆ ಅದರಾಚೆಗೊಂದು ಲೋಕವಿದೆ ಮತ್ತು ಆ ಜಗತ್ತಿನೆಲ್ಲಿ ಬೆರಗುಗಳಿವೆ ಎಂದು ಕಾಣಿಸಿದರು ಹಲವರು. ಅವಧೂತರು, ಗುರುಗಳು, ಗೆಳೆಯ-ಗೆಳತಿಯರು, ಜ್ಯೋತಿ, ಖುಷಿ, ಅಮ್ಮ ಎಲ್ಲರೂ ಆ ಪಟ್ಟಿಯಲ್ಲಿದ್ದಾರೆ.

ಅವರಿಗೆ ಕೃತಜ್ಞತೆ.

 



Sunday, June 21, 2015

ನಿಮ್ಮಷ್ಟು ಸುಖಿ ಯಾರಿಲ್ಲ - ವಿಶ್ವೇಶ್ವರ ಭಟ್

Nimmashtu Sukhi Yarilla - Vishweshwara Bhat

 

ಸ್ವಾಮಿ ಅನಾಮಧೆಯಪೂರ್ಣ ಎಂಬ ಹೆಸರಿನಲ್ಲಿ ನಾನು 'ಬತ್ತದ ತೆನೆ' ಎಂಬ ಅಂಕಣ ಬರೆಯುತ್ತಿದ್ದೆ, ನಂತರ ಅದೇ ಹೆಸರಿನಲ್ಲಿ ಪುಸ್ತಕವನ್ನು ಸಹ ಪ್ರಕಟಿಸಿದೆ ಈ ಕೃತಿಗೆ ಸಿಕ್ಕ ಪ್ರತ್ರಿಕ್ರಿಯೆ ಅಭೂತಪೂರ್ವ. ಈಗಲೂ ಅನೇಕರು ಕೃತಿಗೆ ಓದು ನೀಡಿದ ಸ್ಪೂರ್ತಿ ಬಗ್ಗೆ ಬರೆಯುತ್ತಿರುತ್ತಾರೆ.

ಇತ್ತೀಚಿಗೆ 'ಬತ್ತದ ತೆನೆ'ಯನ್ನು ಓದಿದ ಯೋಗಿ ದುರ್ಲಭಜೀ  ಅವರು. 'ಇಂತ ಕೃತಿ ಬಹಳ ಉಪಯುಕ್ತ. ನೀವು ಇದರ ಮುಂದಿನ ಭಾಗವನ್ನು ಬರೆಯಬೇಕು. ಜನರಿಗೆ ಉಪದೇಶಗಳನ್ನು ಕೊಡದೇ, ಸಲಹೆ. ಟಿಪ್ಸ್ ಗಳನ್ನೂ ಕೊಡುತ್ತಾ ಬದುಕಿನ ಪ್ರಮುಖ ಸಂಗತಿಗಳನ್ನು ಹೇಳಬೇಕು. ಅದಕ್ಕೂ ಮೊದಲು ಈ ಟಿಪ್ಸ್ ಗಳನ್ನು ನಿಮ್ಮ ಮೇಲೆ ಪ್ರಯೋಗಿಸಿಕೊಳ್ಳಬೇಕು. ಆಗ ಕೃತಿ ಶುಲ್ಕವಾಗುವುದಿಲ್ಲ. ಬೋಧೆಯಾಗುವುದಿಲ್ಲ. ಈಗ ಜನರಿಗೆ ಬೇಕಾಗಿರುವುದೇ ಇದು' ಎಂದರು.

ಅವರ ಮಾತುಗಳನ್ನು ಕೇಳಿದ ಬಳಿಕ ೩೦-೪೦ ಅಧ್ಯಾಯಗಳ ಶೀರ್ಷಿಕೆಗಳನ್ನು ಬರೆದಿಟ್ಟುಕೊಂಡೆ. ದುರ್ಲಭಜೀಯವರು  ಹೇಳಿದಂತೆ. ಈ ಪೈಕಿ ನಾನು ಎಷ್ಟು ಟಿಪ್ಸ್ ಗಳನ್ನು ಅಳವಡಿಸಿ ಕೊಂಡಿದ್ದೇನೆ ಎಂದು ನನ್ನನ್ನೇ ಕೇಳಿಕೊಂಡೆ. ಪೈಕಿ ನಾನು ಆಚರಿಸುತ್ತಿರುವ, ಪಾಲಿಸುತ್ತಿರುವ ಟಿಪ್ಸ್ ಗಳನ್ನಷ್ಟೇ ಆಯ್ಕೆ ಮಾಡಿಕೊಂಡು ಅವುಗಳ ಬಗ್ಗೆ ಹೆಚ್ಚು ಕೊರೆಯದೇ, ಸಂಕ್ಷಿಪ್ತವಾಗಿ ಬರೆಯಲಾರಂಭಿಸಿದೆ.

ಅವರ ಪರಿಣಾಮಣವೇ ಈ ಕೃತಿ!

ಬಹಳ ಸಂದರ್ಭಗಳಲ್ಲಿ ನಾವು ಸುಲಭವಾದ. ಸರಳವಾದ ಸಂಗತಿಗಳನ್ನು ಕ್ಲಿಷ್ಟಮಾಡಿಕೊಂಡು ಪೇಚಾಡುತ್ತೇವೆ. ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದೊಂದೇ ಅಲ್ಲ. ಆಹ್ವಾನವನ್ನೂ ಮಾಡುತ್ತೇವೆ. ಸಣ್ಣ ಸಂಗತಿಗಳೇ ನಮಗೆ ಬೃಹದಾಕಾರವಾಗಿ ಕಾಡುತ್ತವೆ.

ಅಷ್ಟಕ್ಕೂ ಜೀವನ ಅಂದ್ರೆ ಇದೇನಾ? ಇಷ್ಟೇನಾ? ನಮ್ಮ ಬದುಕನ್ನು ಸುಂದರವಾಗಿ ಕಳೆಯಲು ನೂರಾರು ಮಾರ್ಗಗಳಿವೆ. ಮಾರ್ಗಗಳು ಅಷೆಲ್ಲಾ ಇರಲಿ ಬಿಡಿ. ಆದರೆ ಆ ಸೌಂದರ್ಯವನ್ನು ಬೇರೆಲ್ಲೂ ಅರಸಬೇಕಾಗಿಲ್ಲ. ಅದನ್ನು ಹುಡುಕುವ ಮಾರ್ಗವಿದ್ದರೆ ಒಂದೇ. ನಮ್ಮ ಸುಖವನ್ನು ಸೃಷ್ಟಿಸಿಕೊಳ್ಳಬೆಕಾದವರು ನಾವೇ. ಅದು ನಮ್ಮೊಳಗೇ ಇದೆ. ಅದೇ ನಮಗೆ ಗೊತ್ತಿಲ್ಲ ಅದಕ್ಕಾಗಿ ಎಲ್ಲೆಲ್ಲೋ ಹುಡುಕುತ್ತೇವೆ. ಯಾರನ್ನೋ ಹುಡುಕಿಕೊಂಡು ಹೊಗುತ್ತೇವೆ. ನಮ್ಮನ್ನು ನಾವು ಪದೇಪದೆ ಭೇಟಿ ಮಾಡಿದರೆ, ನಮ್ಮೊಡನೆ ಕುಳಿತು ವಿಚಾರ ವಿನಿಮಯ ಮಾಡಿಕೊಂಡರೆ ಎಲ್ಲವೂ ಸಲೀಸು. ಅದಕ್ಕಾಗಿ ನಾವು ನಮಗೆ ಸಿಗಬೇಕು. ಆಗಲೇ ನಮ್ಮ ಸುಖ ಎಲ್ಲಿದೆಯೆಂಬುದು ತಿಳಿದೀತು.

ಈ ಪುಸ್ತಕ ಓದಿದೆ ಬಳಿಕ ನಿಮ್ಮಲ್ಲಿರುವ ಸುಖ, ಸಂತಸ, ನೆಮ್ಮದಿ ನಿಮಗೆ ಸಿಗಲಿ. ಸಿಗುತ್ತದೆಂದು ಆಶಯ ನನ್ನದು. ಯೋಗಿ ದುರ್ಲಭಾಜೀ ಅವರು ಹೇಳುವುದೇನೆಂದರೆ, 'ನಮಗೆ ಬೇಕಿರುವುದು ಜೀವನದ ಕುರಿತಾದ ಸಿದ್ದಾಂತಗಳಲ್ಲ. ಸರಳವಾದ ಜೀವನ ಸೂತ್ರಗಳು. ಒಂದು ಎಳೆ ಸಿಕ್ಕರೆ ದಾರ, ದಾರದಿಂದ ಹಗ್ಗ ಮಾಡಿಕೊಳ್ಳುವ ಜಾಣ್ಮೆಯನ್ನು ಜೀವನವೇ ಕಲಿಸಿಕೊಡುತ್ತದೆ.'

ನನ್ನ ಪ್ರಕಾರ, ಈ ಕೃತಿ ಕೂಡ ಅಂಥ ಒಂದು ಸಣ್ಣ ಎಳೆ. ಅದನ್ನು ನೀವು ದಾರವನ್ನಾದರೊ ಮಾಡಿಕೊಳ್ಳಿ, ಹಗ್ಗವನ್ನಾದರೂ ಮಾಡಿಕೊಳ್ಳಿ ಒಟ್ಟಾರೆ ಏನಾದರು ಮಾಡಿಕೊಳ್ಳಿ ಅದು ನಿಮ್ಮ ಬದುಕನ್ನು ಹಸನುಗೊಳಿಸುವ ಚೆಂದದ 'ಸೂತ್ರ'ವಾಗಲಿ.


Sunday, June 14, 2015

ಎಲ್ಲಾನು ಮಾಡುವುದು ಹೊಟ್ಟೆಗಾಗಿ - ಜೋಗಿ ( ಗಿರೀಶ್ ರಾವ್ )

Ellaanu Maaduvudu Hottegaagi -Jogi ( Girish Rao )

 

 

ಪುಸ್ತಕದ ಮುನ್ನುಡಿಯಿಂದ 

ಹಸಿವು-ದುಡಿಮೆ-ಬೊಜ್ಜು-ವ್ಯಾಯಾಮ-ಆಹಂಕಾರ-ಆರೋಗ್ಯ-ಅನಾರೋಗ್ಯ ಹಾಗೂ ಸಾವು ನಮ್ಮ ದೇಹದ ಜೊತೆ ಸದಾ ಇರುವ ಅಂಗೋಪಾಂಗಗಳು ಎನ್ನಬಹುದು. ಹುಟ್ಟಿನ ಸಂಭ್ರಮದ ನಂತರ ಎಂದೋ ಬರುವ ಸಾವು, ಸಾವಿನ ನಂತರ ನಾವೆನಾಗ್ತೇವೆ ಅಂತ ಗೊತ್ತಿಲ್ಲದೇ ಹಾರಾಡುವುದು, 'ನಾವು' ಎಂದರೇನೆಂದು ನಮಗೇ ಗೊತ್ತಾಗದಿರುವುದು ಇದೆಲ್ಲಾ ನೋಡಿದರೆ ನಾವು ತೀರಾ ಪೋರೋಕ್ಷವಾಗಿ ಸಾವೆಂಬ ಆರಕ್ಕೆ ಮೂರಡಿ ಅಂತಿಮ ಸತ್ಯವನ್ನು, ಒಳಗೊಳಗೇ ಹೊತ್ತು ತಿರುಗಾಡುತ್ತೇವೆ ಅನ್ನಿಸುತ್ತದೆ. ಅದಕ್ಕೆ 'ಬದುಕು' ಎಂದು ಹೆಸರಿಟ್ತಿದ್ದೆವೇನೋ ಅನ್ನಿಸುತ್ತದೆ. ಇಲ್ಲದಿದ್ದರೆ ಮನುಷ್ಯ ಅನಾರೋಗ್ಯಕ್ಕೆ ಇಷ್ಟೆಲ್ಲ ಹೆದರಬೇಕಾಗಿರಲಿಲ್ಲ. 

ಈ ಅನುಭವ ಕಥನ ಓದಿದಾಗ ಬರೆದವರು ತಮ್ಮ ಸ್ವಂತ ದೇಹದ ಬಗ್ಗೆ ಹದಿನೈದು ದಿನಗಳ ಕಾಲ ಎಷ್ಟು ಕಾಳಜಿ ವಹಿಸಿದ್ದರೋ, ಓದುವವರು ಒಂದೆರಡು ಗಂಟೆಗಳ ಕಾಲ ಅಷ್ಟೇ ಕಾಳಜಿ ವಹಿಸುತ್ತಾರೆ ಅನ್ನಿಸುತ್ತದೆ. ವಿವರಣೆಗಳಲ್ಲಿ ಮಾನವ ದೇಹ ಮತ್ತು ಆರೋಗ್ಯದ ನಿಗೂಢತೆಗಳೆಲ್ಲ ಲಘು ಹಾಸ್ಯಫಾಲ್ಲಿ ಬಿಚ್ಚಿಕೊಂಡರೂ, ನಗುವ ಕಂಗಳಲ್ಲೇ ನಮ್ಮ ನಮ್ಮ ಹೊಟ್ಟೆಗಳ ಕಡೆ ತುಸು ವಿಷಾದದಿಂದಲೇ ನೋಡಿಕೊಳ್ಳುವಂತಾಗುತ್ತದೆ 

ಕತೆಗಾರಿಕೆಯಲ್ಲಿ ತುಂಬ ದಿನಗಳ ಹಿಂದೆಯೇ ಸೀಲು ಹೊಡೆದಂಥ ಕಿಡಿಗೇಡಿ ನಿರ್ಲಿಪ್ತತೆ ಗಿಟ್ಟಿಸಿಕೊಂಡಿರುವ ಜೋಗಿ, ಇಲ್ಲಿ ತಮ್ಮ ಸ್ವಂತ ದೇಹವನ್ನೇ ಪಾತ್ರವಾಗಿಸಿ, ತಾವು ಸ್ವತ: ತುಸು ದೂರ ನಿಂತವರಂತೆ ಪೂರ್ತಿ ಮಜಾ ತಗೊಂಡು ಬರೆದಿರುವ ಅಪರೂಪದ ಕಥನ ಇದು. ಉದ್ದೇಶಪೂರ್ವಕವಾಗಿ ಗಹನವಾದದ್ದೆನನ್ನೋ ಹೇಳಿ ತಲೆಕೆಡಿಸದೆ, ಆರಾಮಾಗಿ ಯಾವುದೋ ಸರಳ ಅನುಭವ ಹೇಳಿ, ಓದುಗ ಇನ್ಯಾವತ್ತೋ ಅನ್ನ ತಿನ್ನುವಾಗಲೋ, ಸ್ನಾನ-ಪ್ರಕ್ಷಾಲನಗಳನ್ನು ಮಾಡುವಾಗಲೋ ಮನೋದೈಹಿಕ ಆರೋಗ್ಯದ ಬಗ್ಗೆ ಸಿರೆಯಸ್ಸಾಗುವಂತೆ ಮಾಡುವಲ್ಲಿ ಈ ಕಥನ 'ಡಾಕ್ಟರ ಚೀಟಿ' ರೀತಿಯಲ್ಲಿ ಯಶಸ್ವಿಯಾಗಿದೆ. 

ಇನ್ನೋದಷ್ಟು ಪಾತ್ರಗಳ ಒಳನೋಟ ಥರದ್ದು, ವೇದಾಂತದ ಥರದ್ದು ಸೇರಿ ಇನ್ನೇನೋ ಆಗಬಹುದಾಗಿದ್ದ ಬರಹ ಥಟ್ಟನೆ ನಿಂತುಹೋಯಿತು ಅನ್ನಿಸಬಹುದು ಓದುಗನಾಗಿ ಇನ್ನೇನ್ನೋ ಆಗಬಹುದಾಗಿದ್ದೆ ಬರಹ ಥಟ್ಟನೆ ನಿಂತುಹೋಯಿತು ಅನ್ನಿಸುವುದು ಓದುಗನಾಗಿ ಇನ್ನೇನೋ ಬಯಸುವ ನನ್ನ ವೈಯಕ್ತಿಕ ನಿರಾಸೆ ಇರಬಹುದು ಅಥವಾ ತೀರ ಸರಳವಾಗಿ ಕತೆಯಿಲ್ಲದೇ ಕಾಲಕೆಷೇಪ ಮಾಡುವುದು ನನಗೆ ತುಂಬ ಇಷ್ಟವಾಗಿರುವುದರಿಂದ ನಾನು ಹೀಗೆಲ್ಲ ಅನ್ನುತ್ತಿರಬಹುದು. ಓದುಗನಿಗೆ ಏನಾಗುತ್ತೆ ಎಂದು ಯೋಚಿಸುತ್ತಾ ಕೂತರೆ ಮಧ್ಯೆ ಗೊತ್ತಾಗಿದೆ. ಅದ್ದರಿಂದ ನನ್ನ ಈ ಅನಿಸಿಕೆ, ಏನೂ ಹೇಳದೇ ಇನ್ನೇನೋ ಹೇಳಲು ಹೋಗಿ ಹೆಂಗೆಂಗೋ  ಆಗಿರಬಹುದು. 

ಥೂ , ನಾನು ಎತ್ಲಾಗೆ ಹೊಂಟೆ, ನಂಗೇ ಗೊತ್ತಾಗ್ತಿಲ್ಲ. ಜಲ್ದಿ ಮುಗಿಸುತ್ತೇನೆ. ನಾನು ಕೂಡ ಒಂದೆರಡು ಬಾರಿ ಆಯುರ್ವೇದಿಕ್ ಸೆಂಟರುಗಳಲ್ಲಿ ಸಿಗರೇಟು ಬಿಡಲು ಯತ್ನಿಸಿ, ಗಂಜಿಗಿಂಜಿ ಕುಡಿದುಕೊಂಡು ಇದ್ದದ್ದರಿಂದ ಇಲ್ಲಿ ಜೋಗಿ ಹೇಳಿದ್ದೆಲ್ಲ ನನ್ನದೇ ಖಾಸಗಿ ವಿವರಗಳು ಅನಿಸುತ್ತಿವೆ. ಔಷಧಿ ಕೊಡುವ ಡಾಕ್ಟರಿಗೇ ಒಮ್ಮ ಸಿಗರೇಟು ಸೇದುವಂತೆ ಪುಸುಲಾಯಿಸಿದ ಕಾರಣ ನನ್ನುನ್ನು ಮರ್ಯಾದೊಚಿತವಾಗಿ ಅಲ್ಲಿಂದ ಓಡಿಸಲಾಗಿತ್ತು ಅನ್ನೋದು ಬೇರೆ ವಿಷಯ.   

ಯಾವುದೇ ಕೃತಿ ಓದಿ ಮುಗಿಸಿದ ತಕ್ಷಣ ಅದೊಂದು ಹೊಸ ಲೋಕವನ್ನೂ, ಆ ಕ್ಷಣದ ಅದರೆದ್ದೆ ಆದ ಹೊಸ ಭಾವಪ್ರಾಪ್ತಿಯನ್ನೂ 'ಟಪಕ್ಕಂತ' ಕರುಣಿಸಬೇಕು. ಅದು ಇಲ್ಲಿದೇ. ಎಲ್ಲರೊ ತಮ್ಮತಮ್ಮ ದೇಹ ತನಗೆ ತೋಚಿದ್ದು ಮಾಡಿದರೆ, ದೇಹ ತನಗೆ ತೋಚಿದ್ದು ಯಾಕೆ ಮಾಡುತ್ತದೆ, ದೇಹ-ಮನಸ್ಸು ಅದರೇನು ಎಂದೆಲ್ಲ ಒಮ್ಮೆ ಘನಗಾಂಭೀರ್ಯದಿಂದ  ಬಗ್ಗಿ ಹೊಟ್ಟೆ ನೋಡಿಕೊಂಡು 'ಮಿಸ್ಸು' ಮಾಡದೇ ಮೌನಾಚರಣೆ ಮಾಡಬೇಕಾಗಿ ಕೋರುತ್ತಾ ನನ್ನ ಪ್ರಾಸ್ತಾವಿಕ ಭಾಷಣ ಮುಗಿಸುತ್ತೇನೆ. 

ನಮಸ್ತೆ 

-- ಯೋಗರಾಜ ಭಟ್


Thursday, June 11, 2015

ಅಷ್ಟಕ್ಕೂ ನಾ ಹೇಳೋದು ಇಷ್ಟು - ವಿಶ್ವೇಶ್ವರ ಭಟ್

Ashtakku Naa Helodu Ishtu - Vishweshwara Bhat



ಮೂಲ ಲೇಖಕ: ಸ್ವಪನ್ ಸೇಠ 
ಅನುವಾದಕರು: ವಿಶ್ವೇಶ್ವರ ಭಟ್

ಮುನ್ನುಡಿಯಿಂದ:

ವ್ಯಕ್ತಿಯೊಬ್ಬ ವೃತ್ತಿಯಿಂದ ಲೇಖಕನಾಗಿದ್ದರೆ ಆತ ಪುಸ್ತಕ ಬರೆಯುತ್ತಾನೆ ಎಂದು ನಿರೀಕ್ಷಿಸಬಹುದು. ಆದರೆ ನನಗೆ ಯಾವತ್ತು ಕಥಾವಸ್ತುವೆಂಬುದು ಇರಲಿಲ್ಲ. ನಾನು ರಚಿಸಬಹುದಾದ ಯಾವುದೇ ಕಾಲ್ಪನಿಕ ಕಥಾನಕವೂ ಇರಲಿಲ್ಲ. ಹಾಗೆಂದು ನನ್ನ ಜೀವನದಲ್ಲಿ ಯಾವುದೇ ಅತ್ಯಾಸಕ್ತಿ ಕೆರಳಿಸುವ ಕತೆಯೂ ಇರಲಿಲ್ಲ. ಹೀಗಾಗಿ ನಾನು ಪುಸ್ತಕ ಬರೆಯುವ ಗೋಜಿಗೆ ಹೋಗಲಿಲ್ಲ. ನಾನು ಅನುಭವಿಸಿರುವುದು ಮಾತ್ರ ನನಗೆ ಗೊತ್ತಿದೆ ಅಷ್ಟೇ. ನೀವು ಓದಿರುವುದೆಲ್ಲವನ್ನೂ ನಾನು ಅನುಭವಿಸಿದ್ದೇನೆ. ಈ ಪುಸ್ತಕದ ಬಗ್ಗೆ ನನಗೆ ಹೇಳಲಿಕ್ಕಿರುವುದು ಕೇವಲ ಇಷ್ಟೇನೆ. 

ಮೂಲ ಲೇಖಕನ ಕುರಿತು :

ಜಾಹೀರಾತು ವೃತ್ತಿಯಲ್ಲಿರುವ ಸ್ವಪನ್ ಸೇಠ ಕೇವಲ ಹದಿನೇಳನೇ ವಯಸ್ಸಿನಲ್ಲಿ ವೀಡಿಯೊ ಟೇಪ್ ಮತ್ತು ಕಂಪ್ಯೂಟರ್ ಬಿಡಿಭಾಗಗಳನ್ನು ಮಾರಾಟ ಮಾಡಲಾರಂಭಿಸಿದರು. ಅವರು ಶಾಲೆಗೆ ಮೊದಲಿಗರಾಗಿದ್ದರು. ಆದರೆ ಕಾಲೇಜು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಹೊರಕ್ಕೆ ಬಂದರು. ಬೆಂಗಳೂರಿನ ಐಐಎಂನಲ್ಲಿ ಪಾಠ ಮಾಡಲು ಹೇಗೋ ಸಮಯ ಹೊಂದಿಸಿಕೊಂಡಿದ್ದರು. 

ಈ ಸಂದರ್ಭದಲ್ಲಿ ಅವರು ಟಾಟಾ ಸ್ಟೀಲ್ ಸಂಸ್ಥೆಗಾಗಿ ಅತ್ಯಂತ ಮಹತ್ವಪೂರ್ಣ ಘೋಷವಾಕ್ಯ "ವೀ ಆಲ್ಸೋ ಮೇಕ್ ಸ್ಟೀಲ್"(ನಾವು ಉಕ್ಕನ್ನೂ ನಿರ್ಮಾಣ ಮಾಡುತ್ತೇವೆ) ಬರೆದರು. ಇಪ್ಪತ್ತೆರಡರ ಹರೆಯದಲ್ಲೇ ಅವರು ಕಾನ್, ಮಾಂಟ್ರಿಕ್ಸ್ ಚಲನಚಿತ್ರೋತ್ಸವ ಮತ್ತು ಕ್ಲಿಯೋಸ್ ಪ್ರಶಸ್ತಿ ಪಡೆದರು. ತನ್ಮೂಲಕ ಕೇವಲ ಇಪ್ಪತ್ನಾಲ್ಕರ ವಯಸ್ಸಿಗೆ ದೇಶದ ಅತಿ ಚಿಕ್ಕ ವಯಸ್ಸಿನ ಸೃಜನಶೀಲ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಇಪ್ಪತ್ತೆಂಟರ ಹರೆಯದಲ್ಲಿ ಅವರು ತಮ್ಮದೇ ಆದ ಈಕ಼್ವಸ್ ಸಂಷೆಯನ್ನು ಸ್ಥಾಪಿಸಿದರು. ಕೇವಲ ಒಂದು ವರ್ಷ ಕಳೆಯುವಷ್ಟರಲ್ಲಿ ಈ ಸಂಸ್ಥೆ, ವರ್ಷದ ಅತ್ಯುತ್ತಮ ಊದಯೋನ್ಮುಖ ಸಂಸ್ಥೆಯ ಪ್ರಶಸ್ತಿ ಗರಿಯನ್ನು ಮೂಡಿಗೆರಿಸಿಕೊಂಡಿತು. 

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇವರು ಕೈ ಇಟ್ಟ ಬಹುತೇಕ ಎಲ್ಲ ಕೆಲಸಗಳಲ್ಲಿ ಯಶಸ್ಸು ಸಾಧಿಸಿದರು. ಆದರೆ ಈ ಪುಸ್ತಕದಲ್ಲಿ ಇದೇ ಮೊದಲು ಬಾರಿಗೆ ಸ್ವಪನ್, ವೈಫಲ್ಯ, ಮಹತ್ವಾಕಾಂಕ್ಷೆ, ನಾಯಕತ್ವ, ಪ್ರೀತಿ ಮತ್ತು ಮದುವೆ ಬಗ್ಗೆ ನಿಸ್ಸಂಕೋಚವಾಗಿ ಪ್ರಾಮಾಣಿಕತೆಯಿಂದ ಹೇಳಿಕೊಂಡಿದ್ದಾರೆ. 

ಅವರು ಸದಾ ಕಾಲ ಯಶಸ್ಸಿನ ಹಾದಿಯಲ್ಲೇನೂ ಸಾಗಲಿಲ್ಲ. ಪುಸ್ತಕದಲ್ಲಿ ಅವರು ಹೇಳಹೊರಟಿರುವುದು ಇದನ್ನೇ. 

ಸದಾ ಕಾಲ ಒಬ್ಬಂಟಿಯಾಗಿರಲು ಇಚ್ಚಿಸುವ ಸ್ವಪನ್ ಇದೀಗ, ವಸಂತ್ ವ್ಯಾಲಿಯಲ್ಲಿ ಬೋಧನೆಯ ಹೊಸ ಹಾದಿಯ ಅನ್ವೇಷಣೆಯಲ್ಲಿ ತೊಡಗಿದ್ದಾರೆ. 

ಹೊಸ ಕಲಾಪ್ರತಿಭೆಯ ಹುಡುಕಾಟದ ಜತೆಗೆ ಆಧುನಿಕ ಭಾರತೀಯ ಮತ್ತು ಸಮಕಾಲೀನ ಭಾರತದ ತಮ್ಮ ಅತ್ಯಮೂಲ್ಯ ಕಲಾಕೃತಿಗಳ ಸಂಗ್ರಹದಲ್ಲಿ ಹೊಸ ಪ್ರತಿಭೆಗಳ ಕಲಾಕೃತಿಗಳನ್ನು ಜೋಡಿಸುವುದು ಅವರ ಸದ್ಯದ ಕಾಯಕವಾಗಿದೆ. 

ಫೇಸ್ ಬುಕ್ ಸಮೂದಾಯದ ನಿರ್ವಹಣೆ ಜೊತೆಗೆ ವಿಶ್ವದ ಅಪರೂಪದ ವೈನ್ ಗಳು, ಪೇಪರ್, ಮೇಣದ ಬತ್ತಿ, ಪುಸ್ತಕಗಳು, ವಿಶ್ವ ಸಿನಿಮಾ, ಪೆನ್ಸಿಲ್ ಗಳು, ಸುಗಂಧ ದ್ರವ್ಯಗಳು ಮುಂತಾದ ಅನೇಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರರ ಜೊತೆಗೆ ಅವರು ಗುರ್ ಗಾಂವ್ ನಿಂದ ಆಚೆ ತೆರಳುತ್ತಾರೆ. ಪುಸ್ತಕದನ್ದಿಗಳಿಗೆ, ಪುಸ್ತಕ ಕೊಳ್ಳಲು. 

ಅಂದ ಹಾಗೆ ಇದು, ಅವರ ಮೊದಲ ಪುಸ್ತಕ. 


Wednesday, June 10, 2015

ಪಂಚತಂತ್ರ - ದೇವುಡು

Hosagannada Panchatantra - Devudu



ನಮ್ಮ ಅಕ್ಕನ ಮಗ ಫೋನ್ ಮಾಡಿದಾಗಲೆಲ್ಲ, ಏನ್ ಮಾಡ್ತಿದೀಯ ಅಂದ್ರೆ ಡೋರೆಮಾನ್ ಇಲ್ಲ ಸಿನ್ ಚಾನ್ ನೋಡ್ತಿದೀನಿ ಅಂತ ಹೇಳ್ತಿದ್ದ. ಏನಿದೆ ಈ ಕಾರ್ಟೂನಲ್ಲಿ ಅಂತ ಅನಿಸಿದ್ರು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ, ಆ ಎರಡು ಕಾರ್ಟೂನನ್ನು ಯಾವತ್ತು ನೋಡಿಲ್ಲದ ಕಾರಣ ಹಾಗು ನಮ್ಮೆ ಮನೆಯಲ್ಲಿ ಯಾರು ಚಿಕ್ಕ ಮಕ್ಕಳಿಲ್ಲದ ಕಾರಣ ಯಾವುದೇ ಗೊಂಬೆಗಳ ಚಾನೆಲಗಳನ್ನು ಹಾಕುವುದಿಲ್ಲ. ಇತೀಚೆಗೆ ಬೇಸಿಗೆ ರಜೆಯಲ್ಲಿ ಅಕ್ಕನ ಮಗ ಮನೆಗೆ ಬಂದಾಗ ನಾವು ಯಾವುತ್ತು ನೋಡಿರದ, ಇಂತ ಚಾನೆಲ್ ಗಳು ಇವೆ ಅಂತಾನು ಗೊತ್ತಿರದ ಚಾನೆಲ್ ಗಳು ಆಡಲು ಪ್ರಾರಂಭಿಸಿದವು. ಕೆಲವು ವರ್ಷಗಳ ಹಿಂದೆ ನೋಡಿದ್ದಕಿಂತ ಹುಡುಗ ಈಗ ಸ್ವಲ್ಪ ಜಾಸ್ತಿ ಕಿರುಚಾಡಿದರು, ಜಾಸ್ತಿ ಗಲಾಟೆ ಮಾಡಿದರು, ಏನೇ ಬೇಕೆಂದರು ಏರು ಧ್ವನಿಯಲ್ಲಿ ಕೇಳಿದರು ನಮ್ಮ ಅಕ್ಕ ಚಿಕ್ಕ ಹುಡುಗರೆಲ್ಲ ಹೇಗೆ ಎಂದು ತಲೆಗೆ ಹಾಕಿಕೊಳ್ಳುವುದಿಲ್ಲ. ಆದರೆ ನನಗೆ ಇದರಿಂದ ಕಿರಿಕಿರಿ ಮಾತು ಆಶ್ಚರ್ಯ. ಆಶ್ಚರ್ಯ ಯಾಕಪ್ಪ ಅಂದ್ರೆ ನಾವು ಚಿಕ್ಕವರಿದ್ದಾಗ ಇಸ್ಟೊಂದು ಕಿರುಚಾಡುತ್ತಿರಲ್ಲಿಲ್ಲ, ಎಲ್ಲದಕ್ಕೂ ಕಿರುಚುತ್ತಿರಲ್ಲಿಲ್ಲ. ಅಕ್ಕನ ಮಗ ಅಲ್ವ ಏನು ಹೇಳಲು ಹೋಗಲಿಲ್ಲ. 

ನಾನು ಪ್ರತಿ ದಿನ ಮನೆಗೆ ಹೋಗುವುದೇ ರಾತ್ರಿ ಯಾಗುತ್ತದೆ, ಟೀವಿ ಆಕುವುದೇ ಅಪರೂಪ, ನೋಡಿದರು ನ್ಯೂಸ್ ಇಲ್ಲ ಯಾವುದಾರು ಮ್ಯೂಸಿಕ್ ಚಾನೆಲ್ ಅರ್ಧ ಘಂಟೆ ಹಾಕಿದರೆ ಹೆಚ್ಚು. ವಾರಾಂತ್ಯದಲ್ಲಿ ಹೊರಗಡೆ ಓಡಾಟ ಇಲ್ಲ ಸಿನಿಮಾ ಇನ್ನು ಟೀವಿ ಗೆ ಸಮಯ ಎಲ್ಲಿ. ಹೀಗಿರುವಾದ ಒಂದು ಶನಿವಾರ ಏನು ಕೆಲಸವಿಲ್ಲ ಮನೆಯಲಿದ್ದಾಗೆ ಕುರ್ಚಿಯಲ್ಲಿ ಕೂತು ರಿಮೋಟ್ ನ ಒಂದು ಬಟನ್ ಒತ್ತಿದೆ, ಯಾರೋ ಕಿಟಾರನೆ ಕಿರುಚಿಕೊಂಡರು. ಮನೆಯಲ್ಲಿದ್ದ ಅಪ್ಪ, ಅಮ್ಮ, ಅಕ್ಕ ಎಲ್ಲರು ರೂಮಗಳಿಂದ ಓಡಿಬಂದು ನೋಡಿದರೆ ಕೌಶಿಕ್, ಅಕ್ಕನ ಮಗನ ಹೆಸರು, ಕಿರುಚಿಕೊಂಡಿದ್ದು, ಅವನ ಕಣ್ಣಲ್ಲಿ ನೀರು ಹರಿತಿದೆ. ಎಲ್ಲರು ನಾನೇ ಏನೋ ಮಾಡಿದಿನಿ ಎನ್ನುವ ರೀತಿಯಲ್ಲಿ ನೋಡ್ತಿದಾರೆ, ನಾನು ಏನು ಮಾಡಿಲ್ಲ ಅಂದ್ರು ನಂಬ್ತಿಲ್ಲ. ಕೌಶಿಕ್ ನ ರನ್ನ, ಬಂಗಾರಿ, ಮುದ್ದು ಅಂತ ಸಮಾದಾನ ಮಾಡಿ ಏನಾಯ್ತು ಅಂತ ಕೇಲ್ದ್ರೆ ದೋರೆಮಾನ್ ಬರ್ತಿತ್ತು ನಾನ್ ಚಾನೆಲ್ ಚೇಂಜ್ ಮಾಡ್ಬಿಟ್ಟೆ ಅಂತ ಗೋಳೇ ಅಂತ ಮತ್ತೆ ಅಳಲು ಶುರು ಮಾಡಿದ. ಸಮಾದಾನ ಮಾಡಿ ಚಾಕಲೇಟ್ ಕೊಟ್ಟು ಮತ್ತೆ ಡೋರೆಮನ್ ಹಾಕಿದಮೆಲೇನೆ ಮನೆಯಲ್ಲಿ ಶಾಂತಿ. 

ನಾವು ಚಿಕ್ಕವರಾಗಿದ್ದಾಗ ಈ ರೀತಿ ಹಠ ಮಾಡಿದ್ದರೆ ಕುಂಡೆ ಮೇಲೆ ಎರಡು ಬೀಳ್ತಿತ್ತು. ಈ ಗೊಂಬೆ ಕಥೆ ಅಷ್ಟೊಂದು ಚೆನ್ನಾಗಿದಿಯ ಅಂತ ನೋಡ್ದ್ರೆ, ಕಥೆನು ಇಲ್ಲ ನೀತಿನು ಇಲ್ಲ. ಬರಿ ಕಿರುಚುವುದು, ಅಪ್ಪ ಅಮ್ಮನಿಗೆ ಸುಳ್ಳು ಹೇಳುವುದು, ದೊಡ್ಡವರು ಹೇಳಿದ ಮಾತನ್ನು ವ್ಯಂಗ್ಯ ಮಾಡುವುದು...... ಹೇಗೆ ಅರ್ಧ ಘಂಟೆ ಮಕ್ಕಳು ಏನು ಮಾದಬಾರದೋ ಅದನ್ನೆಲ್ಲಾ ಡೋರೆಮಾನ್ ಕೈಯಲ್ಲಿ ಮಾಡಿಸುತ್ತಾರೆ. ಈಗ ನನಗೆ ಅರ್ಥವಾಯ್ತು ಯಾಕಪ್ಪ ಹೇ ಹುಡುಗ ಹೀಗೆ ಆಡುತ್ತಾನೆಂದು. ನಮ್ಮ ಬಾಲ್ಯದಲ್ಲಿ ನಾವು ನೋಡಿದ್ದು, ಓದಿದ್ದು ಪಂಚತಂತ್ರ, ತೆನಾಲಿ ರಾಮ, ಅಕ್ಬರ್ ಬೀರಬಲ್ .... ಈ ಕಥೆಗಳು ಅದರ ನೀತಿ ಅವುಗಳ ಮೇಲೆ ನಮ್ಮ ಗುಣ, ನಡತೆ ಬೆಳೆದು ಬಂದಿರುವುದು. ಎಲ್ಲಿ ದೊರೆಮಾನ್ ಮತ್ತು ಎಲ್ಲಿ ಪಂಚತಂತ್ರ. ನಾವು ಓದಿದ ಪ್ರತಿ ಒಂದು ಕಥೆಯಲ್ಲಿ ಒಂದು ನೀತಿ, ಮೊಲ ಮತ್ತು ಆಮೆ ಕಥೆ, ಸಿಂಹ ಮತ್ತು ಮೊಲದ ಕಥೆ, ಕೋತಿ ಮತ್ತು ಮೊಸಳೆ..... ಆಲಸಿ ಯಾಗಬಾರು, ಸುಳ್ಳು ಹೇಳಬಾರದು, ವಂಚನೆ ಮಾಡಬಾರದು ಎಂಬ ನೀತಿಗಳ ಮೂಲಕ ಬೆಳೆದವರು ನಾವು. ನಾವು ಸುಳ್ಳ ಹೇಳುವ ಮುಂಚೆ ಹತ್ತು ಸಾರಿಯಾದರೂ ಯೋಚಿಸುತ್ತೇವೆ ಯಾಕೆಂದರ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಚಿಂತಿಸುತ್ತೇವೆ. ನಾವು ಪಂಚತಂತ್ರ ಕಥೆ ಬಗ್ಗೆ ಯೋಚಿಸದಿದ್ದರು ಎಲ್ಲೋ ಒಂದುಕಡೆ ನಮ್ಮ ಮನಸ್ಸು ಮತ್ತು ಮಿದಿಳು ಹೇಳುತ್ತದೆ ಇದು ತಪ್ಪು ಎಂದು. ಚಿಕ್ಕ ಮಕ್ಕಳು ದೊರೆಮಾನ್ ನೋಡಿದರೆ ಆದರೆ ರೀತಿಯಲ್ಲಿ ಕಿರುಚಾಡುವುದು, ಸುಳ್ಳು ಹೇಳಿ ಹೊರಗೆ ಹೋಗುವುದು ಮಾಡುತ್ತಾರೆ, ಮುಂದೆ ಬೆಳಿತ ದೊಡ್ಡವರಾದ ಮೇಲೆ ಪ್ರಾಮಾಣಿಕ ಪ್ರಜ್ಞೆ ಇಲ್ಲವಾಗುತ್ತದೆ. 

ನಾನು ಓದಿದ ಪಂಚತಂತ್ರ ಕಥೆಗಳಲ್ಲಿ ದೇವುಡು ಅವರು ಬರೆದ ಪಂಚತಂತ್ರ ಪುಸ್ತಕ ತುಂಬ ಚೆನ್ನಾಗಿ ಬರೆದಿದ್ದಾರೆ. ನಾವು ನೋಡಿರುವ ಪಂಚತಂತ್ರ ಪುಸ್ತಕಗಳಲ್ಲಿ ಒಂದೊಂದು ಕಥೆ ಮತ್ತೆ ಕೊನೆಯಲ್ಲಿ ಅದರ ನೀತಿ. ಒಂದು ಕಥೆಗೂ ಮತ್ತು ಇನ್ನೊಂದು ಕಥೆಗೂ ಸಂಭಂದ ಇಲ್ಲ ಎನ್ನುವ ರೀತಿ ತೋರಿಸಿದ್ದಾರೆ. ಮೂಲ ಪಂಚತಂತ್ರದಲ್ಲಿ ಒಂದು ಕಥೆಗೂ ಇನ್ನೊಂದು ಕಥೆಗೂ ಸಂಭಂದ ಇದೆ. ಈ ಸಂಭಂದ ಯಾಕೆ ಮುಖ್ಯ ಎಂದು ಓದುಗರು ತಿಳಿಯಬೇಕು ಮತ್ತು ಮಕ್ಕಳಿಗೆ ತಿಳಿಸಬೇಕು. 

ಮೂಲತ: ಪಂಚತಂತ್ರ ಹುಟ್ಟಿದ್ದು ಹೀಗೆ.  'ದಕ್ಷಿಣ ದೇಶದ ಮಹಿಲಾರೋಪ್ಯ ಎಂಬ ನಗರವೊಂದಿದೆ ಅದರ ರಾಜ ಅಮರಶಕ್ತಿ. ಆತನು ಎಲ್ಲ ವಿದ್ಯೆಗಳನ್ನು ಬಲ್ಲವನು. ಆತನಿಗೆ ಮೂವರು ಮಕ್ಕಳು, ಬಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ, ಇವರಿಗೆ ಓದುವುದು ಎಂದರೆ ಬೇಸರ ರಾಜನಿಗೆ ಇದರಿಂದ ತುಂಬ ದುಃಖ, ಅವರಿಗೆ ಯಾರೇ ಓಡಿಸಲು ಬಂದರು ಎನ್ನನ್ನು ಕಲಿವುದಿದೆಯಿಲ್ಲ, ಮಕ್ಕಳು ಬುದ್ದಿವಂತರಾಗದೆ ಇರುವುದನ್ನು ನೋಡಿ ರಾಜ ಮರುಗಿದನು. ಆಗ ಅವನ ಮಂತ್ರಿಯು ನಮ್ಮ ಅರಮನೆಯಲ್ಲಿ ವಿಷ್ಣುವರ್ಧನೆಂಬ ಬ್ರಾಹ್ಮಣನುಂಟು. ಆತನು ಎಲ್ಲ ಶಾಸ್ತ್ರಗಳನ್ನು ಬಲ್ಲನು. ಅವನ್ನು ಕೇಳೋಣ ಎಂದು ಸೂಚಿಸಿದನು, ವಿಷ್ಣುವರ್ಧನನು ರಾಜನ ಕೋರಿಕೆಯನ್ನು ಸ್ವೀಕರಿಸಿ ನಿಮ್ಮ ಮಕ್ಕಳನ್ನು ಆರು ತಿಂಗಳಲ್ಲಿ ನೀತಿಶಾಸ್ತ್ರ ನಿಪುಣರನ್ನಾಗಿ ಮಾಡುತ್ತೇನೆ ಎಂದು ಘೋಷಿಸುತ್ತಾನೆ. 

ವಿಷ್ಣುವರ್ಧನು ರಾಜನ ಮಕ್ಕಳಿಗೆ "ಸೆರೆಯಾದ ನರಿಯ ಕಥೆ" ಹೇಳಿದನು. ಈ ಕಥೆಯನ್ನು ಕೇಳಿ ರಾಜಕುಮಾರರು ಇಂತಹ ಇನ್ನೊಂದು ಕಥೆಯನ್ನು ಹೇಳಿ ಎಂದು ಬಲವಂತ ಮಾಡಿದರು. ಆಗ ಈ ಹುಡುಗರನ್ನು ದಾರಿಗೆ ತರಲು ಇದೇ ಸರಿಯಾದ ದಾರುಯೆಂದು "ಹಾಗಾದರೆ, ನೀವು ಈ ಕಥೆಯನ್ನು ಮತ್ತೆ ಹೇಳಿ. ನಿಮಗೆ ಇಂತಹ ಕಥೆಯನ್ನು ಬೇಕಾದಷ್ಟು ಹೇಳುವೆನು" ಎಂದನು. ಕಥೆಯನ್ನು ಚನ್ನಾಗಿ ಗಟ್ಟಿಮಾಡಿಕೊಂಡು ಬಂದು ಹೇಳಿದರು. ವಿಷ್ಣುವರ್ಧನು "ಇನ್ನು ಚಿಂತೆಯಿಲ್ಲ ಗೆದ್ದಂತಾಯಿತು" ಎಂದು ನೀತಿಶಾಸ್ತ್ರದ ಸಾರವನ್ನೆಲ್ಲಾ , ನೋಡದೆ ಮಾಡಿದರೆ, ಸಿಕ್ಕಿದ್ದು ಹೋಯಿತು, ಒಡೆಯುವುದು, ವೈರ ಸಾಧಿಸುವುದು, ಸ್ನೇಹ ಕಟ್ಟುವುದು ಎಂಬ ಐದು ತಂತ್ರಗಳನ್ನಾಗಿ ರಚಿಸಿ ಅವರಿಗೆ ಕಥೆಗಳಾಗಿಯೇ ಅದಷ್ಟನ್ನು ಹೇಳಿದನು. ಅವರೂ ಅದನ್ನು ಚೆನ್ನಾಗಿ ಕಲಿತು ಆರು ತಿಂಗಳಲ್ಲಿ ನೀತಿಶಾಸ್ತ್ರದಲ್ಲಿ ನಿಪುಣರಾದರು. 



Sunday, June 7, 2015

ನೂರೆಂಟು ಮಾತು - ವಿಶ್ವೇಶ್ವರ ಭಟ್

Noorentu Maatu - Vishweshwara Bhat



ವಿಶ್ವೇಶ್ವರ ಭಟ್ ರವರ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾದ "ನೂರೆಂಟು ಮಾತು" ಅಂಕಣದ ಸಂಗ್ರಹ ಈ ಪುಸ್ತಕದಲ್ಲಿದ. ಪ್ರತಿವಾರ ಬೇರೆ ಬೇರೆ ವಿಷಯ ಹುಡುಕಿ ಅರ್ಧ ಪುಟ ಓದುಗರಿಗೆ ನಿದ್ದೆ ಬರದಂತೆ, ಬೇರೆ ಪುಟ ತಿರುವದಂತೆ ಹಿಡಿದಿಡುವ ಕಲೆ ವಿಶ್ವೇಶ್ವರ ಭಟ್ ರಿಗೆ ಗೊತ್ತು. ಅವರ ಕೆಲವೊಂದು ವಿಷಯ ವಿವಾದಾತ್ಮಕ ಅನಿಸಿಕೊಂಡರು ಅವರ ಅಧ್ಯಯನದ ಆಳ ಕಮ್ಮಿಯಲ್ಲ.

ಅವರು ಈಗ "ಕನ್ನಡ ಪ್ರಭ" ಪತ್ರಿಕೆ ಬಿಟ್ಟ ಮೇಲೆ ಗುರುವಾರದ "ನೂರೆಂಟು ಮಾತು" ಅಂಕಣ ಇಲ್ಲದ ಪತ್ರಿಕೆ ಓದುವುದು ಗೌಡರ ಮನೆಯಲ್ಲಿ ಭಾನುವಾರ ಕೋಳಿ ಊಟ ಇಲ್ಲದಂತೆ. ಅವರು ವಿಜಯ ಕರ್ನಾಟಕ ಬಿಟ್ಟ ಮೇಲೆ ಅವರ ಓದುಗರು ತಮ್ಮ ಮನೆಯಲ್ಲಿ ಕನ್ನಡ ಪ್ರಭ ತರಿಸಲಾರಂಭಿಸಿದರು. ಈಗ ಯಾವುದೇ ಪತ್ರಿಕೆಯಲ್ಲಿ ಬರೆಯುತ್ತಿಲ್ಲ ಅಂದ ಮೇಲೆ ಅವರ ನಿಷ್ಠಾವಂತ ಓದುಗರು ಈ ಪುಸ್ತಕಗಳ ಮೊರೆ ಹೋಗಿದ್ದಾರೆ. ಅವರ ಒಂದೇ ಆಸೆ ಮತ್ತೆ ಗುರುವಾರ "ನೂರೆಂಟು ಮಾತು" ನಿಂದ ಶುರುವಾಗಲಿ ಎಂದು.


Saturday, June 6, 2015

ಬೆಸ್ಟ್ ಆಫ್ ಕೆಫ - ಎ. ವಿ. ಕೇಶವಮೂರ್ತಿ, ದಿವಾಕರ್ ಎಸ್

Best of Kefa - A V Keshavamoorthy, Divakar S


ಈಗ ಬರುವ ನಗೆ ಬರಹಗಳು ಬರಹಗಾರು ದ್ವಂದ್ವಾರ್ಥಕ್ಕೆ ಮೊರೆ ಹೋಗುತ್ತಾರೆ, ಯಾಕೆ ಮಾಡುತ್ತಾರೆ ಅವರ ಪ್ರಕಾರ ಆ ರೀತಿ ಬರೆಯದಿದ್ದಾರೆ ಯಾರು ಓದುವುದಿಲ್ಲ ಎಂದು. ಹಾಸ್ಯ ಈಗ ಒಂದು ಹೊಸ ತಿರುವಿನಲ್ಲಿ ಬಂದು ನಿಂತಿದೆ, ಅಗ್ಗದ ಗೆಲಿಮಾತು, ಬೇರೆಯವರನ್ನು ನೋಯಿಸುವ ವಿನೋದ. ಹತ್ತಾರು ವರ್ಷಗಳ ಹಿಂದೆ ಹೀಗೆ ಇರಲಿಲ್ಲ, ಹೇಳುವ ಹಾಸ್ಯ ಯಾರಿಗೂ ನೋವುಂಟುಮಾಡದೆ ಹೊಟ್ಟೆ ಹುಣ್ಣಾಗುವವರೆಗೂ ನಗಿಸುತಿದ್ದವು. ಇದರ ಪ್ರತ್ಯಕ್ಷ ಸಾಕ್ಷಿ ಎನ್ನುವ ರೀತಿಯಲ್ಲಿ ಕೇಫ಼ ರವರ ನಗೆ ಬರಹಗಳು ಕೊರವಂಜಿಯಲ್ಲಿ ಪ್ರಕಟವಾದವು.

ಈ ಸಂಕಲನದಲ್ಲಿ ಬರುವ ಹಾಸ್ಯ ಬರಹಗಳನ್ನು ಓದಿದಾಗ ನಮ್ಮ ಮುಖದ ಮೇಲೆ ಮೂಡುವುದು ನಗೆ ಮಾತ್ರ. ಅವರ ಹಾಸ್ಯದಲ್ಲಿ ಬರುವ ಪ್ರಮುಖ ಪಾತ್ರಗಳು ಶೌರಿ, ಟಿಪ್ಪು, ಮೈಗಳ್ಳರ ಸಂಘ, ಡೋಂಟ್ ಫಾಕೀರ್, ಬಾಬು ಎಲ್ಲರು ಈ ಪುಸ್ತಕ ಓದಿದ ಮೇಲೆ ನಮ್ಮ ಆತ್ಮೀಯ ಗೆಳೆಯರಾಗುತ್ತಾರೆ. ನಾವು  ಮೈಗಳ್ಳರ ಸಂಘದ ಸದ್ಯಸರು ಎಂದನಿಸುತ್ತದೆ. ತಮ್ಮ ನಿತ್ಯ ಜೀವನದ ಓಡಾಟಗಳಲ್ಲಿ ವಿನೋದವನ್ನು ತೋರಿಸುತ್ತಾರೆ. ಕೆಫ಼ ರವರ ಪೂರ್ಣ ಹೆಸರು ಎ. ವಿ. ಕೇಶವಮೂರ್ತಿ. ಎಲ್ಲರು ಓದಿ ನಗಬಹುದಾದ ಹಾಸ್ಯ ಬರಹಗಳ ಸಂಕಲನ "ಬೆಸ್ಟ್ ಆಫ್ ಕೆಫ".


Friday, May 8, 2015

ಲೈಫ್ ಈಸ್ ಬ್ಯೂಟಿಫುಲ್ - ಜೋಗಿ ( ಗಿರೀಶ್ ರಾವ್ )

Life is BeautifulJogi ( Girish Rao )




ಪುಸ್ತಕದ ಮುನ್ನುಡಿಯಿಂದ

ಇದು ನನ್ನ ವಿನಂತಿ. ಹೀಗೆ ನಿಮ್ಮಲ್ಲಿ ವಿನಂತಿಸಿಕೊಳ್ಳಲು ಕಾರಣಗಳಿವೆ. ನನಗೆ ನಿಮ್ಮ ಜೊತೆ ತುಂಬ ಹೊತ್ತು ಮಾತಾಡುವ ಆಸೆ. ನಿಮಗೆ ಕತೆ ಹೇಳುವ ಆಸೆ. ನಿಮ್ಮ ಹಾಗೆ ಇದ್ದ ನನ್ನ ಅನುಭವಗಳನ್ನು ಹಂಚಿಕೊಳ್ಳುವ ಆಸೆ. ಒಂದು ವಯಸ್ಸಿನಲ್ಲಿ ಮನಸ್ಸು ವಿಚಿತ್ರವಾದ ತಳಮಳಗಳಿಗೆ ಒಳಗಾಗುತ್ತದೆ. ಸಂಜೆ ಮಧ್ಯಾಹ್ನ ಮುಂಜಾನೆಗಳು ಭಾರವಾದಂತೆ ಅನ್ನಿಸುತ್ತವೆ. ಹೀಗೇ ಬದುಕಬೇಕಾ, ಇದರಿಂದ ಬಿಡುಗಡೆ ಇದೆಯಾ ಅಂತ ಅನ್ನಿಸತೊಡಗುತ್ತದೆ.

ಅಂಥ ಹೊತ್ತಲ್ಲಿ ನಾನು ಪುಸ್ತಕಗಳ ಮೊರೆ ಹೋದೆ. ಪತ್ತೇದಾರಿ ಕಾದಂಬರಿಗಳಿಂದ ಪ್ರೇಮಕಾದಂಬರಿಗಳಿಗೆ ಪ್ರೇಮಕಾದಂಬರಿಗಳಿಂದ ಥ್ರಿಲ್ಲರುಗಳಿಗೆ ವರ್ಗಾಂತರ ಹೊಂದುತ್ತಾ ಬಂದೆ. ಕೊನೆಗೆ ಬೇರೆಯೇ ಥರದ ಪುಸ್ತಕಗಳನ್ನು ಓದಲು ಆರಂಭಿಸಿದೆ. ಇವತ್ತು ನಾನು ಎಂಥಾ ಪುಸ್ತಕ ಕೊಟ್ಟರೂ ಓದಬಲ್ಲೆ. ಎಂಥಾ ಕಳಪೆ ಪುಸ್ತಕದಲ್ಲೂ ನನಗೆ ಬೇಕಾದ ಒಂದು ಸಾಲು ಸಿಕ್ಕೇ ಸಿಗುತ್ತದೆ ಎಂದು ನಂಬಿದವನು ನಾನು. ಎಂಥಾ ಕಸದ ತೊಟ್ಟಿಗೆ ಎಸೆದರೂ ಅಲ್ಲಿಂದ ಒಂದೆರಡು ಉಪಯುಕ್ತ ವಸ್ತುಗಳನ್ನು ಹೆಕ್ಕಬಹುದು ಎಂಬುದು ನನ್ನ ಭರವಸೆ.

ನೀವು ಓದುತ್ತೀರೋ ಇಲ್ಲವೋ ನನಗೆ ಗೊತ್ತಿಲ್ಲ. ಓದುತ್ತೀರಿ ಎಂದು ನಂಬಿಕೊಂಡೇ ಬರೆಯುತ್ತೇನೆ. ಯಾರೋ ಪ್ರೇಮಿಗಳು ಬಂದು ಕೊಂಡುಕೊಳ್ಳುತ್ತಾರೆ ಎಂಬ ನಂಬಿಕೆಯಿಂದ ಕಲಾವಿದೆಯೊಬ್ಬಳು ಚೆಂದದ ಗ್ರೀಟಿಂಗು ಕಾರ್ಡುಗಳನ್ನು ತಯಾರು ಮಾಡುವ ಹಾಗೆ, ಬರೆಯುವುದನ್ನೇ ವೃತ್ತಿಯಾಗಿಸಿಕೊಂಡ ನಮ್ಮಂಥವರು ಬರೆಯುತ್ತಲೇ ಹೋಗುತ್ತೇವೆ. ನಿಮಗೆ ಅವು ಇಷ್ಚವಾದರೆ ಓದುತ್ತೀರಿ, ಇಲ್ಲವಾದರೆ, ಕಲ್ಲಿಗೊಂದು ಹೂವಿಟ್ಟು ಮುಂದೆ ಹೋಗುತ್ತೀರಿ.
ಒಂದೇ ಒಂದು ವಿನಂತಿ:

ನೀವು ಈ ಕೆಳಗಿನ ವರ್ಗಕ್ಕೆ ಸೇರಿದವರಾಗಿದ್ದರೆ, ದಯವಿಟ್ಟು ಈ ಪುಸ್ತಕವನ್ನು ಓದಬೇಡಿ.
1. ದಿನಕ್ಕೆ ಹತ್ತು ಗಂಟೆಗಿಂತಲೂ ಹೆಚ್ಚು ಫೋನಲ್ಲಿ ಮಾತಾಡುವವರು.
2. ದಿನವಡೀ ಫೇಸ್ ಬುಕ್ ನೋಡುತ್ತಾ ಕೂತಿರುವವರು.
3. ಮಾತಿಗಂತ ವಾಟ್ಸ್ ಆಪ್ ಉತ್ತಮ ಎಂದು ನಂಬಿದವರು.
4. ಸಿನಿಮಾ ಹಾಡುಗಳೇ ಜೀವನದ ಸರ್ವಸ್ವ ಎಂದುಕೊಂಡಿರುವವರು.

ಈ ಕೃತಿ ನಿಮಗಾಗಿ ಅಲ್ಲ, ನಿಮ್ಮ ಸಂತೋಷಗಳು ಬೇರೆಯೇ ಇವೆ ಎಂದು ನನಗೂ ಗೊತ್ತು. ನೀವು ಅದರಲ್ಲೇ ಸಂತೋಷಪಟ್ಟುಕೊಂಡಿರಿ. ಆದರೆ, ಅದರಿಂದಾಚೆಗೂ ಸಂತೋಷ ಹುಡುಕುವ ಅಸಂಖ್ಯಾತರಿದ್ದಾರೆ. ಈಗಷ್ಟೇ ಓದಲು ಆರಂಭಿಸುವ ಮಿತ್ರರಿದ್ದಾರೆ. ನಾನು ಏನು ಓದಬೇಕು ಅಂತ ಕೇಳುವ ತರುಣ ತರುಣಿಯರಿದ್ದಾರೆ. ಓದುವ ಹುಮ್ಮಸ್ಸು, ಹುರುಪು ತುಂಬುವಂಥ ಪುಸ್ತಕಗಳು ಬೇಕು ಎಂದು ಕೇಳುವವರಿದ್ದಾರೆ.

ಓದಿನ ರುಚಿ ಬಲ್ಲವರಿಗಾಗಿ ಕೃತಿ ಬರೆಯುವುದು ಸುಲಭ. ಓದಲು ಶುರುಮಾಡಬೇಕು ಅಂದುಕೊಂಡಿರುವ ಗೆಳೆಯರಿಗೋಸ್ಕರ ಬರೆಯುವುದು ಅನಿವಾರ್ಯ ಕರ್ಮ. ಈ ಪುಸ್ತಕ ಈಗಷ್ಟೇ ಓದು ಆರಂಭಿಸುತ್ತಿರುವ, ಮತ್ತಷ್ಟು ಓದಬೇಕು ಎಂದು ಆಸೆಪಡುತ್ತಿರುವ, ಓದದೇ ಜೀವನದ ಬಹುಮುಖ್ಯ ಸಂತೋಷವನ್ನು ಕಳಕೊಂಡಿದ್ದೇನೆ ಎಂದುಕೊಂಡಿರುವ ಅಕ್ಷರಪ್ರೇಮಿಗಳಿಗೋಸ್ಕರ. ಈ ಮೊದಲ ಹೆಜ್ಜೆ ನಿಮ್ಮನ್ನು ಮತ್ತಷ್ಟು ಗಾಢವಾದ, ಕನ್ನಡ ಸಾಹಿತ್ಯದ ಅತ್ಯುತ್ತಮ ಕೃತಿಗಳನ್ನು ಓದುವುದಕ್ಕೆ ಪ್ರೇರಣೆಯಾಗುತ್ತದೆ ಎಂಬುದು ನನ್ನ ನಂಬಿಕೆ.

ನಿಮ್ಮ ಓದು ಸರಾಗವಾಗಲಿ. ಪ್ರೇಮದಂತೆ ಅದು ಫಲಿಸಲಿ. ಅಮಲಿನಂತೆ ಅದು ಓಲೈಸಲಿ. ಮುಂಜಾವದ ನಿದ್ರೆಯಂತೆ ನಿಮ್ಮನ್ನು ಮುದಗೊಳಿಸಲಿ. ಹ್ಯಾಪಿ ರೀಡಿಂಗ್.


Tuesday, April 21, 2015

ನಗ್ನ ಸತ್ಯ - ಅ. ನ. ಕೃ

Nagna Satya - A Na Krishnaraya (A Na Kru)



ನಾನು ಮತ್ತು ನಮ್ಮ ಕನ್ನಡಿಗರು ನೋಡಿರುವ ನೂರೆಂಟು ಕನ್ನಡ ಚಿತ್ರಗಳಲ್ಲಿ "ಭಕ್ತ ಕುಂಬಾರ' ಮತ್ತು "ರಂಗ ನಾಯಕಿ" ಎರಡು ಅದ್ಭುತ ಚಿತ್ರಗಳು. ಈ ಚಿತ್ರಗಳು ಬಿಡುಗಡೆಯಾಗಿ ಹತ್ತಿಪತ್ತು ವರ್ಷಗಳೇ ಕಳೆದರು ಇನ್ನು ನಮ್ಮ ಮನಸ್ಸಿನ್ನಲ್ಲಿದೆ, ಯಾಕೆಂದರೆ ಈ ಚಿತ್ರಗಳಲ್ಲಿ ನಿರ್ದೇಶನ, ಕಥೆ, ಹಾಡುಗಳು, ನಟ-ನಟಿಯರ ನಟನ ಎಲ್ಲವು ತುಂಬ ಚೆನ್ನಾಗಿ ಮೂಡಿಬಂದಿದೆ. ಇಲ್ಲಿ ನಾನು ಹೇಳಬೇಕೆಂದಿರುವುದು ಈ ಚಿತ್ರಗಳಲ್ಲಿ ಮೂಡಿಬಂದಿರುವ ಎರಡು ಸನ್ನಿವೇಶಗಳು.

ಮೊದಲನೆಯದು 'ಭಕ್ತ ಕುಂಬಾರ' ಚಿತ್ರದ ಒಂದು ಸನ್ನಿವೇಶದಲ್ಲಿ ನಾಮದೇವ ದೇವಸ್ಥಾನದ ಒಳಗೆ ಹೋದಾಗ ಒಬ್ಬ ಸನ್ಯಾಸಿಯು ಕಾಲನ್ನು ಶಿವ ಲಿಂಗದ ಮೇಲೆ ಇತ್ತು ಮಲಗಿರುತ್ತಾನೆ, ಅದನ್ನು ನೋಡಿ ಕೋಪಗೊಂಡ ನಾಮದೇವ ಅವನನ್ನು ಗದರಿಸಿದಾಗ ಅವರು ನನಗೆ ಕಣ್ಣು ಕಾಣೋದಿಲ್ಲ ಮತ್ತು ಕಾಲನ್ನು ಎತ್ತಲೂ ಸಹ ಆಗುವುದಿಲ್ಲ, ಸ್ವಲ್ಪ ನೀವೇ ಸಹಾಯ ಮಾಡಿ ನನ್ನ ಕಾಲನ್ನು ಎಲ್ಲಿ ಶಿವ ಇಲ್ಲವೋ ಅಲ್ಲಿ ಇಡ್ತಿಯ ಎಂದು ಕೇಳುತ್ತಾನೆ. ಅದಕ್ಕೆ ಸರಿ ಎಂದು ಕಾಲನ್ನು ಬೇರೆ ಕಡೆ ಇಡಲು ಪ್ರಯತ್ನಿಸುತ್ತಾನೆ ಆದರೆ ಎಲ್ಲಿ ಇಡಲು ಹೋದರು ಎಲ್ಲೇ ಶಿವಲಿಂಗ ಪ್ರತ್ಯಕ್ಷ ವಾಗುತ್ತದೆ. ಇದನ್ನು ನೋಡಿ ತನ್ನ ತಪ್ಪಿನ ಅರಿವಾಗಿ ಶಿವ ಇಲ್ಲದ ಜಾಗವೇ ಇಲ್ಲ ಎಂದು ಗೊತ್ತಿದ್ದರು ತನ್ನ ಆಹಂಕಾರದಿಂದ ಅದನ್ನು ಮರೆತಿದ್ದೆ ಎಂದು ಕ್ಷಮಾಪಣೆ ಕೇಳುತ್ತಾನೆ. ಎರಡನೆಯದು "ರಂಗ ನಾಯಕಿ" ಚಿತ್ರದಲ್ಲಿ ಮಗ ತನ್ನ ತಾಯಿಗೆ ತಾನು ಅವಳನ್ನು ಪ್ರೀತಿಸುತ್ತೀದ್ದೇನೆ ಎಂದು ಹೇಳುತ್ತಾನೆ. ಈ ಎರಡು ಸನ್ನಿವೇಶ ನಮ್ಮೆದುರಿಗೆ ಬಂದರೆ ನಾವು ಕೋಪ ತೋರಿಸುವುದಿಲ್ಲ, ಇದು ಕೆಟ್ಟ ವಿವರಣೆ ಎಂದು ತೆಗಳುವುದಿಲ್ಲ ಏಕೆಂದರೆ ಆಗಿನ ಕಾಲದಲ್ಲಿ ವಿಷಯವನ್ನು ಅರ್ಥೈಸುವ ಪರಿ, ನೋಡುವ ರೀತಿ  ಬೇರೆ ಇತ್ತು. ಈಗ ಯಾರಾದರು ಈ ಎರಡು ಸನ್ನಿವೇಶವನ್ನು ತಮ್ಮ ಚಿತ್ರದಲ್ಲಿ ಚಿತ್ರಿಸಿದರೆ ಆ ಚಿತ್ರ ತೆರೆ ಕಾಣುಹುದೇ ಕಷ್ಟ. ಎಕೆಂದರ ನಮ್ಮ ವಿಶಾಲ ಮನೋಭಾವನ್ನು ಕಳೆದುಕೊಂಡಿದ್ದೇವೆ (ನಮ್ಮ ಮನೋಭಾವನ್ನು ಕೆಲವರ ತಮ್ಮ ಲಾಬಕ್ಕೆ ದುರುಪಯೋಗ ಮಾಡಿಕ್ಕೆ ಇರಬಹುದು). ಒಂದು ಕಾಲಕ್ಕೆ ಒಳ್ಳೆಯದಾಗಿ ಕಾಣಿಸುವ ಕೆಲಸ, ಸ್ಥಿತಿ, ಸನ್ನಿವೇಶ ಮುಂದೊಂದು ದಿನ ಕೆಟ್ಟದಾಗಬಹುದು ಮತ್ತು ಇಂದು ದೂರುವ ಜನ ಹೋಗಳಬಹುದು ಅದು ಆ ಕಾಲಕ್ಕೆ ಮತ್ತು ಆ ಸಮಾಜಕ್ಕೆ ಬಿಟ್ಟಿದ್ದು. ಇದನ್ನೆಲ ಮೀರಿ ಒಂದು ತತ್ವ ಮತ್ತು ಸಿದ್ದಾಂತವನ್ನು ಬಿಡದೆ ಅಭಿಪ್ರಾಯವನ್ನು ನಿರ್ಬೀತಿಯಿಂದ ಹೇಳುವವನು ಮಾತ್ರ ಜನರ ಮನಸ್ಸಿನಲ್ಲಿ ಉಳಿಯುವವನು.

ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಅ. ನ. ಕೃ ರವರು ೧೯೫೦ ರಲ್ಲಿ ಬರೆದಿರುವ ವೇಶ್ಯಾವಾಟಿಕೆ ಕುರಿತು ಬರೆದಿರುವ "ನಗ್ನ ಸತ್ಯ" ಮತ್ತು ಅದರ ಮುಂದುವರಿದ ಭಾಗಗಳಾದ  "ಶನಿ ಸಂತಾನ" ಮತ್ತು "ಸಂಜೆ ಗತ್ತಲು" ಕಾದಂಬರಿಗಳ ಬಗ್ಗೆ ಬರೆಯುವ ಮುನ್ನ ಒಂದು ಕೆಲಸ, ಒಂದು ಸಿದ್ದಾಂತ, ಒಂದು ನಿಯಮ ಒಂದು ಕಾಲದಲ್ಲಿ ಸಮಾಜಕ್ಕೆ ತಪ್ಪೆಂದು ಕಂಡರೂ ಮುಂದೆ ಅವರು ಅದೇ ಸರಿ ಎಂದು ಹೇಳುತ್ತಾರೆ ಮತ್ತು ಸರಿ ಇದ್ದುದ್ದು ಮುಂದೆ ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಯಾಕೆಂದರೆ "ನಗ್ನ ಸತ್ಯ" ಕಾದಂಬರಿ ಬಿಡುಗಡೆ ಯಾದಾಗ ಅ. ನ. ಕೃ ರವರು ಕನ್ನಡ ಸಾಹಿತ್ಯಕ್ಕೆ ಕಾಮದ ಬಣ್ಣ ಬಳಿದು ಹಾಳು ಮಾಡುತ್ತಿದ್ದಾರೆ ಎಂದು ಮತ್ತು ಅವರನ್ನು ಬಹಿಷ್ಕರಿಸಬೇಕೆಂದು ಕೆಲವು ಸಾಹಿತಿಗಳು ಮತ್ತು ಗುಂಪುಗಳ ಅಭಿಪ್ರಾಯ ಪಟ್ಟರು. ಆದರೆ ಈಗ ಕಾಮದ ಸನ್ನಿವೇಶ ವಿಲ್ಲದ ಕಾದಂಬರಿಗಳು ಸಿಕ್ಕುವುದೇ ಕಷ್ಟ. ಅವರು ತಮ್ಮ ಸುತ್ತ ಮುತ್ತಲಿನ ಸಮಜಾದಲ್ಲಿ ಆಗುತ್ತಿರುವ ಘಟನೆಗಳನ್ನು ಆದರಿಸಿ ಕಾದಂಬರಿ ಬರೆಯುತ್ತಿದ್ದರು ಮತ್ತು ಎಂದು ಅವರ ಅಭಿಪ್ರಾಯವನ್ನು ಹೇಳಲು ಹಿಂಜರಿಯುತ್ತಿರಲ್ಲ. 

ಈ ಕಾದಂಬರಿಯಲ್ಲಿ ಬರುವ ಕಾಮ ಪ್ರಚೋದನೆ ಆ ಕಾಲಕ್ಕೆ (೧೯೫೧) ಅತಿಯಾದರಿ ಇಂದು ಓದಿದವರು ಇಷ್ಟಕ್ಕೆ ಅ. ನ. ಕೃ ರವರನ್ನು ಟೀಕಿಸಿದರ ಎಂದು ಕೇಳಬಹುದು. ಇಂದಿನ ಕಾದಂಬರಿಗಳಲ್ಲಿ ಬರುವ ಕಾಮ ಪ್ರಚೋದಾತ್ಮಕ ಸನ್ನಿವೇಶಗಳು ಮತ್ತು ವಿವರೆನೆಗಳು "ನಗ್ನ ಸತ್ಯ"ದಲ್ಲಿ ಬರುವ ವಿವರಣೆ ಏನೇನು ಅಲ್ಲ ಅನ್ನಿಸುತ್ತದೆ. 

"ನಗ್ನ ಸತ್ಯ"  ಒಬ್ಬ ವೇಶ್ಯಯ ಕಥೆಯಲ್ಲ ಇದು ವೇಶ್ಯವಾಟಿಕೆಯ ಕುರಿತು ಬರೆದಿರುವ ಕಾದಂಬರಿ. ಇಲ್ಲಿ ಬರುವ ಪಾತ್ರಗಳ ಸಮಜಾದ ಒಂದೊಂದು ಮುಖಗಳು. ಪೊಲೀಸರು, ರಾಜಕಾರಣಿಗಳು, ವ್ಯಾಪಾರಿಗಳು ಹೇಗೆ ತಮಗೆ ಬೇಕಾದ ಹಾಗೆ ಮಹಿಳೆಯರನ್ನು ಊಪಯೋಗಿಸಿ ಮತ್ತು ಬೇಡವಾದಾಗ ಅವರನ್ನು ಬಿಸಾಡಿ ಹೋಗುವ ಸಮಾಜದ ವಿಕೃತ ಕಾಮಿಗಳ ಮನಸ್ಸು ಮತ್ತು ಮುಖವನ್ನು ಸೇರಿಹಿಡಿದ್ದಿದ್ದಾರೆ. 

ಮುತ್ತಮ್ಮ,, ಕಮಲ, ನಾಗು, ಬಾಳು, ವೆಂಕಟಿ ಈ ಸಮಾಜದ ಒಂದು ಮುಖವಾದರೆ, ಮಾಡಿದ ಕೆಲಸವೆಲ್ಲ ಬಿಟ್ಟು ಹರಟೆ ಹೊಡೆದುಕೊಂಡು ಕಾಲ ಹರಣ ಮಾಡಿ ಕೊನೆಗೆ ಮುತ್ತಮ್ಮನ ಮನೆಗೆ ಗಿರಾಕಿಗಳನ್ನೂ ಹುಡುಕಿಕೊಡುವ ನಾಗರಾಜು ಇನ್ನೊದು ಮುಖ. ಮುತ್ತಮ್ಮನ ಮನೆಗೆ ಬರುವ ಹೆಂಗಸರು ಮತ್ತು ಗಿರಾಕಿಗಳನ್ನು ತನ್ನ ಮುಗ್ದ ಕಣ್ಣುಗಳಿಂದ ನೋಡುವ ಪುಟ್ಟಾ ಈ ಸಮಾಜದ ಸಂಕೇತಾವಾಗಿ ಕಾದಂಬರಿಯ ಮೂಖ ಸಾಕ್ಷಿಯಾಗುತ್ತಾಳೆ. ಶೇಷಗಿರಿ ತನ್ನ ಕಾಮಶಮನಕ್ಕಾಗಿ ಅಚ್ಚಮ್ಮ ಬಳಸಿಕೊಂಡು, ಅವರಿಬ್ಬರ ವಿಷ್ಯ ಮನೆಯಲ್ಲಿ ತಿಳಿದಾಗ ಮನೆಯಿಂದ ಹೊರಗೆ ಹೊಡಿಸುವಾಗ ಏನು ಮಾಡದೆ ಸುಮ್ಮನಿರುತ್ತಾನೆ. ಕೊನೆಗೆ ಮುತ್ತಮ್ಮನ ವೇಶ್ಯಾಗೃಹಕ್ಕೆ ಸೇರುತ್ತಾಳೆ. 

ಶ್ರೀನಾಥನಾಥ ಕಾದಂಬರಿ ಬರೆಯುವಾಗ ವೇಶ್ಯ ಸಮಾಜದ ಬಗ್ಗೆ ಬರೆದು(ಒಂದು ಬಾರಿಯೂ ವೇಶ್ಯಯಾ ಬೇಟಿ ಮಾಡದೆ ತನ್ನ ಕಲ್ಪನೆಯಿಂದ ಬರೆದ್ದಿದ್ದು), ಚಿಕ್ಕಮ್ಮನ ಬಲವಂತದಿಂದ  ಮನೆಯಿಂದ ಹೊರಗೆ ಹೋಗುತ್ತಾನೆ ತನ್ನ ಸ್ನೇಹಿತ ಶರ್ಮನಿಂದ ಮುತ್ತಮ್ಮನ ಮನೆಯಲ್ಲಿ ಕಮಲನ ಪರಿಚಯ ವಾಗುತ್ತೆ. ಪರಿಚಯ ಪ್ರೀತಿಗೆ ತಿರುಗಿ ಅವರಿಬ್ಬರೂ ಕಮಲನ ತಾಯಿ ಸುಶೀಲಮ್ಮನ ಜೊತೆ ಬೇರೆ ಮನೆ ಮಾಡುತ್ತಾರೆ. ಕಮಲಾ ಶ್ರೀನಾಥನ್ನು ಪ್ರೀತಿಸಿದರು ತಾಯಿಯ ಒತ್ತಾಯದ ಮೇಲೆ ಮುತ್ತಮ್ಮನ ಮನೆಗೆ ಹೋಗಿ ಬಂದು ಮಾಡುತ್ತಿರುತ್ತಾಳೆ, ಶ್ರೀನಾಥನಿಗೆ ಇಷ್ಟವಿಲ್ಲದ್ದಿದ್ದರು ಮತ್ತು ಹಾಗೆ ಮಾಡುವುದಿಲ್ಲ ಎಂದು ಭಾಷೆ ಕೊಟ್ಟಿದ್ದರು.  

ಹೀಗೆ ಕಾದಂಬರಿಯಲ್ಲಿ ಸಮಾಜದ ಪ್ರತಿಯೊಂದು ಮುಖವನ್ನು ಚಿತ್ರಿಸಿದ್ದಾರೆ ಕೃಷ್ಣರಾಯರು. ಇಲ್ಲಿ ಕಥೆ ಸಮಾಜದ ಸುತ್ತ ಸುತ್ತುತ್ತದೆಯೇ ಹೊರತು ಕೆಲವು ಜನರ ಸುತ್ತ ಅಲ್ಲ. ಜೀವನದಲ್ಲಿ ನಾವು ಮಾಡುವ ಒಳ್ಳೆ ಕೆಲಸಗಳಿಗೆ ಫಲ, ಕೆಟ್ಟ ಕೆಲಸಗಳಿಗೆ ಕಷ್ಟ ದೊರಕುವುದು ಕರ್ಮ. ನಾವು ಬೇರೆಯವರ ಕಷ್ಟ ಕಾಲದಲ್ಲಿ ಅವರಿಂದ ಲಾಭ ಪಡೆದು ಮುಂದೆ ಅವರನ್ನು ಮರೆತರೆ  ನಾವು ಸುಖವನ್ನು ಅನುಭವಿಸಲಾರೆವು. ಕೃಷ್ಣರಾಯರೇ ಮುನ್ನುಡಿಯಲ್ಲಿ ಹೇಳುವ ಹಾಗೆ " ಶೀಲ ಉಪದೆಶದಿಂದಾಗಲಿ ಬರುವುದಿಲ್ಲ. ಅದು ಸ್ವಯಂಭೂಶಕ್ತಿ, ಅಶ್ಲೀಲ ಜೀವನದಲ್ಲಿ ಒಂದು ಬಗೆಯ ಕೃತಕ ಸೌಂದರ್ಯ, ಕೃತಕ ಆನಂದ, ಕೃತಕ ತೃಪ್ತಿ ಕಾಣುವ ವ್ಯಕ್ತಿ ಒಳಗಣ್ಣು ತೆರೆದು ನೋಡಿ ಶೀಲದಿಂದ ಲಭಿಸುವ ಸಾಶ್ವತ ಆನಂದ, ಸೌಂದರ್ಯ, ತೃಪ್ತಿಯನ್ನು ಗ್ರಹಿಸಬೇಕು. ಮನುಷ್ಯ ಬದುಕಬೇಕು, ಬಾಳಬೇಕು ನಿಜ; ಹೇಗಾದರು ಬಾಳಿದರೆ ಆಯಿತೇ? ಕಂಡವರ ರಕ್ತ ಹೀರಿ ಬದುಕುವುದು ಒಂದು ಬದುಕೇ! ಪರರ ಬಾಳನ್ನು ಮುಟ್ಟಿ ಬಾಳುವುದು ಒಂದು ಬಾಳೇ!!!"

ಈ ಕಾದಂಬರಿಯ ಮುಂದುವರಿದ ಭಾಗಗಳು "ಶನಿ ಸಂತಾನ" ಮತ್ತು "ಸಂಜೆಗತ್ತಲು"


Wednesday, April 15, 2015

ಪ್ರೀತಿ ಎಂಬುದು ಚಂದ್ರನ ದಯೆ - ಎಸ್. ಎಫ಼್. ಯೋಗಪ್ಪನವರ್

Preethi Embudu Chandrana Daye -  S F Yogappanavar



ಕನ್ನಡ ಪ್ರಭ ದಿನ ಪತ್ರಿಕೆಯಿಂದ

ವಿಮರ್ಶೆ - ವಾಸುದೇವ ಶೆಟ್ಟಿ 

ನಮ್ಮ ಪುರಾಣದಲ್ಲಿ ಚಂದ್ರ ಒಬ್ಬ ಖಳನಾಯಕ, ಗುರುದ್ರೋಹಿ. ತನ್ನ ಗುರು ಬೃಹಸ್ಪತಿಯ ಪತ್ನಿಯನ್ನೇ ಅಪಹರಿಸಿ ಇಟ್ಟುಕೊಂಡವನು ಅವನು. ಈತನಿಗೆ ಇಪ್ಪತ್ತೇಳು ಪತ್ನಿಯರೂ (ದಕ್ಷನ ಪುತ್ರಿಯರು) ಇದ್ದರು. ಈ ಚಂದ್ರ ತನ್ನ ಮೋಹಕ ರೂಪದಿಂದಾಗಿಯೇ ಪ್ರೇಮಿಗಳಲ್ಲಿ ಕಾಮನೆಗಳನ್ನು ಕೆರಳಿಸಬಲ್ಲ. ಆತನ ಬೆಳದಿಂಗಳು, ತಂಪುಗಾಳಿ ಮನದಲ್ಲಿ ಪ್ರೇಮದ ಬೀಜಗಳು ಮೊಳೆಯುವುದಕ್ಕೆ ಪೂರಕವಾದವು. ಈ ಕಾರಣಕ್ಕೇ ಇರಬೇಕು ಪ್ರೀತಿ ಎಂಬುದು ಚಂದ್ರನ ದಯೆ ಎಂದು ಕೆಲವರು ಭಾವಿಸುವುದು. ಎಸ್.ಎಫ್. ಯೋಗಪ್ಪನವರ್ ತಮ್ಮ ಹೊಸ ಕಾದಂಬರಿಗೆ ‘ಪ್ರೀತಿ ಎಂಬುದು ಚಂದ್ರನ ದಯೆ’ ಎಂದೇ ಹೆಸರಿಟ್ಟಿದ್ದಾರೆ. 

ಲೇಖಕರ ವರ್ಣನಾಶಕ್ತಿ, ಕಲ್ಪನಾಪ್ರತಿಭೆ, ನವಿರೇಳಿಸುವ ತಣ್ಣಗಿನ ಶೈಲಿ, ಜೋಗುಳ ಹಾಡುವಹಾಗಿನ ಕಥನ ಕಲೆಯಿಂದಾಗಿ ಓದುಗನನ್ನು ಇದು ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ಅವರು ಕಾದಂಬರಿ ಎಂದು ಕರೆದಿರುವ ಕಾರಣಕ್ಕೆ ನಾವು ಕಾದಂಬರಿ ಎಂದು ಓದಿಕೊಳ್ಳುತ್ತೇವೆ ಅಷ್ಟೇ. ಇಲ್ಲದಿದ್ದರೆ ಇದು ಪ್ರತ್ಯೇಕವಾದ ಕವಿತೆಗಳು ಅನಿಸಿಕೊಳ್ಳುವಷ್ಟು ಗದ್ಯಗಂಧಿಯಾಗಿದೆ. ಅಧ್ಯಾಯಗಳೂ ಪುಟ್ಟಪುಟ್ಟವು. ಇದರಲ್ಲಿರುವುದು ಒಂದೇ ವಾಕ್ಯಗುಚ್ಛದ ಕತೆ. ಕಾದಂಬರಿಯಲ್ಲಿಯ ನಿರೂಪಕಿ - ಅವಳೇ ನಾಯಕಿ- (ಅವಳ ಹೆಸರು ಎಲ್ಲಿಯೂ ಉಲ್ಲೇಖಗೊಂಡಿಲ್ಲ) ಮೋಹನ ಎಂಬವನನ್ನು ಗಾಢವಾಗಿ ಪ್ರೀತಿಸಿ ತನ್ನನ್ನು ಅವನಿಗೆ ಸರ್ವರೀತಿಯಿಂದಲೂ ಅರ್ಪಿಸಿಕೊಂಡುಬಿಟ್ಟವಳು. ಆದರೆ ಈ ಮೋಹನ ಅವಳಿಗೆ ಕೈಕೊಟ್ಟು ಬೇರೆಯವಳನ್ನು ಮದುವೆಯಾಗುತ್ತಾನೆ. ಆದರೆ ಅವನಿಗೆ ಅಲ್ಲಿ ಯಾವುದೇ ಸುಖ ಸಿಕ್ಕುವುದಿಲ್ಲ. ಅವಳು ಸತ್ತ ಮೇಲೆಯೇ ಅವನ ಆತ್ಮನಿವೇದನೆಯ ಒಂದು ಅಧ್ಯಾಯ ಮಾತ್ರ ಇರುವುದು. ಪ್ರಿಯತಮನ ಹೆಂಡತಿಯ ಆತ್ಮನಿವೇದನೆಯ ಒಂದು ಅಧ್ಯಾಯವೂ ಇಲ್ಲಿದೆ. 

ಈ ನಡುವಿನದು ಮಾತ್ರ ಲೇಖಕರ ಕಥನ ವೈಭವ, ವರ್ಣನ ವೈಖರಿ, ಭಾಷಾ ಪ್ರೌಢಿಮೆಯಿಂದಾಗಿ ಚಂದಿರನ ಬೆಳದಿಂಗಳ ರಾತ್ರಿಯ ಹಬ್ಬದೂಟ. ಅರ್ಧ ವಾಸ್ತವದೊಂದಿಗೆ ಅರ್ಧ ಕಲ್ಪನೆಯೊಂದಿಗೆ, ಅರ್ಧ ಎಚ್ಚರದಲ್ಲಿ ಇನ್ನರ್ಧ ಕನಸಿನಲ್ಲಿ ರೆಕ್ಕೆ ಪಡೆದುಕೊಳ್ಳುವ ಕಥನದ ಓಘ ಹಗ್ಗ ಬಿಚ್ಚಿದ ಅಶ್ವಮೇಧದ ಕುದುರೆಯಂತೆ ಸಿಕ್ಕಸಿಕ್ಕಲ್ಲಿ ಚಲಿಸುತ್ತದೆ. ಕೆಲವು ಅಧ್ಯಾಯಗಳಂತೂ ಅನಗತ್ಯವೆಂದು ಆ ಓದಿನ ಕ್ಷಣಕ್ಕೆ ಅನಿಸಿದರೂ ಇಡೀ ಕಾದಂಬರಿಯನ್ನು ಒಟ್ಟಾಗಿ ಪರಿಭಾವಿಸಿದಾಗ ಕುವೆಂಪು ರಾಮಾಯಣದ ಮಹೋಪಮೆಗಳಂತೆ ಕಥಾವಸ್ತುವಿನಲ್ಲಿ ಸಂಗತವಾಗಿಬಿಡುತ್ತವೆ. ಇಡೀ ಕಾದಂಬರಿ ರೂಪಕಾತ್ಮಕವಾಗಿ ಒಂದು ಬೆಚ್ಚಗಿನ ಅನುಭವವನ್ನು ಕೊಡುತ್ತದೆ. ಯೋಗಪ್ಪನವರ್ ಅವರ ಅನನ್ಯ ಶೈಲಿ ನಿಮ್ಮನ್ನು ಹಿಡಿದಿಡುತ್ತದೆ.

ಹೆಣ್ಣು ಗಂಡಿನ ಸಂಬಂಧದ ಶೋಧ ಕಾದಂಬರಿಯ ಚೌಕಟ್ಟಿನಲ್ಲಿ ನಡೆದಿದೆ. ಪ್ರೀತಿಸಿದ್ದು ಒಬ್ಬಳನ್ನು, ಮದುವೆಯಾಗಿದ್ದು ಇನ್ನೊಬ್ಬಳನ್ನು. ಈ ಸಂಸಾರದಲ್ಲಿ ಸಮರಸ ಎನ್ನುವುದು ಎಲ್ಲಿಂದ ಬರುವುದು ಸಾಧ್ಯ? ಇಲ್ಲಿರುವುದು ವ್ಯಾಧಿ. ವ್ಯಾಧಿಯ ಜೊತೆ ಸಂಧಾನ ಮಾಡಿಕೊಳ್ಳುವವರಿಗೆ ಸಂತೋಷವೂ ಇದೆ. ಊರಿಗೆ ಹಲವು ದಾರಿ ಇರುವಂತೆ ಬದುಕಿನ ಅರ್ಥ ಕಂಡುಕೊಳ್ಳುವ ಮಾರ್ಗವೂ ಹಲವು.

ಕಥಾನಾಯಕಿಯ ಹೆಸರು ನಮಗೆ ಗೊತ್ತಿಲ್ಲ ಎಂದು ಚಿಂತಿಸುವುದು ಬೇಡ. ಶ್ಯಾವಂತ್ರವ್ವತ್ತಿಯ ವರ್ಣನೆಯು ಅವಳನ್ನು ನಿಮ್ಮೆದುರು ಮೂರ್ತಿಯನ್ನಾಗಿ ಕಟೆದು ನಿಲ್ಲಿಸುತ್ತದೆ. ಅವಳು ಇವಳ ಪ್ರಿಯಕರ ಮೋಹನನಿಗೆ ಹೇಳುವ ಮಾತುಗಳು ಇವು: ‘‘ತಮ್ಮ, ಆ ಹುಡುಗಿ ಸಾಕ್ಷಾತ್ ಪರಮಾತ್ಮನ ಮಗಳು. ಅಕಿನ್ನ ಆಟ ಆಡೋ ವಸ್ತು ಎಂದು ತಿಳಿಬ್ಯಾಡ. ಆಕೆಯ ಚೆಲುವಿನ ಮುಂದ ಭೂದೇವಿ ಕೂಡ ನಾಚಿ ನಿಲ್ಲತಾಳ. ಆಕೆ ನಮ್ಮ ತೋಟದ ನಿಂಬೆ ಹಣ್ಣಿನ ಫಸಲು. ಯಾವಾಗಾದ್ರು ಬನಶಂಕರಮ್ಮನ ದರ್ಶನ ಮಾಡಿಕೊಂಡಿಯೇನು? ಆ ದೇವಿಯಲ್ಲಿರಲಾರದ ಚೆಲುವು ಈ ನನ್ನವ್ವನಲ್ಲಿದೆ. ಈಕಿನ್ನ ಬರಿ ಹುಡುಗಿಯಂತ ತಿಳಿಬ್ಯಾಡ, ಸಮುದ್ರ ಕಡದಾಗ ಹುಟ್ಟಿದ ಅಮೃತ ಇದು. ಹ್ಯಾಗೂ ಪ್ರೀತಿ ಮಾಡಿ, ಆದಷ್ಟು ಬೇಗ ಮದುವ್ಯಾಗು, ಅಕಿನ್ನ ಸರಿಯಾಗಿ ಸಂಭಾಳಿಸು. ಅಕಿ ನಡಿದಾಡೋ ದೀಪ ಇದ್ದಾಂಗ, ಅದು ಎಂದೂ ಆರದ್ಹಂಗ ಜೋಪಾನ ಮಾಡು. ಅಕಿ ನನ್ನ ಕಣ್ಣಾಗ ಹೂವು ಹಣ್ಣು ತುಂಬಿದ ವನ ಕಂಡ್ಹಾಂಗ ಆಗ್ತಾಳ. ಆದ್ರ ವನದಾಗ ಮಂಗ್ಯಾ ಮುಶ್ಯಾ ಬಂದ ಹೋಗಾಕ ನಾನು ಬಿಡೂದಿಲ್ಲ. ನನ್ನ ಎದಿಯೊಳಗಿನ ಜೀವ ಅಕಿ ದೇಹದಾಂಗ ಹರಿದ್ಯಾಡಕ ಹತ್ತೈತಿ ಅಂತ ತಿಳಕೊ. ನಾನು ಒಳ್ಳೇದಕ ಭಾಳ ಒಳ್ಯಾಕಿ, ಸಿಟ್ಟ ಬಂದ್ರ ಮನಸ್ಯಾಳಲ್ಲ. ಅಕಿ ಹಾಲಕೇರಿ ಅನ್ನದಾನಸ್ವಾಮಿ ಆ ಮನೆತನಕ ಆಶೀರ್ವಾದ ಮಾಡಿದ ಪುಣ್ಯದ ಫಲ. ನೀನು ಅಕಿ ಮುಖ ಒಮ್ಮೆರ ಬೇಸ್ಯಾಗ ನೋಡಿ ಏನು? ಅಲ್ಲಿ ಒಮ್ಮೊಮ್ಮೆ ಚಂದ್ರನ ಬೆಳಕು ಚೆಲ್ಲಿದ್ಹಾಂಗ ಕಂಡ್ರ, ಮತ್ತೊಮ್ಮೆ ಹುಲಿಗಳು ಸಾಲುಗಟ್ಟಿ ನಿಂತ್ಹಾಂಗ ಕಾಣಸ್ತೈತಿ. ಅಕಿ ದೇವತಾ ಮನುಷ್ಯಳದಾಳ. ಆಕಿಗೆ ನಿನ್ನಿಂದ ಏನಾದ್ರೂ ಧೋಕಾ ಆಯ್ತಂದ್ರ ನಾನು ನಿನ್ನ ಬಿಡಾಕಿ ಅಲ್ಲ, ಆಕಿ ನನ್ನ ಮಗಳ ಅಂತ ತಿಳಿ.....’’

ಹೀಗೆ ಶ್ಯಾವಂತ್ರವ್ವತ್ತಿ ತನ್ನ ಮಗಳಂಥವಳ ಬಾಳಿನಲ್ಲಿ ಯಾವುದೇ ಧೋಕಾ ಮಾಡದಂತೆ ಮೋಹನನಿಗೆ ಎಚ್ಚರಿಕೆ ನೀಡುತ್ತಲೇ ಆಕೆಯ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾಳೆ. ಹಲವು ಮಂಡಲಗಳನ್ನು ದಾಟಿ ಈ ಮೋಹನನನ್ನು ಸಾಕ್ಷಾತ್ಕರಿಸಿಕೊಳ್ಳುವ ಅವಳ ಪ್ರಯತ್ನ ಸಾಧ್ಯವಾಗುವುದೇ ಇಲ್ಲ. ಎಲ್ಲಿಗೋ ಹೋದವನು ಮತ್ತೆ ಬರಲೇ ಇಲ್ಲ. ಆತನಿಗೆ ಹುಡುಗಿ ನೋಡಿದ ಸುದ್ದಿ ತಿಳಿಯುತ್ತದೆ. ಮದುವೆಯೂ ನಡೆದುಹೋದದ್ದು ತಿಳಿಯುತ್ತದೆ. ಇವಳು ಹಾಗೆಯೇ ಕಾಯುತ್ತಲೇ ಕಾಯುತ್ತಲೇ ದಿನಗಳೆಯುತ್ತ ವೃದ್ಧೆಯಾಗುತ್ತ ಒಂದು ದಿನ ಇಲ್ಲವಾಗುತ್ತಾಳೆ. ಸಂಬಂಧಗಳು ಹಲವು ತೀರಗಳ ಮಧ್ಯೆ ಸಂಪರ್ಕ ಕಲ್ಪಿಸಲು ಕಟ್ಟಿದ ಸೇತುವೆಗಳು. ಇವು ಧ್ವಂಸವಾದಾಗ ತೀರಗಳು ದೂರವಾಗುತ್ತವೆ. ಸೇತುವೆಗಳು ಕಳಚಿ ಬೀಳುತ್ತವೆ. ಇವುಗಳನ್ನು ಮತ್ತೆ ಕಟ್ಟುವುದು ಅಷ್ಟು ಸುಲಭವಲ್ಲ. ವಿಧ್ವಂಸಕ ಕೃತ್ಯದಲ್ಲಿಯ ಪಾಲುದಾರರು ಕಟ್ಟುವ ಕೆಲಸವನ್ನು ಮತ್ತೆ ಮಾಡಲಾರರು. ಕಟ್ಟಿದರೂ ಅದು ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ದಾರಿ ಮಾಡಿಕೊಡುತ್ತದೆ. ಸಂಬಂಧ ಒಂದು ಅಂಗಕ್ಕೆ ಬೇರೆ ಅಂಗವನ್ನು ಕಸಿ ಮಾಡಿದಂತಿರುತ್ತದೆ. ಆ ಕಸಿ ಫಲ ಕೊಡದೇ ಹೋದಾಗ ಪ್ರಾಣ ಕಳೆದುಕೊಂಡ ಸಂಕಟವಾಗುತ್ತದೆ. 

ಇಲ್ಲಿ ಘಟನೆಗಳೆಲ್ಲ ಬೆಳದಿಂಗಳ ಸಾಕ್ಷಿಯಲ್ಲಿಯೇ ನಡೆಯುವುದು. ಆಕೆಯ ಸಾವಿನ ಸುದ್ದಿಯೊಂದಿಗೇ ಕತೆ ಶುರುವಿಟ್ಟುಕೊಳ್ಳುವುದು. ಆಕೆ ಮಸಾರಿ ಮಣ್ಣಿನ ಜೀವಂತ ಪುತ್ಥಳಿ ಎಂದು ಆಕೆಯ ವರ್ಣನೆ ಆರಂಭಿಸುವ ಲೇಖಕರು, ಬದುಕಿದ್ದಾಗ ಬಂಗಾರದ ಒಡವೆ ಎಂದು ಹೊಗಳಿಸಿಕೊಳ್ಳುವ ಹೆಣ್ಣು ಹೆಣವಾದಾಗ ದುರ್ಘಟನೆಗೀಡಾದಂತೆ, ಆಕಾರ ಕಳೆದುಕೊಂಡು ನೀರು ಹತ್ತಿದ ಮಣ್ಣಿನಂತೆ ಕರಗುತ್ತಾಳೆ ಎಂದು ಹೇಳುವರು. ವರ್ಣನೆಯ ಧಾವಂತದಲ್ಲಿ ಅವರು ಮಣ್ಣಿನ ಸಂಬಂಧವನ್ನು ಮರೆಯದಿರುವುದು ಮಹತ್ವದ್ದು. 

ಇಲ್ಲಿ ನಡೆದಿರುವುದು ಒಂದು ವಿಶ್ವಾಸಘಾತ. ನಂಬಿಕೆ, ವಿಶ್ವಾಸದ ತುದಿಯಲ್ಲಿ ವಿಷದ ಹಲ್ಲು. ಸಂಬಂಧಿಕರು, ಬೀಗರು, ತಂದೆ ತಾಯಿಗಳು ಎನ್ನುವ ಸಂತೆಯಲ್ಲಿ ಕಳೆದುಹೋಗುವವನನ್ನು ಹಿಡಿದು ನಿಲ್ಲಿಸಲಾಗದ ಅಸಹಾಯಕತೆ ಗಾಢವಾಗಿ ಇಲ್ಲಿ ತಟ್ಟುತ್ತದೆ. ಪ್ರೇಮ ಭಾರಿ ಮಂಜಿನಂತೆ ಕರಗಿ ಹೋಗುತ್ತದೆ, ಬಿದ್ದ ನೀರಿನಂತೆ ಇಲ್ಲವಾಗುತ್ತದೆ ಎಂಬ ಸತ್ಯ ಮುಖಕ್ಕೆ ರಾಚುತ್ತದೆ. ನಿನ್ನ ಪತ್ನಿಯ ಜೊತೆ ಮಲಗುವಾಗ ನನ್ನ ಮುಖದ ಒಂದು ಪ್ರತಿ ಛಾಯೆಯು ನಿನ್ನ ಬಳಿ ಸುಳಿಯುವುದಿಲ್ಲವಾ. ಹೇಳು, ಸತ್ಯ ಹೇಳು ಎಂದು ಒತ್ತಾಯಿಸಿದರೆ ಆತನ ಬಳಿ ಉತ್ತರವಿಲ್ಲ. ಅವಳು ಹೇಳುತ್ತಾಳೆ, ‘ಬನದ ಹುಣ್ಣಿಮೆಯ ಬಿದಿಗೆಯ ಚಂದ್ರ ಪ್ರೇಮದ ಬಂಧಮುಕ್ತನಂತೆ ಎಷ್ಟೇ ಆಟವಾಡಿದರೂ ಮರುದಿನದಿಂದ ಕ್ಷಯಿಸಹತ್ತುತ್ತಾನೆ. ನಿಮ್ಮಂಥವರ ಸ್ವಭಾವ ಭೂಮಿಯ ಮೇಲೆ ಇರುವ ವರೆಗೂ ಚಂದ್ರನ ಕ್ಷಯ ಗುಣವಾಗಲಾರದು.’ ನಾನು ಸತ್ತ ನಂತರ ನನ್ನ ಹೆಣವನ್ನಾದರೂ ಪ್ರೀತಿಯಲ್ಲಿ ನೋಡು ಎನ್ನುವ ಹೆಣ್ಣಿನ ಆರ್ತತೆ ಜಗತ್ತೇ ಸ್ಥಗಿತಗೊಂಡ ಒಂದು ಕ್ಷಣದ ಅನುಭೂತಿಯನ್ನು ಹುಟ್ಟಿಸದೆ ಇರದು. 

ಎಲ್ಲಿಯೋ ಬಾಣನ ಕಾದಂಬರಿ, ಆಕೆಯ ಚಂದ್ರಾಪೀಡ, ಮಹಾಶ್ವೇತೆ, ವೈಶಂಪಾಯನರ ಅಗಲಿಕೆ ಕೂಡುವಿಕೆ ಜನ್ಮಾಂತರದ ಪ್ರಲಾಪ, ಬೋದಿಲೇರನ ಪಾಪದ ಹೂಗಳ ಬಿಕ್ಕಳಿಕೆಗಳು ನಿಮಗೆ ನೆನಪಿಗೆ ಬಂದರೆ ಅದು ಆಕಸ್ಮಿಕವಲ್ಲ. ಕನ್ನಡದಲ್ಲಿ ಇದೊಂದು ಅಪರೂಪದ ಬರೆವಣಿ


Tuesday, April 14, 2015

ಹಾರಿಕೊಂಡು ಹೋದವನು - ದಿವಾಕರ್ ಎಸ್

Haarikondu Hodavanu - Divakar s



ಕಥಾ ಜಗತ್ತು (ನೊಬೆಲ್ ಪ್ರಶಸ್ತಿ ವಿಜೇತ ಲೇಖಕರು ಬರೆದ 50 ಕತೆಗಳ ಅನುವಾದ), ಜಗತ್ತಿನ ಅತಿ ಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು (ವಿವಿಧ ದೇಶಗಳ ಕತೆಗಳು) ನಂತರ ಇದೀಗ ಎಸ್ ದಿವಾಕರ್ 'ಹಾರಿಕೊಂಡು ಹೋದವನು'ವಿನಲ್ಲಿರುವ ಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. 

ಇಷ್ಟಕ್ಕೂ ಪರದೇಶದ ಕತೆಗಳನ್ನು ನಾವೇಕೆ ಓದುತ್ತೇವೆ? ನಮ್ಮದು ಮತ್ತು ಹೊರಗಿನ ಕತೆಗಳನ್ನು ಓದುವಾಗ ನಮ್ಮ ಮನಸ್ಸು ಹೇಗೆ ಸ್ಪಂದಿಸುತ್ತದೆ? ಇಂತಹ ಕವಲು ನಿಜಕ್ಕೂ ಹಾಗೆಯೇ ಉಳಿಯುತ್ತಾ? ಮಸುಕಾಗುತ್ತಾ?ಎಲ್ಲ ಕತೆಗಳಲ್ಲೂ ಸಾಧಾರಣೀಕರಣ ಸಾಧ್ಯವಾಗುತ್ತಾ? ನಾವೇಕೆ ಇಂತಹ ಬರಹಗಳಿಗೆ ಹಾತೊರೆಯುತ್ತೇವೆ? ಮತ್ತೆ ಮತ್ತೆ ಜತೆಯಾಗುತ್ತೇವೆ? ತನ್ನ ಲಹರಿಗೆ ತಕ್ಕಂತೆ ಕತೆಯ ರಾಶಿಯಲ್ಲಿ ಹೆಕ್ಕಿ ಅದನ್ನು ನುಡಿ ಮಾರ‌್ಪುಗೊಳಿಸಿ ಕಳುಹಿಸುವ ಅನುವಾದಕ ಕತೆಗಾರನೂ ಆಗಿದ್ದಾಗ (ದಿವಾಕರ್ ಪ್ರತಿಭಾಶಾಲಿ ಕತೆಗಾರರೂ ಹೌದು) ಈ ಕತೆಗಳ ಮೂಲಕ ಹುಡುಕಾಟ ನಡೆಸುವುದು ಏನನ್ನು? ಆಯ್ಕೆ ಮಾಡಿಕೊಂಡ ಕತೆಗಳಲ್ಲಿ ಪದೇಪದೇ ಮರುಕಳಿಸುವ ಆಶಯ ಆಕಸ್ಮಿಕವಾಗಿರಲು ಸಾಧ್ಯವಿಲ್ಲವೇ? ಹೀಗೆಂದಾಗ ನಾವು ಬಿಡಿ ಬಿಡಿ ಕತೆಗಳನ್ನು ಓದುತ್ತಿರುತ್ತೇವೆಯೋ, ಅದನ್ನು ನಮ್ಮದೇ ಆದ ರೀತಿಯಲ್ಲಿ ಕಾದಂಬರಿ ಅಧ್ಯಾಯಗಳಂತೆ ಜೋಡಿಸಿಕೊಳ್ಳುತ್ತಿರುತ್ತೇವೆಯೋ? ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಜಾಣ್ಮೆ, ವರದಿ, ಸುಭಾಷಿತ, ಅಸಾಮಾನ್ಯ ಎಂಬ ಭ್ರಮೆ ಹುಟ್ಟಿಸಿ ಒಳಗನ್ನು ಕೊಂಚವೂ ತಟ್ಟದ ಹೇಳಿಕೆಗಳು, ಗುಟ್ಟುಗಳು, ಸಿಕ್ಕುಗಳು; ತಿಜೋರಿ ಒಳಗೆ ಏನೋ ಇದೆ ಎಂದೆನ್ನಿಸಿ ಅದರ ಕೀಲಿ ಕೊಡಲು ಸತಾಯಿಸುವ ಕತೆಗಳು, ಚಮತ್ಕಾರಗಳು, ತಾತ್ತ್ವಿಕ ಜಿಜ್ಞಾಸೆಗಳು, ಕಲಾ ವಿದ್ಯಾರ್ಥಿ ಪಾಲಿನ ಗಣಿತದ ಲೆಕ್ಕಗಳು, ಕಣ್ಕಟ್ಟುಗಳು, ಅಟಮಟಗಳು, ದಿಗ್ಭ್ರಮೆಗಳು, ಹೊಸ ಕಾಣ್ಕೆಗಳು, ನಿಟ್ಟುಸಿರು, ಮೌನ, ದಣಿವು- ಹೀಗೆ ಈ ಕತೆಗಳ ಕಟ್ಟು ನಮ್ಮನ್ನು ಕಾಡಿ ಕಂಗೆಡಿಸುತ್ತವೆ.

ಶ್ರೇಷ್ಠ ಬರಹ ಅನುಭವವನ್ನು ಹಲವು ಮಟ್ಟದಲ್ಲಿ ಆಗುವ ಕ್ರಿಯೆಯಾಗಿಸುತ್ತದೆ. ನಿಮ್ಮನ್ನು ನಂಬಿಸುತ್ತದೆ; ಒಪ್ಪಿಸುತ್ತದೆ. ಇದರಲ್ಲಿ ಕೊಂಚವೂ ಬಿರುಕು, ಬಿಂಕಗಳಿರುವುದಿಲ್ಲ. ಪರದೇಶದ ಕತೆಗಳು ಸಾಧಾರಣೀಕರಣವಾಗುವುದಕ್ಕೆ ಒಂದು ಉದಾಹರಣೆ ಗಮನಿಸೋಣ. ಜರ್ಮನಿಯ ಯೊಹಾನ್ ಪೀಟರ್ ಹೆಬೆಲ್ ಬರೆದ 'ವಿಚಿತ್ರ ಮನುಷ್ಯ' ಕತೆಯ ಮನುಷ್ಯ 75 ವರ್ಷ ಪ್ಯಾರಿಸ್ ಬಿಟ್ಟು ಎಲ್ಲೂ ಹೋಗಿರುವುದಿಲ್ಲ. ಹುಚ್ಚನೂ ಅಲ್ಲ ಬೆಪ್ಪನೂ ಅಲ್ಲ, ಕಾಲಿಲ್ಲದವನೂ ಅಲ್ಲ , ಹೊರಗಡೆ ಹೋಗಲು ದುಡ್ಡು ಕಾಸು, ಅವಕಾಶ ಇಲ್ಲದವನೂ ಅಲ್ಲ. ಸಂತೋಷ ಕಳೆದುಕೊಂಡವನೂ ಅಲ್ಲ. ಆ ವಿಚಿತ್ರ ವ್ಯಕ್ತಿಯನ್ನು ಕರೆಸಿಕೊಂಡ ರಾಜ, ಇನ್ನು ಮೇಲೆ ಅನುಮತಿ ಇಲ್ಲದೆ ಈ ಊರಿಂದಾಚೆ ಕಾಲಿಡಬೇಡ ಎಂದು ಆಜ್ಞೆ ಮಾಡುತ್ತಾನೆ. ನಾನೀರೋದೇ ಹೀಗೆ. ಹೀಗಾಗಿ ಕಾನೂನು ಬಂದೋಬಸ್ತ್ ಏನೂ ಮಾಡದು ಎಂಬ ನಮ್ಮ ನಿರೀಕ್ಷೆ ಬುಡಮೇಲಾಗುತ್ತದೆ. ಆಜ್ಞೆಯಾಗಿದ್ದೇ ತಡ 75 ವರ್ಷದ ವ್ಯಕ್ತಿಗೆ ಯಾತನೆ ಮೊದಲಾಗುತ್ತದೆ. ಊರಿಂದ ಹೊರಗೆ ಹೋಗುವವರೆಲ್ಲ ಭಾಗ್ಯವಂತರಂತೆ ಕಾಣುತ್ತಾರೆ. ಯಾವಾಗಲೂ ಖುಷಿಯಾಗಿದ್ದವನು ಅದನ್ನು ಕಳೆದುಕೊಳ್ಳುತ್ತಾನೆ. ರುಚಿಯಾಗಿರುವುದೆಲ್ಲ ರುಚಿ ಕಳೆದುಕೊಂಡಿದೆ ಎಂದೆನಿಸುತ್ತದೆ. 8-10 ತಿಂಗಳು ಕಳೆದ ಮೇಲೆ ಹೊರಗೆ ಹೋಗಲು ಅಂಗಲಾಚುತ್ತಾನೆ. ಎಲ್ಲರಿಗೂ ದಮ್ಮಯ್ಯಗುಡ್ಡೆ ಹಾಕುತ್ತಾನೆ. ವರ್ಷ ಕಳೆದ ಮೇಲೆ ಮನೆ ಮುಂದೆ ಸಾರೋಟು ಬಂದು ನಿಲ್ಲುತ್ತದೆ. 'ದೊರೆಯೇ ಅದನ್ನು ಕಳುಹಿಸಿ ಎಲ್ಲಿಗಾದರೂ ಹೋಗಿಬನ್ನಿ ಎಂದು ಹೇಳಿದ್ದಾರೆ' ಎಂದು ಹೆಂಡತಿ, ಹಳ್ಳಿಗಾಡಿಗೆ ಹೋಗೋಣ ಎನ್ನುತ್ತಾಳೆ. ಹೊರಗೆ ಹೋಗಲು ತಹತಹಿಸುತ್ತಿದ್ದ ಆ ಮನುಷ್ಯ ತಣ್ಣಗೆ 'ನಾಳೆಯಲ್ಲದಿದ್ದರೆ ನಾಡಿದ್ದು ಹೋದರಾಯಿತು. ಇಷ್ಟಕ್ಕೂ ಹಳ್ಳಿಗಾಡಿಗೆ ಹೋಗಿ ನಾವೇನು ಮಾಡಬೇಕಾಗಿದೆ? ನಮ್ಮ ಪ್ಯಾರೀಸೇ ಸೊಗಸಾಗಿದೆಯಲ್ಲ?' ಎಂದುಬಿಡುತ್ತಾನೆ.

ತನಗೆ ತಾನೇ ವಿಧಿಸಿಕೊಂಡ ನಿರ್ಬಂಧ ಸ್ವಾತಂತ್ರ್ಯದಂತೆ ಕಂಡರೆ ಬೇರೆಯವರು ವಿಧಿಸುವ ಕಟ್ಟುಪಾಡು ಸೆರೆಮನೆಯಂತೆ ಕಾಡತೊಡಗುತ್ತದೆ. ಕಾಲ-ದೇಶ ಬದ್ಧತೆಗಳನ್ನು ಮೀರಿ ಯಾರಿಗೇ ಆದರೂ ಆಗುವ ಅನುಭವವಿದು. ತನಗೆ ಬೇಕಾದಂತೆ ಇರುವ ಮನುಷ್ಯನ ಮೂಲಭೂತ ಪ್ರವೃತ್ತಿಯನ್ನು ಈ ಕತೆ ಅದ್ಭುತವಾಗಿ ಬಿಡಿಸಿಡುತ್ತದೆ. ಆಜ್ಞೆ-ಅಪ್ಪಣೆಗಳ ಪರಿಸರದಲ್ಲಿ ಉಂಟಾಗುವ ಮನಸ್ಸಿನ ಬಿಗಿತಗಳನ್ನು ಅನುಭವಿಸಿದವರಿಗೆ ಅಜ್ಜನ ಇಕ್ಕಟ್ಟು ಮತ್ತು ನಿರಾಳತೆಗಳು ತಮ್ಮನ್ನೇ ಕುರಿತು ಹೇಳಿದಂತೆ ಅನ್ನಿಸುತ್ತದೆ. ಇದೇಕೆ ಹೀಗೆ ಎಂಬ ಪ್ರಶ್ನೆ ಆಲೋಚನೆಯಅಲೆಗಳನ್ನು ಎಬ್ಬಿಸುತ್ತದೆ. ಮನುಷ್ಯ ತನಗೆ ತಾನೇ ಕಟ್ಟುಪಾಡುಗಳನ್ನು ಹಾಕಿಕೊಳ್ಳಬಹುದು. ಆದರೆ ಅದನ್ನು ಯಾವಾಗ ಬೇಕಾದರೂ ಮುರಿಯಬಹುದು ಎನ್ನುವ ಅವಕಾಶವೇ ಅಪರಿಮಿತ ಸ್ವಾತಂತ್ರ್ಯವನ್ನು ಆತನಿಗೆ ಕೊಟ್ಟಿರುತ್ತದೆ. ಸ್ವಾತಂತ್ರ್ಯ ಮತ್ತು ನಿರ್ಬಂಧದ ಅಧಿಕಾರ ಎಂಬುದು ಬೇರೆ ಬೇರೆಯವರಲ್ಲಿ ಹಂಚಿಹೋದಾಗ ಸಮಸ್ಯೆಗಳುಂಟಾಗುತ್ತದೆ. ಹೀಗೆ ಆಲೋಚನೆಗಳ ದಾರಿಗಳನ್ನು ಈ ಕತೆ ತೆರೆಸುತ್ತದೆ.

ಇಲ್ಲಿನ ಬಹುತೇಕ ಕತೆಗಳು ನಿರೂಪಣೆಯಲ್ಲಿ ಪ್ರಜ್ಞಾಪ್ರವಾಹ ತಂತ್ರವನ್ನು ಅನುಸರಿಸುತ್ತವೆ. ಒಂದು ಕ್ಷಣದ ಬೀಸಿನಲ್ಲಿ ಸಂಭವಿಸುತ್ತವೆ. ರಷ್ಯಾದ ಅರ್ಕಾದಿ ಅವೆರ್‌ಚೆಂಕೋ ಬರೆದ 'ಹಾರಿಕೊಂಡು ಹೋದವನು' ಕತೆಯನ್ನು ತಿಳಿಯೋಣ: ಒಂದು ದೊಡ್ಡ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಲ್ಲಿ ಲಂಪಟತನದ ಆರೋಪ ಹೊರಿಸಿ ಯುವಕನೊಬ್ಬನನ್ನು ಓವರ್ ಕೋಟು ತೊಟ್ಟುಕೊಂಡು ಬಲಿಷ್ಠವಾಗಿದ್ದ ವ್ಯಕ್ತಿ, 'ಏನೂ ಮಾಡಿಲ್ಲವಾ? ಒಂದು ಕೊಡ್ತೀನಿ, ತಕ್ಕೋ ಖದೀಮ' ಎಂದು ಯುವಕನನ್ನು ಮೇಲಕ್ಕೆತ್ತಿ ಎಸೆಯುತ್ತಾನೆ. ಆರನೇ ಮಹಡಿಯಿಂದ ಕೆಳಹಂತಸ್ತಿನವರೆಗೆ ಹಾರಿಕೊಂಡು ಬರುವಾತನೊಳಗೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಕತೆ ನಿರೂಪಿಸುತ್ತದೆ. ಕಣ್ಣಿಗೆ ಬೀಳುವ ಕಿಟಕಿಯೊಳಗಿನ ಬೇರೆಬೇರೆಯವರ ಬದುಕುಗಳಿಗೆ ಇವನು ಪ್ರತಿಸ್ಪಂದಿಸುತ್ತಾನೆ. ಪುಸ್ತಕ ಓದುತ್ತಿರುವ ವಿದ್ಯಾರ್ಥಿ, ಹೊಲಿಗೆ ಯಂತ್ರದ ಮುಂದೆ ಕುಳಿತ ಯುವತಿ, ಮಗು ಆಡಿಸುತ್ತಿರುವ ಹೆಂಗಸು, ಆತ್ಮಹತ್ಯೆಗೆ ರೆಡಿಯಾಗುತ್ತಿರುವ ಯುವಕ, ಪ್ರೇಮಿಗಳಿಬ್ಬರ ಸಲ್ಲಾಪ- ಕಣ್ಣಿಗೆ ಬೀಳುತ್ತದೆ.

ಈ ಯುವಕನಿಗೆ ವಿದ್ಯಾರ್ಥಿಯ ಹಾಗೆ ತಾನು ಕಲಿಯಬೇಕೆಂಬ ಹಂಬಲವಾಗುತ್ತದೆ. ನಾಲ್ಕನೇ ಮಜಲೆಯಲ್ಲಿರುವ ಹುಡುಗಿಯನ್ನು ಮದುವೆಯಾಗುವ, ಮೂರನೇ ಮಜಲೆಯಲ್ಲಿ ಕಂಡಂತೆ ಸುಖಶಾಂತಿಯಿಂದ ಸಂಸಾರ ಮಾಡುವಂತೆ ಅನ್ನಿಸುತ್ತದೆ. ಆತ್ಮಹತ್ಯೆಗೆ ಸಿದ್ಧವಾಗಿರುವ ಯುವಕನನ್ನು ನೆನೆದು ಬದುಕಿರುವುದರಿಂದ ಏನೂ ಪ್ರಯೋಜನವಿಲ್ಲವೆಂಬುದನ್ನು ಕಣ್ಣಾರೆ ಕಂಡದ್ದಾಯಿತು ಎಂದು ಯೋಚಿಸಿದ. ತನ್ನ ಉಡ್ಡಯನ ಮುಗಿಸಿಬಿಟ್ಟ- ಫುಟ್‌ಪಾತಿನ ಮೇಲೆ. ಚಪ್ಪಡಿ ಕಲ್ಲೊಂದಕ್ಕೆ ಆತನ ತಲೆ ಬಡಿಯಿತು. ಆತನ ತಲೆಯಲ್ಲಿ ಎಂತಹ ಸಂಕೀರ್ಣ ನಾಟಕ ನಡೆಯಿತು ಎಂಬುದು ಯಾರಿಗೂ ಹೊಳೆಯಲೇ ಇಲ್ಲ ಎಂದು ಕತೆ ಕೊನೆಗೊಳ್ಳುತ್ತದೆ. ಆದರೆ ಓದು ಮುಗಿಸದ ಮೇಲೂ ಈ ಕತೆ ಓದುಗನಲ್ಲಿ ಮುಂದುವರಿಯುತ್ತದೆ. ಸಾವಿನತ್ತ ವೇಗವಾಗಿ ದೂಡಲ್ಪಟ್ಟವನ ಆತ್ಮಜ್ಞಾನ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ಸಾವೆಂಬ ನಿಲ್ದಾಣದಲ್ಲಿ ಆತನ ನಿರ್ಧಾರಗಳೂ ಒಂದು ನಿಲುಗಡೆಗೆ ಬರುತ್ತವೆ.

ಒಳ್ಳೆಯ ಕತೆಗಾರರಾದ ದಿವಾಕರರು ಈ ಕಥಾರಾಶಿಯಲ್ಲಿ ಏನನ್ನು ಹುಡುಕಾಟ ನಡೆಸಿದ್ದಾರೆ ಎಂಬುದಕ್ಕೆ ಆಯ್ಕೆಯ ಕಟ್ಟುಗಳನ್ನು ಗಮನಿಸಿದರೆ ಪದೇಪದೇ ಬಂದು ಹೋಗುವ ಕೆಲವಸ್ತುಗಳಿಂದ ಧೋರಣೆ, ಒಲವು-ನಿಲುವುಗಳನ್ನು ಅಂದಾಜಿಸಿಕೊಳ್ಳಬಹುದು. ಸೃಜನಶೀಲ ವ್ಯಕ್ತಿಯ ಸಾಹಿತ್ಯಕ ಪ್ರಯತ್ನಗಳು ಒಂದು ಗೊತ್ತಾದ ಹುಡುಕಾಟವೇ ಆಗಿರುತ್ತದೆ. ಈ ಕತೆಗಳ ಮೂಲಕ ವೇಗ, ಉದ್ವಿಗ್ನತೆ, ನಿದ್ರೆಗಳೇ ಇಲ್ಲದ ನಗರಗಳ ಯಾಂತ್ರಿಕೃತ ದೈನಿಕದಲ್ಲಿ ನಿರುಮ್ಮಳತೆಯನ್ನು ಅರಸುತ್ತಾರೆ. ರೈಲು ನಿಲ್ಲಿಸಿ ತಲೆ ಮೇಲಿಂದ ಹಾರಿ ಹೋದ ಹ್ಯಾಟನ್ನು ಹುಡುಕಿಕೊಂಡು ಹೋಗುವ ಚಾಲಕನ ಕತೆ ಇದಕ್ಕೆ ನಿದರ್ಶನ. ಅದೇ ರೀತಿ ಸೇಬು ಮರದ ಕೆಳಗೆ ನಿಂತು ಉಸಿರಾಟದ ಖುಷಿ ಅನುಭವಿಸುವವನ ಕತೆ ಅಭಿವೃದ್ಧಿಯ ಭರಾಟೆಯಲ್ಲಿ ನಾವು ಕಳೆದುಕೊಂಡ ಸಂತಸವನ್ನು ಹೇಳುತ್ತವೆ. ಈ ಕಥಾರಾಶಿಯಲ್ಲಿ ಹತ್ತಾರು ಕತೆಗಳು ಆಯಾ ದೇಶದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಗೆ ರೂಪಕಗಳಾಗುವುದು ಕಾಣುತ್ತದೆ.

ಈ ಪುಸ್ತಕದ ಹೊದಿಕೆಯಲ್ಲಿ ಅನಂತಮೂರ್ತಿ, ಅಕ್ಷರ. ನರೇಂದ್ರ ಪೈ, ಟಿ.ಪಿ. ಅಶೋಕ, ವಿವೇಕ ಶಾನಭಾಗ ಅವರ ಮೆಚ್ಚು ನುಡಿಗಳಿವೆ. ಇವೇನೂ ಓದಿಗೆ ನೆರವಾಗುವುದಿಲ್ಲ. 'ಹಾರಿಕೊಂಡು ಹೋದವನು' ಸದಾ ಜತೆಯಲ್ಲಿಟ್ಟುಕೊಳ್ಳಬಹುದು.

* ಕೆ ವೆಂಕಟೇಶ


ಮೂಲ :- http://goo.gl/7fp04A


Monday, April 13, 2015

ಸೀಕ್ರೆಟ್ ಡೈರಿ - ಜೋಗಿ ( ಗಿರೀಶ್ ರಾವ್ )

Secret Dairy - Jogi ( Girish Rao )




ಪುಸ್ತಕದ ಮುನ್ನುಡಿಯಿಂದ 


ನಾವು ಹೇಳಲಾರದ ತಾಳಲಾರದ ಕತೆಗಳನ್ನು ಜೋಗಿ ಹೇಳತೊಡಗಿ...

ಈ ಮಹಾನಗರದ ಮಹಾಸಾಗರದ ಮಧ್ಯೆ ಅವರಿಬ್ಬರೂ ಭೇಟಿಯಾಗುತ್ತಾರೆ.

ಬಹುಶಃ ಹೆಣ್ಣು ಮತ್ತು ಗಂಡು.

ಅವರಿಬ್ಬರೂ ಅಚಾನಕ್ ಸಂಧಿಸಿ, ಪ್ರೇಮದಲಿ ಕನವರಿಸಿ ಇಬ್ಬರೂ ಒಂದು ಸೂರಿನಡಿ ಸೇರುವ ತೀರ್ಮಾನಕ್ಕೆ ಬರುತ್ತಾರೆ. ಯಾವುದೋ ವಾಹನವನ್ನೇರಿ, ಅವಳಿರುವ ಅಪಾರ್ಟ್‌ಮೆಂಟ್‌ಗೆ ಇಬ್ಬರೂ ಬರುತ್ತಾರೆ. 

ಸಮಾಗಮವಾಗುತ್ತದೆ.

ಎಚ್ಚರವಾದಾಗ ಕಾಫಿ ಕುಡಿಯಬೇಕೆಂದು ತುಂಬ ಅನ್ನಿಸಿ, ಅವನು ಹಾಲು ತರುತ್ತೇನೆಂದು ಹೊರಡುತ್ತಾನೆ.

ಕೆಳಗೆ ಬಂದು ಹಾಲು ತೆಗೆದುಕೊಂಡು ವಾಪಾಸ್ ಹೊರಡಬೇಕು ಅಂದಾಗ ಅವನು ಒಂದು ಕ್ಷಣ ಬೆಚ್ಚಿ ನಿಲ್ಲುತ್ತಾನೆ.

ಅವನು ಅವಳ ಹೆಸರು ಕೇಳಲಿಲ್ಲ, ಅವರಿರುವ ಅಪಾರ್ಟ್‌ಮೆಂಟ್ ಹೆಸರು ಗೊತ್ತಿರಬಹುದಾದರೂ ಯಾವ ಫ್ಲೋರ್‌ ಅಂತ ಗೊತ್ತಿಲ್ಲ, ವಿಚಾರಿಸುವುದಕ್ಕೆ ವಿಳಾಸವಿಲ್ಲ, ಸಂಪರ್ಕಿಸುವುದಕ್ಕೆ ನಂಬರ್ ಇಲ್ಲ.

ಹೀಗೆ ಈ ಕಡೆ ಹಾಲು ಹಿಡಿದುಕೊಂಡು ನಿಂತ ಅವನು, ಆ ಕಡೆ ಕಾಫಿಗಾಗಿ ಹಾಲು ತರಲಿರುವ ಇವನಿಗಾಗಿ ಕಾದು ಕುಳಿತ ಅವಳು..

-ಮಹಾನಗರದ ಕತೆಗಳು ಅಂತೇನೋ ಕಥಾಮಾಲಿಕೆ ಬರೆಯಲು ಹೊರಟಿದ್ದ ಜೋಗಿ, ಅದರಲ್ಲೊಂದು ಕತೆ ಅಂತ ಇದನ್ನು ಒಮ್ಮೆ ಹೇಳಿದ್ದರು. ನಮ್ಮ ಮಹಾನಗರದ ಬದುಕಿನ ವಿಚಿತ್ರ ಅಪರಿಚಿತತೆಯನ್ನು ಸಣ್ಣಗೆ, ತಣ್ಣಗೆ, ಶಾಕ್ ಆಗುವಂತೆ ಕಟ್ಟಿಕೊಟ್ಟ ಕತೆ ಅದು. ಅವರ ಒಡನಾಟದಲ್ಲಿ ಕೇಳಿದ ಅದೆಷ್ಟೋ ಕತೆಗಳಲ್ಲಿ ಇದೂ ಒಂದಷ್ಟೇ. ಅವರ ಅಂಕಣ ಬರಹಗಳೂ ಇಂಥದೇ ಬರೆಯದ, ಬರೆದುಬಿಟ್ಟರೆ ಬಹುಶಃ ಅದು ಕತೆ ಅಂತಲೇ ಅನಿಸದ ಆದರೆ ಕಥನಕ್ಕಿರುವ ತೀವ್ರತೆಯ ಗುಣವನ್ನೊಳಗೊಂಡ ಬರಹಗಳ ಸಂಕಲನ, ಸಂಕಥನ.

ನಿಕಟ ಎಂದು ಧೈರ್ಯವಾಗಿ ಕರೆಯಬಹುದಾದ ಅವರ ಒಂದು ಒಡನಾಟ ಈಚೆಗೆ ಮೂರು ವರ್ಷಗಳಿಂದ ನನಗೆ ಸಿಕ್ಕಿದೆ. ಆವರೆಗೆ ಅವರನ್ನು ಅeತ ಓದುಗನಾಗಿ ನೋಡಿನೋಡಿ, ಅವರನ್ನು ಭೇಟಿಯಾದಾಗ ಕೊಂಚ ಭಯಭಕ್ತಿ, ಮುಕ್ತವಾಗಿ ಮಾತಾಡುವುದಕ್ಕೆ ಹಿಂಜರಿಕೆಗಳೆಲ್ಲಾ ಇದ್ದವಾದರೂ ನಿಧಾನವಾಗಿ ಅದನ್ನೆಲ್ಲಾ ಕಳೆಯುತ್ತಾ ಹೋಗಿದ್ದು ಜೋಗಿ ಅವರೊಳಗೆ ಇರುವ ಒಬ್ಬ ಅಪ್ರತಿಮ ಕತೆಗಾರನಿಂದಾಗಿ. 'ಇವರಿಗೇ ಸಿಗೋದು ಹೇಳಿ', 'ಕತೆ ಕಟ್ಟಿ ಹೇಳುತ್ತಿರಬಹುದಾ' ಅಂತೆಲ್ಲಾ ಅಂದುಕೊಳ್ಳುತ್ತಾ, ಅವರು ಭೇಟಿಯಾಗುವ ಸ್ವಾರಸ್ಯಗಳಲ್ಲಿ ಕೆಲವನ್ನು ನಾವೇ ಕಣ್ಣಾರೆ ಕಂಡಮೇಲೆ ಒಪ್ಪಿಕೊಳ್ಳಲೇಬೇಕಾಯಿತು. ಆ ಘಟನೆಗಳನ್ನು ಅವರು ಸ್ವಾರಸ್ಯಕರವಾಗಿ ನಿರೂಪಿಸುವ ರೀತಿ, ಅವರ ಜೀವನಪ್ರೀತಿಗಳಂತೆ ಜೋಗಿ ಅವರ ಸಂಕಲನಗಳೂ ಪುಟಪುಟಕ್ಕೂ ನವನವೀನ, ಹೆಚ್ಚು ಹಾರ್ದಿಕ.

ಅಷ್ಟಕ್ಕೂ ಅಂಕಣಬರಹ ಎಂದರೇನು? ಚಿಕ್ಕಂದಿನಿಂದ ನಾವು ನೋಡುತ್ತಾ , ಓದುತ್ತಾ ಬಂದ ಅಂಕಣಗಳೆಲ್ಲಾ ಕತೆಯಾಗದ, ಕವಿತೆಯಾಗದ, ಲೇಖನವಾಗದ, ನುಡಿಚಿತ್ರವಾಗದ, ಆತ್ಮಚರಿತೆಯಾಗದ ಒಂದು ವಿಚಿತ್ರ ಬರಹ ಪ್ರಕಾರ. ನಮ್ಮ ಓದಿನ ಪ್ರಾರಂಭದ ದಿನಗಳಲ್ಲಂತೂ ಇಂಥ ಅಂಕಣಗಳೆಲ್ಲಾ ನಿರ್ಗುಣ, ನಿರಾಕಾರವಾಗಿ ಕಾಣುತ್ತಿದ್ದಾಗ ಅದಕ್ಕೊಂದು ಶಬ್ದ, ರುಚಿ, ವಾಸನೆಗಳನ್ನು ಕೊಡಲಾರಂಭಿಸಿದ್ದೇ ಆಮೇಲಾಮೇಲೆ ಬರೆಯತೊಡಗಿದ ಜಯಂತ್ ಕಾಯ್ಕಿಣಿ ಮೊದಲಾದವರು. ಆ ಮಧ್ಯೆ 'ಜಾನಕಿ' ಎಂಬ ಗುಪ್ತನಾಮದಲ್ಲಿ ಜೋಗಿ ಬರೆದ ಅಂಕಣಗಳೆಲ್ಲಾ ಅಂಕಣದ ವ್ಯಾಖ್ಯೆ, ವ್ಯಾಪ್ತಿಗಳನ್ನು ಹಿಗ್ಗಿಸಿದವು. ಯಾವುದೋ ಫಿನಾಯಿಲ್ ವಾಸನೆಯ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ ಹುಡುಗಿಗೆ ಮಲ್ಲಿಗೆ ತಂದುಕೊಡುವವನೊಬ್ಬನ ಕತೆಯನ್ನು ಅದೇ ಜಾನಕಿಯಾಗಿ ಜೋಗಿ ಬರೆದಿದ್ದ ಶೀರ್ಷಿಕೆ ನೆನಪಿಲ್ಲದ ಅಂಕಣ ಇವತ್ತಿಗೂ ಶತಮಾನದ ಅತ್ಯುತ್ತಮ ಸಣ್ಣಕತೆಯಂತೆ ನೆನಪಲ್ಲುಳಿದಿದೆ. ಅಡೂರರ 'ನಿಳಲ್‌ಕುತ್ತು' ಸಿನಿಮಾ ಇವತ್ತಿಗೂ ನೋಡಿಲ್ಲವಾದರೂ ಜೋಗಿಯದೇ ಕತೆಯೇನೋ ಅನ್ನುವಷ್ಟು ಆ ಸಿನಿಮಾವನ್ನಿಟ್ಟುಕೊಂಡು ಬರೆದ ಅಂಕಣ ನಮ್ಮೊಳಗೆ ಅಜರಾಮರವಾಗಿದೆ. ಕಿರಿಯ ರಾಣಿಯಾಗಿ ಅಂತಃಪುರಕ್ಕೆ ಅಡಿಯಿಟ್ಟವಳಿಗಿದ್ದ ಆಸ್ಥಾನದ ಕಾವಲುಗಾರನೊಡನೆಯ ಪ್ರೇಮಸಲ್ಲಾಪದ ಕತೆ ಹಾಗೇ ಉಳಿದಿದೆ. ಅವರ ಆ ಅಂಕಣ ಬರಹಗಳೆಲ್ಲಾ ಕತೆಯ ರೂಪದಲ್ಲಿ ನಮ್ಮೊಳಗೆ ಇಳಿದದ್ದಕ್ಕೇ ಏನೋ, ಅದು ನಮ್ಮೊಳಗೇ ಶಾಶ್ವತ ಉಳಿದಿರುವುದು. ಆ ಮಟ್ಟಿಗೆ ಅವರ ಅಂಕಣಗಳೆಲ್ಲಾ ಒಂದೊಂದೂ ಕತೆಗಳೇ, ಅಂಕಣ ಬರಹ ಸಂಕಲನಗಳೂ ಕಥಾ ಸಂಕಲನಗಳೇ.

ಇಂಥ ಹೊತ್ತಿಗೆ ಅವರು ಉದಯವಾಣಿಗಾಗಿ ವಾರವಾರ ಬರೆದ ಎರಡು ಥರದ ಅಂಕಣಗಳ ಸಂಕಲನ ಇಲ್ಲಿದೆ. ಒಂದು, ನಮಗೆಲ್ಲಾ ಸದಾ ಅಚ್ಚರಿ, ಕುತೂಹಲ, ಬೆರಗನ್ನು ಜೀವಂತವಾಗಿಟ್ಟ ಗೂಢಚಾರ ವೃತ್ತಿಯ ಬಗೆಗಿನದ್ದು. ಇನ್ನೊಂದು ನಿತ್ಯ ಬದುಕಿನ ಸಂಭ್ರಮ, ಸಂಕಟಗಳ ಬಗೆಯದು. ಅವರೂರಿನ ಕಡೆ ಗೂಢಚರ ವೃತ್ತಿ ಮಾಡುತ್ತಿದ್ದವರ ಸಂಪಾದನೆ, ಆ ವೃತ್ತಿ ಕ್ರಮೇಣ ಮಾಸುತ್ತಿದ್ದ ಹಾಗೇ ಆ ವೃತ್ತಿಯೊಂದಿಗರು ನಿರುದ್ಯೋಗ ಮತ್ತು ನಿರುಪಾಯತೆಗೆ ಸಂದದ್ದನ್ನು ಇತಿಹಾಸ, ಜಾಗತಿಕ ಯುದ್ಧ, ಸಿನಿಮಾಗಳ ವಿವರಗಳೊಂದಿಗೆ ಕಟ್ಟಿಕೊಟ್ಟ ವಿಶಿಷ್ಟ ವಿಭಾಗ-ಸೀಕ್ರೆಟ್ ಡೈರೀಸ್.

ಜೋಗಿ ಅವರ ಕತೆಗಾರಿಕೆ, ಒಂದು ಕತೆಯನ್ನು ನಮ್ಮ ಬದುಕಿನ ಸಂದಿಗ್ಧಗಳ ಜೊತೆ ಸಂತುಲಿತಗೊಳಿಸುವ ಕಲೆಗಾರಿಕೆಯೇ ಅವರ್ಣನೀಯ. ಮಾಯಾಕನ್ನಡಿ ಅನ್ನುವ ಅಂಕಣ ಬರಹ ವಿಭಾಗದಲ್ಲಿ ಅಂಥ ಸಾಕಷ್ಟು ಕತೆಗಳು ಎದುರಾಗುತ್ತವೆ. ಅದರಲ್ಲೊಂದು ಬಂಗಾರಬಣ್ಣದ ಹೂವನ್ನು ತಂದುಕೊಡು ಅಂತ ಪ್ರಿಯತಮೆ ಪ್ರಿಯಕರನನ್ನು ಕೇಳುತ್ತಾಳೆ. ಅವನು ಇದೋ ತಂದೆ ಅಂತ ನೀರಿಗೆ ಜಿಗಿಯುತ್ತಾನೆ. ವರ್ಷಾನುಗಟ್ಟಲೆ ಆ ಹೂವಿಗಾಗಿ ಅಲೆದು, ಅದು ಸಿಕ್ಕಿ, ಮತ್ತೆ ಮರುಪಯಣ ಬೆಳೆಸಿ ನೀರಿಂದೆದ್ದು ಅವಳ ಮುಂದೆ ಅವನು ಹೂ ಹಿಡಿದರೆ ಅವಳು ಮುದುಕಿ. ಬೆಚ್ಚಿ ತನ್ನ ಮೈ ನೋಡಿಕೊಂಡರೆ ತೋಳಲ್ಲಿ ನಿರಿಗೆ, ಮೈಯೆಲ್ಲಾ ಸುಕ್ಕು. ಹೂ ಕೇಳಿದವಳು ಅವಳಲ್ಲ ಅಂತ ಇವನಿಗೂ, ಹೂ ತರಹೋದವನು ಇವನಲ್ಲ ಅಂತ ಅವಳಿಗೂ ಅನಿಸಿ ಮತ್ತೆ ಹೂ ಕೊಯ್ಯುವ ಆಟ ಪ್ರಾರಂಭಿಸುತ್ತಾರೆ ಅವರು. ನಮ್ಮ ದಾಂಪತ್ಯವೆಂಬ ಪಠ್ಯದ ಅನುಪಮ ಅಸಮಾಧಾನಕ್ಕೆ ಇದಕ್ಕಿಂತ ಸೊಗಸಾದ ರೂಪಕ ಇನ್ನೊಂದಿರಲಾರದೇನೋ?

ಅದೇ ಥರ ಇನ್ನೊಂದು ಕತೆ. ಒಂದು ರೈಲ್ವೇ ಸ್ಟೇಷನ್‌ನಲ್ಲಿ ಕಾಯುತ್ತಾ ಕುಳಿತಿದ್ದಾಗ ರೈಲಿನಲ್ಲಿರುವ ಒಬ್ಬ ವಯಸ್ಸಾದ ಹೆಂಗಸು ಅವನಿಗೆ ಕಾಣಿಸುತ್ತಾಳೆ. ಅವಳ ಮುಖದ ಮೇಲೆ ಬಿಸಿಲು ಬಿದ್ದು ಅವಳು ತನ್ನ ತಾಯಿಯಂತೆ ಅವನಿಗೆ ತೋರಿಬಿಡುತ್ತಾಳೆ. ಅವನು ಸಂಭ್ರಮಗೊಂಡು ರೈಲು ಏರುತ್ತಾನೆ. ಅಲ್ಲಿರುವ ನೂರಾರು ಮಂದಿಯ ಮಧ್ಯೆ ಆ ತಾಯಿಯಂತೆ ಕಂಡವಳಿಗಾಗಿ ಹುಡುಕಾಡುತ್ತಾನೆ, ಆದರೆ ಸಿಗುವುದೇ ಇಲ್ಲ. ಯಾವ ಮುಖದ ಮೇಲೆ ಯಾವಾಗ ಅದೇ ಪ್ರಮಾಣದ ಬಿಸಿಲು ಬೀಳುತ್ತದೋ, ಅವನು ನೋಡಿದಾಗ ಸುರಿಸಿದ ಮುಖಭಾವವೇ ಅವಳಲ್ಯಾವಾಗ ಪುಟಿಯುತ್ತದೋ ಆಗಷ್ಟೇ ಅವನಿಗೆ ಆ ತಾಯಿ ಸಿಗುವುದಕ್ಕೆ ಸಾಧ್ಯ. ನಾವು ಕಲ್ಪಿಸಿಕೊಂಡದ್ದೇನು, ಕಾಡಿದ್ದೇನು, ಬೇಡಿದ್ದೇನು, ಕಟ್ಟಕಡೆಗೆ ಪಡೆದಿದ್ದೇನು ಎನ್ನುವುದನ್ನ ಈ ಬಯಸಿದ ಕತೆ ಮತ್ತು ದೊರೆಯದ ಕತೆ ಹೇಳುತ್ತದೆ.

ಜೋಗಿ ಅವರ ಅಂಕಣ ಸಂಕಲನಗಳ ಇನ್ನೊಂದು ವಿಶೇಷತೆ, ಅವರ ಭಾಷೆ. ಏನೂ ವಿಶೇಷದ್ದಲ್ಲ ಎನ್ನುವಂಥ ಘಟನೆಯನ್ನೋ, ಹೇಳಿಕೆಯನ್ನೋ, ಕತೆಯನ್ನೋ ಹೇಳುತ್ತಾ ಅಕ್ಷರಪಯಣ ಶುರುಮಾಡುವ ಅವರು ಅದನ್ನು ಮುಗಿಸುವಾಗ ಇನ್ನೇನೋ ಆದ ಮಹತ್ವದ ಬದಲಾವಣೆ ಅವರ ಬರಹದೊಳಗೂ, ಓದುಗರಾದ ನಮ್ಮೊಳಗೂ ಆಗಿರುತ್ತದೆ. ಅದು ಬರೆಯುತ್ತಾ ಅವರಿಗೂ, ಓದುತ್ತಾ ನಮಗೂ ಏಕಕಾಲಕ್ಕೆ ಜ್ಞಾನೋದಯ, ದರ್ಶನ.

ಇಲ್ಲಿರುವ ಎಲ್ಲ ಅಂಕಣಗಳ ಮೊತ್ತಮೊದಲ ಓದುಗ ನಾನೆಂಬ ಹೆಮ್ಮೆಯೊಂದಿಗೆ, ಇಷ್ಟದ ಲೇಖಕನನ್ನು ನೀವು ಸಮೀಪಿಸಿದಷ್ಟೂ ಬಹಳ ಪ್ರಿಡಿಕ್ಟಿಬಲ್ ಹಾಗೂ ಬೋರಿಂಗ್ ಅನಿಸುತ್ತಾನೆಂದು ಕೇಳಿ ನಂಬಿ, ಅನುಭವಿಸಿ ನೊಂದಮೇಲೆ ಜೋಗಿ ಹಾಗಲ್ಲ ಎಂಬ ಅರಿವು ಮೂಡಿದ ಸಮಾಧಾನದೊಂದಿಗೆ, ಅವರು ಎದುರಾಗುವಾಗ ಹೊತ್ತು ತರುವ ನಗು ಮತ್ತು ಜೀವಪ್ರೀತಿಯನ್ನು ನಮಗೂ ಹಂಚಿದರಲ್ಲಾ ಅನ್ನುವ ಸಾರ್ಥಕತೆಯೊಂದಿಗೆ ಈ ಮಾತುಗಳು.
ಅವರ ಈ ಎಲ್ಲಾ ಕತೆಗಳು ಇದೀಗ ನಿಮ್ಮದು.

-ವಿಕಾಸ ನೇಗಿಲೋಣಿ


Wednesday, April 8, 2015

ಮಲಯಾಳಂನ ಶ್ರೇಷ್ಠ ಕಥೆಗಳು - ಅನುವಾದಕರು: ಗಂಗಾಧರನ್ ಕೆ ಕೆ

Malayalamna Shreshta Kathegalu - K K Gangatharan 



ಸಣ್ಣ ಕಥೆಗಳೇ ಹಾಗೆ ಯಾವುದೇ ಒಂದು ವಿಷಯವನ್ನು ಬೇಸರಪದಡಿಸದೆ ನಮಗೆ ಒಳ್ಳೆ ಪಾಠವನ್ನು ಕಲಿಸುತ್ತವೆ. ಕನ್ನಡದಲ್ಲಿ ಮಾಸ್ತಿ ಬರೆದ ಸಣ್ಣ ಕಥೆಗಳು, ಚಿತ್ತಾಲರು ಕಲಿಸಿದ ವಿಷಯಗಳನ್ನು ಈಗಿನ ಯಾವ ಕಾದಂಬರಿಕಾರನು ಕಲಿಸಲಾರ. ಅದೇ ರೀತಿ ನಮ್ಮ ಬಯಲು ಸೀಮೆ ಕತೆಗಳಲ್ಲಿ ಬರುವ ಸಮಾಜ ಮತ್ತು ಜನಗಳ ಕೆಲಸ ಸಂಸ್ಕೃತಿ ಒಂದು ರೀತಿಯಲ್ಲಿ ಒಂದೇ ಆಗಿರುತ್ತಾವೆ, ಬರವಣಿಗೆ ಮತ್ತು ವಿಶ್ಲೇಷಣೆ ಬೇರೆ ಯಾದರು ಸ್ಥಳ ಮತ್ತು ಸಂಸ್ಕೃತಿ ಒಂದೇ ಆಗಿರುತ್ತವೆ. ಕನ್ನಡದ ಕತೆಗಳಲ್ಲಿ ರೊಟ್ಟಿ, ಚಟ್ನಿ, ಅನ್ನ ವಸ್ತುವಾಗಿ ಬಂದರೆ ಉತ್ತರ ಭಾರತದ ಕತೆಗಳಲ್ಲಿ ಸಮೋಸ, ಪರಾಟ ಇದ್ದರ ಕೇರಳದಲ್ಲಿ ಬಿರ್ಯಾನಿ, ಮೀನು ಕತೆಗಳ ಒಂದು ಅಗವಾಗಿ ಬಿಡುತ್ತವೆ. 

'ಗಂಗಾಧರನ್' ರವರು ಮಲಯಾಳಂನ ಕೆಲವು ಕಥೆಗಳನ್ನು ವಿವಿಧ ಲೇಖಕರಿಂದ ಆಯ್ದು  ಅನುವಾದಿಸಿ ಪುಸ್ತಕವಾಗಿ ಪ್ರಕಟಿಸಿದ್ದಾರೆ. "ಮಲಯಾಳಂನ ಶ್ರೇಷ್ಠ ಕಥೆಗಳು" ಪುಸ್ತಕದಲ್ಲಿ ಒಟ್ಟು ೨೫ ಕಥೆಗಳಿವೆ. ಇಲ್ಲಿ ಎಲ್ಲ ೨೫ ಕಥೆಗಳು ಶ್ರೇಷ್ಠ ಅಲ್ಲದಿದ್ದರೂ ಬಹುತೇಕ ಕಥೆಗಳು ತುಂಬ ಚೆನ್ನಾಗಿವೆ. ಇಲ್ಲಿ "ಬಂಗಾರಿ" ಕತೆಯಲ್ಲಿ ಬರುವ ಪಾತ್ರಗಳನ್ನು ವಿವರಿಸುವ ರೀತಿ ಮತ್ತು ಅದರ ಸುತ್ತ ಕಥೆ ಕಟ್ಟಿರುವ ರೀತಿ ತುಂಬ ಚೆನ್ನಾಗಿದೆ. ಬಂಗಾರಿ ಕಥೆ ಶುರುವಾಗುವುದು "ಕವಿಗಳೆಲ್ಲಾ ಸುತ್ತುವರಿದು ಮುಕ್ತ ಮನಸ್ಸಿನಿಂದ ಹೊಗಳುವಂತಹ ಸೌಂದರ್ಯ ಸಂಪತ್ತು, ಅಂಗಸೌಷ್ಟವಗಳು ಸಮ್ಮಿಲನಗೊಂಡ ಆಕರ್ಷಕ ವ್ಯಕ್ತಿತ್ವ ನನ್ನ ಬಂಗಾರಿಯದು ಎಂದೇನಾದರೂ ನೀವು ನಂಬಿದರೆ ಅದೊಂದು ದೊಡ್ಡ ತಪ್ಪಾದೀತು. ಸೌಂದರ್ಯೋಪಾಸಕರಾಗಿರುವ ನಮ್ಮ ಕವಿಪುಂಗವರಾರು ಬಂಗಾರಿಯನ್ನು ಕಂಡಿರಲು ಸಾಧ್ಯವಿಲ್ಲ"

ಅದೇ ರೀತಿ "ತಪ್ಪು ಯಾರದು" ಕತೆಯಲ್ಲಿ ಅನಿರೀಕ್ಷಿತ ರಜೆ ಸಿಕ್ಕಾಗ ಮಧ್ಯನವೇ ಮನೆಗೆ ಹೋದಾಗ ಮಗುವಿನ ಅಸಾಯಕ ಮತ್ತು ಕರುಣಾಜನಕ ದೃಶ್ಯ, ಗೋಡೆ ಕತೆಯಲ್ಲಿ ಬರುವ ಅಂತಸ್ತಿನ ವಿಚಾರ ಗಾಳದಲ್ಲಿ ಸ್ನೇಹಿತನಿಗೆ ಮೋಸ ಮಾಡುವ ಚಡ್ಡಿ ದೋಸ್ತು, .......... ಹೀಗೆ ಒಂದೊಂದು ಕತೆ ಒಂದೊಂದು ರೀತಿ ನಮನ್ನು ಒಂದು ಸಂಸ್ಕೃತಿಗೆ ಮತ್ತು ಒಂದು ಜನಾಂಗಕ್ಕೆ ಬಾಗಿಲನ್ನು ತೆರೆಸುತ್ತದೆ.

ಈ ಪುಸ್ತಕ ಇಲ್ಲಿ ಕೊಳ್ಳಬಹುದು




Wednesday, February 25, 2015

ಆಡುಕಳ - ಶ್ರೀಧರ ಬಳಗಾರ

Aadu Kala - Sridhar Balagaara 




ಇಂದ : ಕನ್ನಡ ಪ್ರಭ ದಿನಪತ್ರಿಕೆ

ವಿಮರ್ಶೆ - ವಾಸುದೇವ ಶೆಟ್ಟಿ 


ಸ್ವಾರ್ಥವು ಮನುಷ್ಯನ ಕ್ರಿಯಾಶಕ್ತಿಯನ್ನು, ಮನುಷ್ಯತ್ವವನ್ನು ಹೇಗೆ ಕಳೆದುಬಿಡುತ್ತದೆ, ವ್ಯಕ್ತಿಯ ಸ್ವಾತಂತ್ರ್ಯ ಹೇಗೆ ಹರಣವಾಗುತ್ತ ಹೋಗುತ್ತದೆ ಎಂಬುದನ್ನು ಶ್ರೀಧರ ಬಳಗಾರ ಅವರು ತಮ್ಮ ‘ಆಡುಕಳ’ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 

ಯಲ್ಲಾಪುರ ತಾಲೂಕಿನ ಬಿದ್ರಳ್ಳಿಯ ಮಣ್ಮನೆಯ ಕೃಷ್ಣಪ್ಪ ಮತ್ತು ದಶರಥ ಅಣ್ಣ ತಮ್ಮಂದಿರು. ದಶರಥ ತನ್ನ ಪಿತ್ರಾರ್ಜಿತ ಸ್ವತ್ತನ್ನು ಹಿಸ್ಸೆ ಮಾಡಿಕೊಂಂಡು, ಬಿದ್ರಳ್ಳಿಯ ಸಂಪರ್ಕಹೀನ ದ್ವೀಪದಂತೆ ಇದ್ದ ಆಡುಕಳದ ಆಸ್ತಿಯನ್ನು ಪಡೆದುಕೊಂಡ. ಹವ್ಯಕರಾದ ಇವರಿಗೆ ಕೃಷಿಯಲ್ಲಿ ಪ್ರೀತಿ ಇತ್ತು. ಆಡುಕಳದ ಪ್ರಶಾಂತ ಪರಿಸರ ಸ್ವಭಾವತಃ ನಿಸ್ಸಂಗಿಯಾಗಿದ್ದ ದಶರಥನಿಗೆ ಖುಷಿ ತಂದಿತ್ತು. ಆತನ ಕೃಷಿಗೆ ನೆರವಾಗಲೆಂದು ಅವರ್ಸಾ ಕಡೆಯ ಗಟ್ಟಿಮುಟ್ಟಾದ ಹೆಂಗಸು ಸಾವಿತ್ರಿಯನ್ನು ತಂದು ಮದುವೆ ಮಾಡಲಾಗಿತ್ತು. ಕೆಲವು ವರ್ಷದ ಸಂಸಾರದ ಬಳಿಕ ಸಾವಿತ್ರಿಗೆ ಮುಖದಲ್ಲಿ ಮೀಸೆ, ಗಡ್ಡ ಮೂಡಿ ಮನೆಯಿಂದ ಹೊರಬೀಳದಂತೆ ಆದಳು ಅವಳು. ಜನರ ಕುತೂಹಲದ ಪತ್ತೇದಾರಿತನ ಸಹಿಸದೆ ಅವಳು ಒಂದು ದಿನ ಮನೆ ಬಿಟ್ಟು ಯಾರಿಗೂ ಸಿಗದಂತೆ ಮಾಯವಾಗಿಬಿಡುತ್ತಾಳೆ. ಹೀಗೆ ಮಕ್ಕಳಿಲ್ಲದೆ ಒಂಟಿ ಜೀವನ ಸಾಗಿಸುತ್ತಿದ್ದ ದಶರಥನ ಫಲವತ್ತಾದ ಆಸ್ತಿಯ ಮೇಲೆ ಕೆಲವರ ಕಣ್ಣು ಬೀಳುತ್ತದೆ.

ಅವರಲ್ಲಿ ಅವನ ಅಣ್ಣ ಕೃಷ್ಣಪ್ಪ ಮತ್ತು ಅವನ ಹಿರಿಯ ಮಗ ಸೂರಣ್ಣ, ಖಾನಾವಳಿಯ ಗಂಗಣ್ಣ, ಮದ್ಗುಣಿ ಡಾಕ್ಟರು ಹೀಗೆ ಹಲವರು. ಆಡುಕಳದ ಒಂಟಿ ಮನೆಯಲ್ಲಿ ಏಕಾಂಗಿಯಾಗಿಯೇ ಉಳಿದ ದಶರಥನ ಮನೆಯನ್ನು ಕಳವು ಮಾಡಲು ಬಂದವರು ಏನೂ ಸಿಗದೆ ಸಿಟ್ಟಿನಿಂದ ಅವನನ್ನು ಬೆತ್ತಲುಗೊಳಿಸಿ ಒಂದು ಕಂಬಕ್ಕೆ ಕಟ್ಟುತ್ತಾರೆ. ಆತನ ಎಮ್ಮೆಯನ್ನು ಹೊಡೆದುಕೊಂಡು ಹೋಗುವ ಮೊದಲು ಅದರ ಕರುವನ್ನು ಅದೇ ಕಂಬಕ್ಕೆ ಕಟ್ಟಿ ಹೋಗುತ್ತಾರೆ. ಆ ಎಮ್ಮೆಯ ಕರುವು ತಾಯಿಯ ಮೊಲೆಯೆಂದು ದಶರಥನ ಶಿಶ್ನವನ್ನು ಸೀಬಿದ್ದಲ್ಲದೆ ಹಾಲು ಸಿಗದ್ದಕ್ಕೆ ತಲೆಯಿಂದ ಗುದ್ದಿ ಅವನ ಮರ್ಮಾಂಗವನ್ನು ಘಾಸಿಗೊಳಿಸುತ್ತದೆ. ಹೆಂಡತಿಯಿಲ್ಲದ ದಶರಥ ನಪುಂಸಕನೂ ಆಗಿಬಿಡುತ್ತಾನೆ. 

ಅವನನ್ನು ಆಸ್ಪತ್ರೆಗೆ ಸೇರಿಸಿ ಉಪಚರಿಸಿದವನು ಖಾನಾವಳಿಯ ಗಂಗಣ್ಣ. ದಶರಥ ಮತ್ತೆ ಆಡುಕಳಕ್ಕೆ ಹೋಗದಂತೆ ತನ್ನ ಹೊಟೇಲಿನಲ್ಲಿಯೇ ಒಂದು ರೂಮನ್ನು ಆತನಿಗೆ ಕೊಡುತ್ತಾನೆ. ಆತನ ಈ ಸೇವೆಯ ಹಿಂದೆ ಆಡುಕಳದ ಜಮೀನನ್ನು ಪಡೆದುಕೊಳ್ಳಬೇಕೆಂಬ ಉದ್ದೇಶವಿರುತ್ತದೆ. ಗಂಗಣ್ಣನು ದಶರಥನನ್ನು ಪುಸಲಾಯಿಸಿ ಆಡುಕಳದ ಜಮೀನು ಹೊಡೆದುಕೊಳ್ಳುತ್ತಾನೆ ಎಂಬ ಗುಮಾನಿ ಅಣ್ಣ ಗಂಗಣ್ಣನಿಗೆ ಮತ್ತು ಆತನ ಮಗ ಸೂರಣ್ಣನಿಗೆ ಬಡಿಯುತ್ತದೆ. ದಶರಥನಿಗೆ ತಮ್ಮಲ್ಲಿಯೇ ಬಂದು ಉಳಿಯುವಂತೆ ಅವರು ಸಲಹೆ ನೀಡುತ್ತಾರೆ. ಈ ನಡುವೆ ಆಡುಕಳದಲ್ಲಿ ವಿಲಕ್ಷಣಗಳು ಸಂಭವಿಸುತ್ತವೆ. ಜೇನುಕೊಯ್ಯಲು ಬಂದ ಬಕಾಲ ನಾಪತ್ತೆಯಾಗುತ್ತಾನೆ. ಹಳ್ಳ ಒಡೆದು ಮೀನು ರಾಶಿರಾಶಿಯಾಗಿ ಸಾಯುತ್ತವೆ, ಕಬ್ಬಿನ ಗಾಣ ಮಾಡಿದಾಗ ನೊಣಗಳು ಕಾಡುತ್ತವೆ. ತೋಟದ ಕೆಲಸಕ್ಕಿದ್ದ ಹುಮಾಟಿ ಇದೆಲ್ಲ ಯಕ್ಷಿಣಿಯ ಕಾಟ ಎಂದು ಸುದ್ದಿ ಹಬ್ಬಿಸಿದ. ಈ ನಡುವೆ ಹುಮಾಟಿಯ ಹೆಂಡತಿ ಕಾಮಾಕ್ಷಿಗೆ ಮೈಮೇಲೆ ದೇವಿ ಬರುವುದು ಶುರು ಆಗುತ್ತದೆ. ದಶರಥ ಜಮೀನು ಮಾರದಂತೆ ಸೂರಣ್ಣ ತನ್ನ ಅಕ್ಕ ಶಾರದೆಯಿಂದ ತಕರಾರು ಅರ್ಜಿ ಸಲ್ಲಿಸುತ್ತಾನೆ. ಈ ನಡುವೆ ಕೃಷ್ಣಪ್ಪ ಸಾಯುವ ಮೊದಲು ದಶರಥನನ್ನು ಮನೆಗೆ ಕರೆಯಿಸಿ ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರಿಗೆ ಕೊಡಬೇಡ ಎಂದು ತಮ್ಮನಿಗೆ ಹೇಳುತ್ತಾನೆ. ಜೊತೆಗೆ ತನ್ನ ಮನೆಯಲ್ಲಿ ಪೆಟ್ಟಿಗೆಯಲ್ಲಿದ್ದ ಯಕ್ಷಿಣಿಯ ಮೂರ್ತಿಯನ್ನು ನೀಡಿ ಇದರ ಕಾಟದಿಂದಲೇ ನಿನಗೆ ಸುಖ ಇಲ್ಲ. ಅದನ್ನು ಆಡುಕಳದಲ್ಲಿ ಸ್ಥಾಪಿಸು ಎಂದು ಹೇಳುತ್ತಾನೆ. ಕಾಮಾಕ್ಷಿ ಕೂಡ ಮೈಮೇಲೆ ದೇವಿ ಬಂದಾಗ ದಶರಥನಿಗೆ ಭೂಮಿ ಮಾರದಂತೆ ತಾಕೀತು ಮಾಡುತ್ತಾಳೆ. ಅಪ್ಪ ಸತ್ತ ಬಳಿಕ ಸೂರಣ್ಣ ಚಿಕ್ಕಪ್ಪ ದಶರಥನನ್ನು ಪುಸಲಾಯಿಸಲು ನೋಡುತ್ತಾನೆ. ತಮ್ಮ ವಾಸುದೇವನಿಗೆ ಲಿಂಗಾಯತ ಹುಡುಗಿಯನ್ನು ತಂದು ಮದುವೆ ಮಾಡುತ್ತಾನೆ. ಇನ್ನೊಬ್ಬ ತಮ್ಮ ಪರಮೇಶ್ವರ ಪೇಟೆಯಲ್ಲಿ ಅಂಗಡಿ ಮಾಡುವ ತೆವಲಿಗೆ ಬಿದ್ದು ಮನೆಯಿಂದ ಹಣ ಕೇಳುತ್ತಾನೆ. ತನ್ನ ತಮ್ಮಂದಿರನ್ನು ಮನೆಯಿಂದ ಪ್ರತ್ಯೇಕ ಕಳುಹಿಸಬೇಕೆಂದು ಸಂಚು ಮಾಡುವ ಸೂರಣ್ಣ ಹಳೆಯ ಮನೆಯನ್ನು ಬೀಳಿಸುತ್ತಾನೆ. ಹೊಸ ಮನೆಯನ್ನು ಕಟ್ಟಿಸುವುದನ್ನು ಉದ್ದೇಶಪೂರ್ವಕವಾಗಿ ವಿಳಂಬಮಾಡುತ್ತಾನೆ. ಇದರಿಂದ ವಾಸುವೇವ ಮತ್ತು ಆತನ ಪತ್ನಿ ಕಿರಿಕಿರಿಯಾಗಿ ಕಲಘಟಗಿಗೆ ಹೋಗುತ್ತಾರೆ. ಸೂರಣ್ಣನ ಹೆಂಡತಿ ಭವಾನಿ ಎಲ್ಲ ಕುತಂತ್ರಗಳ ಹಿಂದಿನ ಮಿದುಳಾಗಿರುತ್ತಾಳೆ. 

ಕಾಮಾಕ್ಷಿಯ ಪೂರ್ವಾಪರ ಗೊತ್ತಿರುವ ಯಜ್ಞೇಶ್ವರರು ಅದನ್ನು ಬಹಿರಂಗ ಮಾಡುವುದಿಲ್ಲ. ಅವಳಿಗೆ ದೇವಿ ಬರುವುದು ಸುಳ್ಳೆನ್ನುವುದು ಅವರಿಗೆ ಗೊತ್ತಾಗುತ್ತದೆ. ಸಿನಿಮಾ ನಟ ಕಾಂತರಾಜನಿಂದ ಆಡುಕಳದಲ್ಲಿ ದೇವಾಲಯ ನಿರ್ಮಾಣವಾದರೆ ತನ್ನ ಅಸ್ಮಿತೆ ಹೋಗುವುದೆಂಬ ಭಯದಲ್ಲಿ ಅದನ್ನು ಮಂದಿರ ಮಾಡದೆ ಗುರು ಮನೆ ಮಾಡಿ ಎಂದು ಕಾಮಾಕ್ಷಿ ಮೈಮೇಲೆ ದೇವಿ ಬಂದಾಗ ಹೇಳುತ್ತಾಳೆ. ಸೂರಣ್ಣ ಆ ಗುರುಪೀಠದಲ್ಲಿ ತನ್ನ ಚಿಕ್ಕಪ್ಪ ದಶರಥನನ್ನು ಪ್ರತಿಷ್ಠಾಪಿಸಿ ಆತನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಾನೆ. ದುರಾಶೆಯ ಫಲ ಎನ್ನುವಂತೆ ಭವಾನಿ ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಾಳೆ. ಎಲ್ಲದರಲ್ಲಿಯೂ ಲಾಭವನ್ನೇ ನೋಡುವ, ಆಡುಕಳದಂಥ ಬಂಗಾರದ ಜಮೀನಿಗಾಗಿ ಎಲ್ಲರಿಗೂ ಮೋಸಮಾಡಲು ಸಿದ್ಧನಾಗಿದ್ದ ಸೂರಣ್ಣ ಆ ಜಮೀನನ್ನೇ ನಿರ್ಲಕ್ಷಿಸಿಬಿಡುತ್ತಾನೆ. ಇವೆಲ್ಲದರಿಂದ ಬೇಸತ್ತ ದಶರಥ ಗುರುಪೀಠದಿಂದ ಮಾಯವಾಗಿಬಿಡುತ್ತಾನೆ. ಸೂರಣ್ಣ ಮಾತ್ರ, ಗುರುಗಳು ಉತ್ತರಕ್ಕೆ ಹೋಗಿದ್ದಾರೆ ಎಂದು ಹೇಳುತ್ತ ವಂಚನೆಯ ಪರದೆಯ ಮುಂದೆಯೇ ಬದುಕಲು ನಿರ್ಧರಿಸುತ್ತಾನೆ. ಬೆವರು ಹರಿಸಿ ಬರುವ ಹಣಕ್ಕಿಂತ ಅನಾಯಾಸವಾಗಿ ಬರುವ ಹಣವೇ ಆತನಿಗೆ ಆಕರ್ಷಣೆಯಾಗುತ್ತದೆ. ಉತ್ತರಕನ್ನಡದ ಹವ್ಯಕರ ಆಡುಭಾಷೆ ಮತ್ತು ಸ್ಥಳೀಯರ ಆಡುಭಾಷೆಯಲ್ಲಿ ಸಂಭಾಷಣೆಗಳು ಇಲ್ಲಿ ನಡೆಯುತ್ತವೆ. ಕನ್ನಡ ನಿಘಂಟುವಿಗೆ ಸೇರಬೇಕಾದ ಅದೆಷ್ಟೋ ಪದಗಳು ಈ ಕಾದಂಬರಿಯಲ್ಲಿದೆ. ಕೆಲವು ಕಡೆ ಕಾದಂಬರಿಯು ಶೈಲಿಯಲ್ಲಿ ಪತ್ತೇದಾರಿ ಸೀಮೆಯನ್ನು ಮುಟ್ಟಿ ಮರಳಿದೆ. ಸಾವಿತ್ರಿಯ ನಾಪತ್ತೆ, ದಶರಥನ ಮೇಲೆ ಹಲ್ಲೆ, ಮಂದಿರದಲ್ಲಿ ಆತನಿಗೆ ಚಿಕಿತ್ಸೆ ನೀಡುವ ದಷ್ಟಪುಷ್ಟ ಆಸಾಮಿಗಳು, ಯಾರೂ ಜೊತೆಯಾಗಿ ನಿಂತು ಮಾತನಾಡದಂತೆ ಜಾಗ್ರತೆ ವಹಿಸುವ ಭವಾನಿ, ಕಾಮಾಕ್ಷಿಯ ಮೈಮೇಲೆ ಬರುವ ದೈವ ಇವೆಲ್ಲ ಒಗಟೊಗಟಾಗಿ ಕಾಣಿಸುತ್ತವೆ. ಆಕಾಶಕ್ಕೆ ಏಣಿ ಹಚ್ಚಿದಂತೆ ತೋರುತ್ತದೆ. 

ಎಲ್ಲವನ್ನೂ ಗ್ರಹಿಸಬಲ್ಲವನಾಗಿದ್ದರೂ, ಬಂದಾಗ ನೋಡಿಕೊಳ್ಳೋಣ ಎಂಬ ಮನೋಭಾವದ ದಶರಥ, ಆತನಿಗೆ ಸಂಬಂಧಿಸಿದ ಎಲ್ಲ ದುರ್ಘಟನೆಗಳಿಗೂ ಸೂತ್ರಧಾರನಾದ ಸೂರಣ್ಣ ತಮ್ಮ ತಮ್ಮ ಮೂಲ ಶಕ್ತಿಯನ್ನು ಮರೆತದ್ದರಿಂದಲೇ ಕಾದಂಬರಿಯಲ್ಲಿ ಎಲ್ಲ ಕ್ರಿಯೆಗಳು ಜರುಗುತ್ತವೆ. ಮನುಷ್ಯನ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಪ್ರತಿಯೊಬ್ಬನೂ ಸದಾ ಷಡ್ಯಂತ್ರವನ್ನು ಹೆಣೆಯುವುದರಲ್ಲಿ ತೊಡಗಿದಂತೆ ತೋರುವುದು. ಅದೇ ರೀತಿ ಪ್ರತಿ ವ್ಯಕ್ತಿಯೂ ತನ್ನ ಮಟ್ಟಿಗೆ ಒಬ್ಬ ಪತ್ತೇದಾರನಾಗಿರುತ್ತಾನೆ. ಇವೆಲ್ಲವೂ ಸ್ವಕೇಂದ್ರಿತವಾದಾಗ ವ್ಯಕ್ತಿತ್ವದ ಘನತೆ ಎಂಬುದು ಕುಸಿದು ಪಾತಾಳ ಸೇರುತ್ತದೆ. ಅದು ಸಾಮುದಾಯಿಕ ಉನ್ನತಿಯ ಉದ್ದೇಶವನ್ನು ಹೊಂದಿದಾಗ ಕ್ಷಮೆಗೆ ಅರ್ಹವಾಗುತ್ತದೆ. ಆದರೆ ಈ ಕಾದಂಬರಿಯಲ್ಲಿ ಕ್ಷಮೆಗೆ ಅರ್ಹರಾಗುವವರು ಯಾರೂ ಕಾಣುವುದಿಲ್ಲ. ಈ ದುರಂತವನ್ನು ಧ್ವನಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ.



ಈ ಪುಸ್ತಕ ಇಲ್ಲಿ ಕೊಳ್ಳಬಹುದು




Monday, February 16, 2015

ಗೌರ್ಮೆಂಟ್ ಬ್ರಾಹ್ಮಣ - ಅರವಿಂದ ಮಾಲಗತ್ತಿ

Government Brahmana  - Aravinda Malagatti    

 



ನಮ್ಮ ಸ್ನೇಹಿತ ನಮ್ಮ ಹತ್ತಿರ ಅವನ ಕಷ್ಟ ಹೇಳಿಕೊಂಡಾಗ ನಾವು ತಿಳಿದೋ ತಿಳಿಯದೆಯೋ "ನನಗೆ ಅರ್ಥವಾದುತ್ತೆ " ಎಂದು ಉದ್ಗರಿಸುವೆವು. ವಾಸ್ತವವಾಗಿ ನಮಗೆ ಅವರ ಕಷ್ಟದ ನಿಜವಾದ ಆಳ ಮತ್ತು ಅವನ ಸಂಕಟ ತಿಳಿಯುವುದಿಲ್ಲ, ನಮಗೂ ಅದೇ ರೀತಿಯ ಸನ್ನಿವೇಶ ಎದುರಾದರು ಎರಡು ಒಂದೆಯಲ್ಲ. ನಾವು ಬೇರೆಯವರ ಕಷ್ಟದ ಸನ್ನಿವೇಶಗಳಿಗೆ ಸ್ಪಂದಿಸುವಾದ ಎಲ್ಲೋ ಒಂದು ಕಡೆ ನಮ್ಮನ್ನು ನಾವೇ ಸಮಾದಾನ ಪಡಿಸುವ ಮಾತುಗಳನ್ನು ಆಡುತ್ತೇವೆ, ಉದಾಹರಣೆಗೆ ನಮ್ಮ ಸ್ನೇಹಿತ ತನ್ನ ಕೆಲಸ ಹೋಯಿತು ಅಥವಾ ಹೆಂಡತಿ ಜೊತೆ ಜಗಳ ತೀರ ಹೆಚ್ಚಾದಾಗ ಎಂದು ನಮ್ಮ ಹತ್ತಿರ ಹೇಳಿಕೊಂಡಾಗ ನಾವು ನಮ್ಮ ಮನಸ್ಸಿನಲ್ಲಿ ನಾವು ನನ್ನದು ಅದೇ ಪರಿಸ್ಥಿತಿ, ನನ್ನ ಜೊತೆಯಲ್ಲಿ ಇವನು ಇದ್ದಾನಲ್ಲ ಎಂದು ಒಂದು ಎಳೆಯ ಸಂತೋಷ ಮಿಂಚಿ ಹಾರಿಹೊದುತ್ತದೆ, ಅವನಿಗೆ ನಾವು ಎಲ್ಲಾ ಸರಿಹೋಗುತ್ತದೆ, ಇದು ಸ್ವಲ್ಪ ದಿನ ಮಾತ್ರ, ಕೂತು ಸಮಾಧಾನವಾಗಿ ಮಾತಾಡಿ ನೋಡು ಎಂಬೆಲ್ಲಾ ಸಮಾದನಪಡಿಸುವ ಮಾತುಗಳನ್ನ ಹೇಳಿದರು ಅದೆಲ್ಲ ತಮಗೆ ತಾವೇ ಹೇಳಿಕೊಳ್ಳುವ ಭರವಸೆಯ ಮಾತು.

ಇತ್ತಿಚೀನ ದಿನಗಳಲ್ಲಿ ಪರಿಶಿಷ್ಟ ಜಾತಿ ಜನಾಂಗಗಳಿಗೆ ಕೊಡುವ ಮೀಸಲಾತಿ ಬಗ್ಗೆ ತುಂಬಾ ಚರ್ಚೆಗಳು ನಡೆಯುತ್ತಿವೆ, ಆದರೆ ಪರ ಅಥವಾ ವಿರುದ್ಧ ವಿಚಾರದ ಬಗ್ಗೆ ಇಲ್ಲಿ ಪ್ರಸ್ತಾಪಿಸಲು ಇಷ್ಟ ಪಡುವುದಿಲ್ಲ. "ಗೌರ್ಮೆಂಟ್ ಬ್ರಾಹ್ಮಣ" ಎಂದು ಮೀಸಲಾತಿ ಮೇಲೆ ವಿಧ್ಯಾಭ್ಯಾಸ, ಕೆಲಸ ಮಾಡುವವರಿಗೆ ಹೇಳುತ್ತಾರೆ ಎಂದು ಅದೇ ಹೆಸರಿನ ಜೀವನ ಚರಿತ್ರೆ ಬರೆದಿರುವ ಪ್ರೊ. ಅರವಿಂದ ಮಾಲಗತ್ತಿ ಯವರು ಹೇಳುತ್ತಾರೆ. ಈ ಪುಸ್ತಕದಲ್ಲಿ ಅವರು ಪಟ್ಟ ಕಷ್ಟ ಮತ್ತು ಅವರಿಗೆ ಅವರ ಜಾತಿಯಿಂದ ಆದ ಅವಮಾನಗಳು ಮತ್ತು ಅದನ್ನೆಲ್ಲ ಮೀರಿ ಜೀವನದ ಹೇಗೆ ಯಶಸ್ಸಿವಿಯಾದರು ಎಂದು ತಿಳಿಸಿಕೊಡುತ್ತಾರೆ.

ನಾವು ಕೋಪ ಮಂಡುಕನ ರೀತಿ ನಮ್ಮ ಕಷ್ಟಗಳೇ ಜಾಸ್ತಿ ಮತ್ತು ಅವನ್ನು ಎದುರುಸಲು ಆಗುವುದಿಲ್ಲ ಎಂದು ಹೇಳಿಕೊಳ್ಳುವಾಗ ಬೇರೆಯವರ ಜೀವನದಲ್ಲೂ ಒಂದು ಸಾರಿ ಇಣುಕಿ ನೋಡಿ ಅವರು ಏನು ಕಷ್ಟಗಳನ್ನು ಎದುರಿಸಿದ್ದಾರೆ ಎಂದು ನೋಡಿದರೆ ಅವುಗಳ ಮುಂದೆ ನಮ್ಮ ಕಷ್ಟಗಳು ಏನೇನು ಅಲ್ಲ ಎಂದು ಗೊತ್ತಾಗುತ್ತದೆ. ಅರವಿಂದ ಮಾಲಗತ್ತಿಯವರ ಈ ಪುಸ್ತಕ ಓದುವಾಗ ನನಗೆ ದೇವನೂರು ಮಹಾದೇವರವರ "ಎದೆಗೆ ಬಿದ್ದ ಅಕ್ಷರ" ಜ್ಞಾಪಕ ವಾಗುತ್ತದೆ. ಮಾಲಗತ್ತಿ ಅವರ ಅಜ್ಜಿ ದೊಡ್ಡವರ ಮನೆಗೆ ಊಟಕ್ಕೆ ಹೋಗಿ ಸೆರಗಿನಲ್ಲಿ ಊಟವನ್ನು ಬಾಗಿಲು ಕಾಯುವವನಿಗೆ ಗೊತ್ತಾಗದ ರೀತಿ ಅಡಗಿಸಿಟ್ಟುಕೊಂಡು ಮಾಂಗೆ ತರುವ ವಿಚಾರ, ಶಾಲಾ ಕಾಲೇಜ್ ಗಳಲ್ಲಿ ಅದ ಅವಮಾನ, ತೋರಿಕೆಯ ಮುಂದುವರೆದ (pseudo progressive people) ತೋರಿಸುವ ಅಬದ್ಧ ಕಳಕಳಿ ಎಲ್ಲವನ್ನು ಮುಚ್ಚು ಮರೆಯಿಲ್ಲದೆ ಹೇಳುತ್ತಾರೆ.

ನಮ್ಮ ಸ್ವಯಂ ಸೃಷ್ಟಿತ ಶ್ರೀಮಂತರ ತೊದರೆಗಳನ್ನು ಪಕ್ಕಕಿಟ್ಟು ಈ ಪುಸ್ತಕವನ್ನು ಒಂದು ಬಾರಿ ಓದಿದರೆ ನಿಜವಾದ ಕಷ್ಟ ಏನು ಎಂದು ತಿಳಿಯುತ್ತದೆ.



ಈ ಪುಸ್ತಕ ಇಲ್ಲಿ ಕೊಳ್ಳಬಹುದು




Thursday, February 12, 2015

ನೇಹಲ - ಕೆ ಎನ್ ಗಣೇಶಯ್ಯ

Nehala K. N. Ganeshaiah




ಕನ್ನಡಿಗರು, ನಮ್ಮ ಜೀವನದಲ್ಲಿ "ಹಿತ್ತಲ ಗಿಡ ಮದ್ದಲ್ಲ" ಎಂಬ ಗಾದೆ ಕೇಳೆ ಇರ್ತಿವಿ, ಗಣೇಶಯ್ಯ ನವರ "ನೇಹಲ" ಕಥಾ ಸಂಕಲ ಓದುತ್ತಾ ಈ ಗಾದೆ ತುಂಬ ಕಾಡಿತು. ನಾವು ನಮ್ಮ ಇತಿಯಾಸ, ಐತಿಯಾಸಿಕ ಸ್ಥಳಗಳನ್ನು ಕಡೆಗನಿಸುವಸ್ಟು ಬೇರೆ ಯಾರು ಕಡೆಗಣಿಸುವುದಿಲ್ಲವೇನೋ. ಭಾರತದ ಇತಿಯಾಸದಲ್ಲೇ ಒಂದು ದೊಡ್ಡ ಸಾಮ್ರಾಜ್ಯ ಎಂದರೆ ವಿಜಯನಗರ ಸಾಮ್ರಾಜ್ಯ, ಆದರೆ ನಮಗೆ ಆದರೆ ಬಗ್ಗೆ ಎಷ್ಟು ಗೊತ್ತು ???? ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನ, ಮುತ್ತು, ರತ್ನಗಳನ್ನು ಬೀದಿ ಬೀದಿಗಳಲ್ಲಿ ಮಾರುತ್ತಿದ್ದರು ಎನ್ನುವುದು ಬಿಟ್ಟರೆ ಪಾಲು ಬಿದ್ದ ಹಂಪಿ ದೇವಸ್ಥಾನಗಳು ಗೊತ್ತು. ಅಷ್ಟು ಶ್ರೀಮಂತ ಸಾಮ್ರಾಜ್ಯದ ಹಿಂದಿನ ಕಥೆ ಮತ್ತು ಅದರ ಆಡಳಿತ ಮತ್ತು ಅಷ್ಟು ವೈಭವದ ಹಿಂದಿನ ರಹಸ್ಯ ಕೆಲವು ಜನರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ನಮ್ಮ ಶಾಲಾ ಕಾಲೇಜ್ ನಲ್ಲೂ ಹತ್ತಾರು ಸಾಲುಗಳು ಬಿಟ್ಟರೆ ಏನು ಕಲಿಸುವುದಿಲ್ಲ. ಅದಕ್ಕೆ ಏನು ನಮ್ಮ ಹಿರಿಯರು ಹೇಳಿರುವುದು ದೇಶ ಸುತ್ತು ಕೋಶ ಓದು ಎಂದು. 

ನಾನು ಹಿಂದೆ ಬರೆದುರುವಹಾಗೆ ಗಣೇಶಯ್ಯ ನವರು ಇತಿಯಾಸಕ್ಕೆ ಒಂದು ಕಾಲ್ಪನಿಕ ಅಂಶ ಸೇರಿಸಿ ಎಲ್ಲೂ ಬೇಸರವಾಗದಂತೆ ನಮ್ಮ ಕಣ್ಣ ಮುಂದೆ ತೋರಿಸುತ್ತಾರೆ. ಇದನ್ನು ಓದಿದ ಬಳಿಕ ನಮ್ಮ ರಾಜ್ಯದ ಬಗ್ಗೆ, ಇದನ್ನು ಆಳಿದ ರಾಜರ ಬಗ್ಗೆ ಹುಡುಕಿ ಅವರ ಬಗ್ಗೆ ತಿಲಿಕೊಳ್ಳುವ ಕುತೂಹಲ ಹುಟ್ಟುತ್ತದೆ. ನಮ್ಮಲ್ಲಿ ಈ ರೀತಿ ಕುತೂಹಲ ಹುಟ್ಟಿಸುವ ಕಾದಂಬರಿಯಾ ಬರವಣಿಗೆ ಎಷ್ಟು ಚೆನ್ನಾಗಿರಬೇಕು. ಈ ಕಥಾಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿವೆ. ಕೆಲವೊಂದು ಐತಿಯಾಸಿಕ ಘಟನೆಗಳನ್ನು ಆದರಿಸಿ ಮತ್ತೆ ಕೆಲವು ವಿಜ್ಞಾನದ ಪ್ರಯೋಗಗಳ ಮೇಲೆ ಕೆಂದ್ರಿಕೃತವಾಗಿವೆ. 

ಇಲ್ಲಿ ನನಗೆ ಇಷ್ಟವಾದ ಕಥೆ "ರಾಗ ಪಂಜರ". ಭಾರತದಲ್ಲೇ ವಿಶಿಷ್ಟವಾದ ದೇವಸ್ಥಾನ ವಿಜಯ ವಿಠಲ ದೇವಸ್ಥಾನ ಮತ್ತು ಅದರ ಸಂಗೀತ ಹೊರಡುವ ಕಂಬಗಳು. ಈ ದೇವಸ್ಥಾನದ ಹಿಂದೆ ಒಂದು ದೊಡ್ಡ ದುರಂತ ಕಥೆಯೇ ಇದೆ ಎಂದು ನನಗೆ ತಿಳಿದಿದ್ದು ಈಗಲೇ. ಶ್ರೀ ಕೃಷ್ಣದೇವರಾಯ ಕಳಿಂಗ ದೇಶದ ಮೇಲೆ ೬ ವರ್ಷ ಮಾಡಿ ಅದ್ರ ರಾಜ ಗಜಪತಿ ಯನ್ನು ಸೋಲಿಸುತ್ತಾನೆ. ಎಲ್ಲಿ ಕೃಷ್ಣದೇವರಾಯ ಹಿಂತುರಿಗಿದ ಮೇಲೆ ಕಾಲಿಗ ದೇಶದ ಜನ ತಿರುಗಿ ಬೀಳುವರೋ ಎಂದು ತಿಳಿದು ತಿಮ್ಮರಸು ಕಳಿಂಗ ರಾಜನ ಮಗಳಾದ ಜಗನ್ಮೊಹಿನಿಯನ್ನು ಕೃಷ್ಣದೇವರಾನನ್ನು ಮದಿವೆಯಾಗಲು ಒಪ್ಪಿಸುತ್ತಾನೆ. ಮಾಡುವೆಯಾಗಿ ಬಂದ ನಂತರ ಆ ವಿಜಯದ ಸಂಕೇತವಾಗಿ ವಿಜಯ ವಿಠಲ ದೇವಸ್ಥಾನವನ್ನು ಕಟ್ಟಿಸಲು ಹೇಳುತ್ತಾನೆ. ಜಗನ್ಮೊಹಿನಿ ತನ್ನ ರಾಜ್ಯದ ಸೋಲು ಮತ್ತು ತನ್ನ ತಂದೆಯ ಅವಮಾನದಿಂದ ಬೆಂದು ಕೃಷ್ಣದೇವರಾಯನ ಮಗನನ್ನು ವಿಷವಿಕ್ಕಿ ಕೊಲ್ಲುತ್ತಾಳೆ. ಇಲ್ಲಿ ಗಣೇಶಯ್ಯ ನವರು ವೆಂಕೋಬ ಎಂಬ ಪಾತ್ರವಾನು ಸೆರಿಸುತ್ತಾರೆ. ಅವನು ಜಗನ್ಮೊಹಿನಿಯ ಪ್ರಿಯತಮ ಮತ್ತು ಅವರಿಬ್ಬರೂ ಸೇರಿ ರಾಜನ ಮಗನನ್ನು ಕೊಲ್ಲಲ್ಲು ಸಂಚು ಹೂಡಿರುತ್ತಾರೆ ಎಂದು ಬರೆದಿದ್ದಾರೆ. ವೆಂಕೋಬ ನನ್ನು ಬಿಟ್ಟರೆ ಬೇರೆ ಯಲ್ಲ ಪತ್ರಗಳು ಇತಿಯಾಸದಲ್ಲಿ ಉಲ್ಲೇಕ ವಾಗಿರುವ ಪಾತ್ರಗಳೆ.

ಈ ಪುಸ್ತಕ ಇಲ್ಲಿ ಕೊಳ್ಳಬಹುದು





Friday, January 23, 2015

ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ - ಮಾಧವ ಕುಲಕರ್ಣಿ

Ippataidu Aaida Kadambarigala Vimarshe - Madhava Kulkarni






ಇಂದ : ಕನ್ನಡ ಪ್ರಭ ದಿನಪತ್ರಿಕೆ 

ವಿಮರ್ಶೆ - ವಾಸುದೇವ ಶೆಟ್ಟಿ 


ಸೃಜನಕ್ರಿಯೆ ಮತ್ತು ವಿಮರ್ಶನ ಕ್ರಿಯೆ ಎರಡರಲ್ಲೂ ತಮ್ಮನ್ನು ಸಮನಾಗಿ ತೊಡಗಿಸಿಕೊಂಡಿರುವ ಮಾಧವ ಕುಲಕರ್ಣಿಯವರು ಕನ್ನಡದ ‘ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ’ಗಳ ಸಂಕಲನ ಹಲವು ದೃಷ್ಟಿಯಿಂದ ಮಹತ್ವದ್ದಾಗಿದೆ. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆಗೆ ಇದು ಕೆಲವು ಸೂತ್ರಗಳನ್ನು ಹೊಸದಾಗಿ ಸೇರಿಸುವುದರಿಂದ ವಿಮರ್ಶೆಯ ಅಭ್ಯಾಸಿಗಳು ಇದರ ಓದಿನಿಂದ ಲಾಭ ಪಡೆಯಬಹುದಾಗಿದೆ. ಅವರ ವಿಮರ್ಶೆಯ ಮೀಮಾಂಸೆಯನ್ನು ಗುರುತಿಸುವ ಚಿಕ್ಕ ಪ್ರಯತ್ನ ಇಲ್ಲಿದೆ. 

ಗೋಕಾಕರ ಸಮರಸವೇ ಜೀವನ ಕಾದಂಬರಿಯ ಬಗ್ಗೆ ಇರುವ ಮೊದಲ ಲೇಖನದಲ್ಲಿ ಪಾತ್ರ ಸೃಷ್ಟಿ ಮತ್ತು ಮೌಲ್ಯವ್ಯವಸ್ಥೆಯ ಸೃಷ್ಟಿ ಹಾಗೂ ದ್ವಂದ್ವಗಳಿಂದಲೇ ಪಾತ್ರಗಳು ಹೇಗೆ ಪುಷ್ಟಿಯನ್ನು ಪಡೆಯುತ್ತವೆ ಎಂಬ ಮಾತನ್ನು ಹೇಳಿದ್ದಾರೆ. ‘ಕುಸುಮಾ- ನರಹರಿ, ಶೀನು- ಸುಶೀಲೆ- ಸಿಮನ್, ವಿಷ್ಣು, ಪ್ರಮೀಳೆ ಹೀಗೆ ಮೂರು ಜೋಡಿಗಳನ್ನು ಲೇಖಕರು ಜೀವನದ ಮಹಾಸಮುದ್ರದ ಮೇಲೆ ತೇಲಿಬಿಟ್ಟಿದ್ದಾರೆ. ಈ ಜೋಡಿಗಳ ತಾಕಲಾಟ ಮತ್ತು ಸಮಾನಾಂತರ ಬೆಳವಣಿಗೆಯನ್ನು ನೋಡಿದಾಗ ಪಾತ್ರಪ್ರಧಾನ ಕಾದಂಬರಿಯ ಒಂದು ಅಂಶ ಸ್ಪಷ್ಟವಾಗುತ್ತದೆ. ಸಮಾನಾಂತರ ಪಾತ್ರ ಸೃಷ್ಟಿಯ ಮೂಲಕ ಒಂದು ಮೌಲ್ಯ ವ್ಯವಸ್ಥೆಯನ್ನು ಸೃಷ್ಟಿಸುವುದು ಮತ್ತು ಈ ಮೌಲ್ಯ ವ್ಯವಸ್ಥೆಯ ಪರೀಕ್ಷೆಗಾಗಿ ಒಂದು ತಾತ್ವಿಕ ಕೇಂದ್ರವನ್ನು ನಿರ್ಮಿಸುವುದು. ಸಮರಸವೇ ಜೀವನ ಕಾದಂಬರಿ ಕೂಡ ಈ ಸ್ವೀಕೃತ ಸೂತ್ರಕ್ಕೆ ಹೊರತಾಗಿಲ್ಲ’ (ಪುಟ ೨). ಸುಬ್ಬಣ್ಣಾಚಾರ್ಯರ ಪಾತ್ರದ ಮೇಲೆ ಟಿಪ್ಪಣಿ ಮಾಡುತ್ತ, ‘ಇಂಥ ದ್ವಂದ್ವಗಳ ನಡುವೆ ಬೆಳೆಯುವ ಈ ಪಾತ್ರವು ಲೇಖಕರ ಪಾತ್ರ ರಚನೆಯ ಕೌಶಲಕ್ಕೆ ಸಾಕ್ಷಿಯಾಗಿದೆ. ಕೆಟ್ಟ, ಒಳ್ಳೆ, ದುಷ್ಟ ಮತ್ತು ಸಜ್ಜನ ಪಾತ್ರಗಳಿಂದಲೇ ತುಂಬಿದ ಸಮರಸವೇ ಜೀವನ ಕಾದಂಬರಿಯಲ್ಲಿ ಇಂಥ ಕೆಲವು ಪಾತ್ರಗಳು ಅಲ್ಲಲ್ಲಿ ಒಡಮೂಡಿರುವುದರಿಂದ ಕಾದಂಬರಿಯ ಹಂದರವು ತೂಕತಪ್ಪದಂತೆಯೂ ಮಾಡಿದೆ.’ (ಪುಟ ೪-೫). ‘ಇನ್ನು ಆದರ್ಶದ ಪಾತಳಿಯೊಂದು ಕಾದಂಬರಿಯಲ್ಲಿ ಹರಿಯುತ್ತದೆ. ಅದರ ಸ್ವರೂಪವೇನು ಮತ್ತು ಅದರಿಂದ ನಿರ್ಮಾಣವಾಗುವ ಮೌಲ್ಯದ ಅಟ್ಟಣಿಗೆಯ ಬೆಳಕಿನಲ್ಲಿ ನಾನು ಈ ವರೆಗೆ ಚರ್ಚಿಸಿದ ದ್ವಂದ್ವದ ಸ್ಥಾನವೇನೆಂಬುದನ್ನು ನೋಡೋಣ. ಏಕೆಂದರೆ ಪಾತ್ರಪ್ರಧಾನವಾದ ಕಾದಂಬರಿಯಲ್ಲಿ ಇಂಥ ಒಂದು ಶೋಧನೆ ಅವಶ್ಯವೆಂದು ನನ್ನ ಭಾವನೆಯಾಗಿದೆ.’ (ಪುಟ ೬) ಕಾದಂಬರಿ ಎನ್ನುವುದು ಲೇಖಕನ ಲೋಕ. ಆ ಸೃಷ್ಟಿಗೆ ಅವನೇ ಬ್ರಹ್ಮ. ಅಲ್ಲಿ ಅದಿರಬೇಕಿತ್ತು, ಅದು ಹಾಗೆ ತಿರುವುಪಡೆಯಬೇಕಿತ್ತು, ಅದು ಹಾಗಾಗಿದ್ದರೆ ಪರಿಣಾಮ ಬೇರೆಯಾಗುತ್ತಿತ್ತು ಎಂದೆಲ್ಲ ಚರ್ಚಿಸುವುದು ಸರಿಯಾಗಲಾರದು. ಅದಕ್ಕಾಗಿಯೇ ಮಾಧವ ಕುಲಕರ್ಣಿಯವರು, ‘ಊಹಾಧಾರಿತ ಚರ್ಚೆಯು ಸಾಹಿತ್ಯ ವಿಮರ್ಶೆಗೆ ಗೌರವ ತರಲಾರದು. ಅಂಥ ಒಂದು ಒಳ ನೋಟವು ಸಾಹಿತ್ಯ ವಿಮರ್ಶೆಯ ಒಂದು ಆಯಾಮವಾಗಬಹುದೇ ಹೊರತು ಅದೇ ಕೇಂದ್ರದಲ್ಲಿರುವ ವಿಮರ್ಶೆಯು ಸಾಹಿತ್ಯದ ಸೂಕ್ಷ್ಮತೆಯನ್ನು ನಿರ್ಲಕ್ಷಿಸಬಹುದು’ (ಪುಟ ೧೨) ಎಂಬ ಮಾತನ್ನು ಹೇಳಿದ್ದಾರೆ. 

 ಒಮ್ಮೊಮ್ಮೆ ತತ್ವಪ್ರತಿಪಾದನೆಯ ಸಾಹಿತ್ಯ ಪರಂಪರೆಯ ದೃಷ್ಟಿಕೋನದಿಂದ ಯಥಾರ್ಥ ಸ್ಥಿತಿ ಅಭಿವ್ಯಕ್ತಿಯ ಸಂಪ್ರದಾಯದ ಕಾದಂಬರಿಗಳನ್ನು ನೋಡತೊಡಗಿದಾಗ ಕೆಲವೊಂದು ಆಭಾಸಗಳು ಸಾಹಿತ್ಯ ವಿಮರ್ಶೆಯಲ್ಲಿ ನುಸುಳಬಹುದು. ಯಥಾರ್ಥ ಚಿತ್ರಣ ಮತ್ತು ತತ್ವ ಪ್ರತಿಪಾದನೆಗಳಲ್ಲಿ ಯಾವುದು ಮೇಲು ಎಂಬುದು ವಿಮರ್ಶೆಯ ಕೊನೆಯ ಮಜಲಿನಲ್ಲಿ ಎತ್ತುವ ಪ್ರಶ್ನೆಯಾಗಬಹುದು. ಆದರೆ ಕಾದಂಬರಿ ಅಥವಾ ಸಾಹಿತ್ಯ ಗ್ರಹಿಕೆಯ ಪರಿಗಳನ್ನು ವಿವರಿಸದೆ ಕೇವಲ ಕೊನೆಯ ಮಜಲಿನಲ್ಲಿ ನಿಂತು ಮಾತನಾಡತೊಡಗುವುದು ಕೇವಲ ಅಭಿಪ್ರಾಯಗಳನ್ನು ಮಂಡಿಸಿ ಕೈ ತೊಳೆದುಕೊಳ್ಳುವ ಅಪಾಯಕಾರಿ ವಿಮರ್ಶೆಯಾಗಬಹುದು (ಪುಟ ೧೨-೧೩) ಎಂದಿರುವುದು ವಿಮರ್ಶೆಕರಿಗೆ ಪಾಠವಾಗಿದೆ. 

ಒಂದು ಕೃತಿಯನ್ನು ಗ್ರಹಿಸಿದ ರೀತಿಯನ್ನು ವಿಮರ್ಶಕನಾದವನು ವಿಮರ್ಶೆಯನ್ನು ಬರೆಯುತ್ತಿರುವಾಗಲೇ ತನಗೆ ಖಚಿತಪಡಿಸಿಕೊಳ್ಳುತ್ತಾನೆ. ಈ ರೀತಿಯಾಗಿ ನಡೆಯುವ ಕ್ರಿಯೆಯೂ ಸೃಷ್ಟ್ಯಾತ್ಮಕ ಕ್ರಿಯೆಯೇ ಆಗಿರುತ್ತದೆ. ಈ ಗ್ರಹಿಸಿದ ರೀತಿಯನ್ನು ಬದಿಗಿಟ್ಟು ಬರೆದ ವಿಮರ್ಶೆ ಕೇವಲ ವ್ಯಕ್ತಿಗತ ಅಭಿಪ್ರಾಯಜನ್ಯ ವಿಮರ್ಶೆಯಾಗಿಬಿಡುತ್ತದೆ. ಇಂಥ ವಿಮರ್ಶೆಯು ಈಗ ಖ್ಯಾತನಾಮರಾದ ವಿಮರ್ಶಕರಿಂದ ಕೂಡ ಬರುತ್ತಿರುವುದರಿಂದ ಅದನ್ನು ಕುರಿತು ಎಚ್ಚರದಿಂದಿರಬೇಕಾದ ಅವಶ್ಯಕತೆ ಉಂಟಾಗಿದೆ. ಕೃತಿಯನ್ನು ಗ್ರಹಿಸಿದ ರೀತಿಯನ್ನು ವಿಮರ್ಶಾತ್ಮಕವಾಗಿಯೇ ವಿವರಿಸಿದಾಗ ಆ ಕೃತಿಯಲ್ಲಿ ಅಡಕಗೊಂಡಿರುವ ಮೌಲ್ಯವ್ಯವಸ್ಥೆಯನ್ನು ಕುರಿತು ನಂತರದಲ್ಲಿ ವಿಮರ್ಶಕ ಹೇಳಬಹುದಾದ ಎಲ್ಲ ಮಾತುಗಳೂ ವಿಮರ್ಶೆಯನ್ನು ಓದುವ ಓದುಗನ ಮನಸ್ಸಿನಾಳಕ್ಕೆ ಇಳಿಯತೊಡಗುತ್ತವೆ. ಆಗ ಸಾಹಿತ್ಯ ವಿಮರ್ಶೆ ಮತ್ತು ವಿಮರ್ಶಕರಿಬ್ಬರೂ ಸಾಹಿತ್ಯ ಕೃತಿ ಮತ್ತು ಓದುಗನನ್ನು ಜೋಡಿಸುವ ಅರ್ಥಪೂರ್ಣ ಕೊಂಡಿಯಾಗುತ್ತಾರೆ. (ಪುಟ ೧೬) 

ಒಂದು ಸಾಹಿತ್ಯ ಪ್ರಕಾರ ಯಾವ ಹಂತದ ವರೆಗೆ ಬೆಳೆದು ನಿಂತಿರುತ್ತದೋ ಅಲ್ಲಿಯ ವರೆಗೆ ಒಬ್ಬ ಸಾಹಿತಿ, ಆ ಸಾಹಿತ್ಯ ಪ್ರಕಾರದಲ್ಲಿ ಅರಳಿದ ರೀತಿಯನ್ನು ನೋಡಬೇಕೆ ಹೊರತು, ಇಂದು ಆ ಪ್ರಕಾರ ಬೆಳೆದುನಿಂತ ರೀತಿಯಲ್ಲಿ ಅದೂ ಮುಖ್ಯವಾಗಿ ಕಾದಂಬರಿ ಲೋಕದ ತಾಂತ್ರಿಕ ಬೆಳವಣಿಗೆಯ ಬೆಳಕಿನಲ್ಲಿ ಹಿಂದಿನ ಸಾಹಿತ್ಯ ಕೃತಿಗಳನ್ನು ಪರೀಕ್ಷಿಸುವುದು ಒಮ್ಮೊಮ್ಮೆ ಅಪಾಯಕಾರಿ ನಿರ್ಧಾರಗಳತ್ತ ನಮ್ಮನ್ನು ಕರೆದೊಯ್ಯಬಹುದು. ಈ ಕಾರಣಕ್ಕಾಗಿಯೇ ಮೌಲ್ಯಗಳು ವ್ಯಕ್ತವಾದ ರೀತಿಗಿಂತ ಮೌಲ್ಯಗಳ ಪುನರ್‌ಮೌಲ್ಯೀಕರಣಕ್ಕೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ (ಪುಟ೪೪) ಎಂಬಲ್ಲಿ ಕುಲಕರ್ಣಿಯವರ ವಿಮರ್ಶೆಯ ‘ಧೋರಣೆ’ಗಳನ್ನು ನಾವು ಗುರುತಿಸಬಹುದು. ಕಾರಂತರ ಐದು ಕಾದಂಬರಿಗಳ ವಿಮರ್ಶೆ ಇಲ್ಲಿದೆ. 

ಕಾರಂತರ ಒಟ್ಟೂ ಸಾಹಿತ್ಯದ ಬಗ್ಗೆ ಅವರು ಒಂದು ಸಾಮಾನ್ಯವಾದ ಅಂಶವನ್ನು ಇಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯರಲ್ಲಿ ಹುದುಗಿರುವ ಅಸಾಮಾನ್ಯ ಮತ್ತು ಅಂತರಂಗದ ವ್ಯಾಪಾರದಲ್ಲಿ ದಕ್ಕುವ ಮಾನವನ ನಿಜಸ್ವರೂಪ ಇವು ಕಾರಂತರ ಕುತೂಹಲವನ್ನು ಕೆರಳಿಸಿದ ಸಾಹಿತ್ಯಿಕ ವಸ್ತುಗಳು. ಮಂಜುಳೆ (ಮೈಮನಗಳ ಸುಳಿಯಲ್ಲಿ) ಅಂಥ ಒಂದು ಕುತೂಹಲದ ಪ್ರತಿಫಲವಾಗಿ ಮೂಡಿಬಂದ ಪಾತ್ರವಾಗಿದ್ದಾಳೆ (ಪುಟ ೭೭) ಎಂಬ ಮಾತನ್ನು ಹೇಳಿದ್ದಾರೆ. 

ಅನಂತ ಮೂರ್ತಿಯವರ ‘ಭವ’ದ ಬಗ್ಗೆ ಚರ್ಚಿಸುತ್ತ, ಪಾತ್ರಗಳು ಸ್ಥಾಪಿತಗೊಳ್ಳುತ್ತಿಲ್ಲವಲ್ಲ ಎಂಬುದೇ ನನ್ನ ಆಕ್ಷೇಪ ಎಂದಿದ್ದಾರೆ. ಟೀವಿ ಎಪಿಸೋಡುಗಳ ಉದಾಹರಣೆ ನೀಡುವ ಅವರು, ಅವು ಒಟ್ಟಂದದಲ್ಲಿ ಪರಿಣಾಮ ಬೀರುವುದಕ್ಕಿಂತ ಆಯಾ ಆಖ್ಯಾನಗಳನ್ನು ಹೇಗೆ ಆಕರ್ಷಕ ಮಾಡಬೇಕೆನ್ನುವುದೇ ಮಹತ್ವದ್ದಾಗಿ ಬಿಟ್ಟಿರುತ್ತದೆ. ಈ ರೀತಿಯು ಅನಂತಮೂರ್ತಿಯವರ ಬರವಣಿಗೆಯಲ್ಲಿ ಕಂಡಾಗ ಸ್ವಲ್ಪ ಗಲಿಬಿಲಿಗೊಳ್ಳುವಂತಾಗುತ್ತದೆ. ಇದರ ಸಾಧಕ ಬಾಧಕಗಳು ನಮ್ಮ ಒಟ್ಟು ಬರವಣಿಗೆಯ ಧೋರಣೆಯ ಮೇಲೆ ಬಲವಾದ ಪ್ರಭಾವ ಬೀರಬಹುದಾದ್ದರಿಂದ ಈ ಕುರಿತು ತಲೆಕೆಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. 

ಗದ್ಯ ಬರೆವಣಿಗೆಯ ವಿಷಯದಲ್ಲಿ ಕುಲಕರ್ಣಿಯವರು ಇದರಲ್ಲಿಯೇ ಒಂದು ಮಹತ್ವದ ಮಾತನ್ನು ಹೇಳಿದ್ದಾರೆ. ‘‘ನಾವು ಗದ್ಯ ಬರವಣಿಗೆಯ ಸಂಧಿಕಾಲದಲ್ಲಿ ನಿಂತಿದ್ದೇವೆ. ವಿವರಗಳಿಗೆ ಉಪಯೋಗಿಸುವ ಭಾಷೆಯು ‘ಗದ್ಯದ ರೂಪಕ’ವಾಗಬೇಕಾದರೆ ವಿಷಯ ವಸ್ತು ಸೂಚಿಸುವ ಸನ್ನಿವೇಶದಿಂದ ಆಯ್ದ ಪದಗಳಿಂದಲೇ ಅಲಂಕರಿಸಲ್ಪಡಬೇಕಾಗುತ್ತದೆ. ಇದೊಂದು ವಿಷಯದಲ್ಲಿ ಮಾತ್ರ ಕಾದಂಬರಿಯ ಭಾಷೆಯು ಸೃಜನಶೀಲವಾಗಬೇಕಾದರೆ ಸನ್ನಿವೇಶದ ಸಂಪೂರ್ಣ ಅರಿವಿನಿಂದ ಬಂದ ‘ರಕ್ತಗತವಾದ’ ಒಂದು ಭಾಷೆ ಉದ್ಭವವಾಗಬೇಕಾಗುತ್ತದೆ. ಇಲ್ಲದಿದ್ದರೆ ಮಿದುಳಿನಿಂದ ಸೃಜಿಸುವ ಭಾಷೆಯು ಎಷ್ಟೇ ಶಕ್ತಿಯುತವಾಗಿದ್ದರೂ ಕೂಡ ಅದಕ್ಕೆ ಈ ಅರ್ಥದಲ್ಲಿ ಸೃಜನಶೀಲತೆಯು ದಕ್ಕುವುದಿಲ್ಲ.... ಜೀವನಕ್ಕೆ ಚಿಂತನೆಯನ್ನು ತೊಡಿಸಬೇಕೋ ಅಥವಾ ಜೀವನದಿಂದ ಉದ್ಭವವಾದ ಚಿಂತನೆಯೇ ಮೂರ್ತರೂಪವನ್ನು ಕಾದಂಬರಿಯಲ್ಲಿ ದಕ್ಕಿಸಿಕೊಳ್ಳಬೇಕೋ ಎಂಬುದೇ ಮೂಲ ಸಮಸ್ಯೆಯಾಗಿದೆ. ಇದಕ್ಕೆ ಸ್ಪಷ್ಟವಾದ ಉತ್ತರವನ್ನು ಕಂಡುಕೊಳ್ಳದೆ ನಮ್ಮ ಗದ್ಯ ಬರವಣಿಗೆಯು ಹೆಚ್ಚು ಸ್ವೀಕಾರಾರ್ಹವಾಗಲಾರದು....(ಪುಟ ೮೭-೮೮)’’ ಎಂಬ ಮಾತು ಕನ್ನಡ ಗದ್ಯಕಾರರಿಗೆಲ್ಲ ಮಾರ್ಗದರ್ಶನದಂತಿದೆ. 

ಭೈರಪ್ಪನವರ ಏಳು ಕಾದಂಬರಿಗಳ ವಿಮರ್ಶೆ ಇದರಲ್ಲಿದೆ. ಭೈರಪ್ಪನವರು ಕಾದಂಬರಿಗಳ ವಸ್ತು ರಮ್ಯಕಲ್ಪನೆಗಳಿಂದ ಹೇಗೆ ಮುಕ್ತವಾಗಿಲ್ಲ ಎಂಬುದನ್ನು ಉದಾಹರಣೆಗಳ ಮೂಲಕ ಹೇಳುತ್ತಾರೆ. ಎಂಥ ಬರೆವಣಿಗೆ ಸೃಜನಶೀಲತೆಗೆ ಮಾರಕವಾಗುತ್ತದೆ? ಅವಧೇಶ್ವರಿಯ ವಿಮರ್ಶೆ ಮಾಡುವ ಕುಲಕರ್ಣಿಯವರು, ‘ವೇದಕಾಲೀನ ಕಾದಂಬರಿ’ ಎಂಬ ಉಪಶಿರೋನಾಮೆಯನ್ನಿಟ್ಟುಕೊಂಡು ಬಂದ ‘ಅವಧೇಶ್ವರಿ’ ಕಾದಂಬರಿಯು ಯಾವುದೋ ಒಂದು ವರ್ಗವನ್ನು ಮತ್ತು ಒಂದು ರೀತಿಯ ಚಿಂತನೆಯನ್ನು ತೃಪ್ತಿಗೊಳಿಸಲು ಬರೆದ ಕಾದಂಬರಿಯಾಗಿ ತೋರುತ್ತದೆ. ಇಂಥ ಪ್ರಯತ್ನಗಳು ಸೃಜಶೀಲತೆಗೆ ಒಂದು ಮಾರಕವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಇವಲ್ಲದೆ ಕಂಬಾರ, ಶಾಂತಿನಾಥ ದೇಸಾಯಿ, ಶ್ರೀನಿವಾಸ ವೈದ್ಯ, ನಾ.ಮೊಗಸಾಲೆ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠರ ಕಾದಂಬರಿಗಳ ಕುರಿತೂ ವಿಮರ್ಶೆಗಳಿವೆ. ಹೇಳುವುದನ್ನು ದ್ವಂದ್ವಕ್ಕೆ ಎಡೆಯಿಲ್ಲದೆ, ಯಾರನ್ನೋ ಮೆಚ್ಚಿಸಬೇಕೆಂಬ ಉದ್ದೇಶವಿಲ್ಲದೆ, ಖಚಿತವಾಗಿ ಹೇಳುವ ಮಾಧವ ಕುಲಕರ್ಣಿಯವರು ಕನ್ನಡ ವಿಮರ್ಶೆಯನ್ನು ಮತ್ತೊಂದು ಎತ್ತರಕ್ಕೆ ಒಯ್ದಿದ್ದಾರೆ


Friday, January 9, 2015

ಜೀವನ ಸಂಗ್ರಾಮ - ಮಿಲನಿಯಮ್ - ೨ - ಪೂರ್ಣಚಂದ್ರ ತೇಜಸ್ವಿ

Jeevana Sangrama - Millenium 2 - Poornachandra Tejasvi



ಮುನ್ನುಡಿಯಿಂದ

ರಾಮನನೋಹಾರ ಲೋಹಿಯಾ 'ಮೂರ್ತ ಮತ್ತು ಅಮೂರ್ತ'ದ ಬಗ್ಗೆ ವಿಶ್ಲೇಷಿಸುತ್ತಾ 'ಹೆಚ್ಚು ತಿಳಿದ ಹಾಗು ನಾವು ತಿಲಿದಿಲ್ಲದಿರುವುದರ ಅರಿವು ಮತ್ತು ಮೊತ್ತವೂ' ಎಂದು ಹೇಳುತ್ತಾರೆ. ಆದ್ದರಿಂದ ನಮ್ಮ ಜ್ಞಾನ ಎನ್ನುವುದು ನಮ್ಮ ಅಜ್ಞಾನದ ಅರಿವಷ್ಟೇ' ಎಂದು ಹೇಳುತ್ತಾರೆ. ಅದ್ದರಿಂದ ನಮ್ಮ ಜ್ಞಾನ ದಿಗಂತವನ್ನು ವಿಸ್ತರಿಸುತ್ತಾ ಒಂದು ದಿನ ಪರಿಪೂರ್ಣತೆಯ ಹಂತವನ್ನು ಮುಟ್ಟುತ್ತೇವೆ ಎನ್ನುವುದು ಸುಳ್ಳು. ಅಪರಿಪೂರ್ಣತೆ ಜ್ಞಾನದ ಅನುಷಂಗಿಕ ಗುಣ. ಮನಸ್ಸು ಅರಿವಿನ ಹಾದಿಯಲ್ಲಿ ಮುಂದೂತ್ತುತ್ತಲೇ ಹೋಗುತ್ತದೆ. ಪರಿಪೂರ್ಣತೆಯ ಮಾರ್ಗ ಯಾವುದೆಂದು ತಿಳಿಯುವವರೆಗೂ ತಿಳಿಯುವ ಖುಷಿ, ಆನಂದ, ರೊಮಾಂಚನಕ್ಕಾದರೂ ಮನಸ್ಸು ಮುಂದುವರಿಯುತ್ತದೆ. ಇಲ್ಲಿರುವ ವಿಚಾರಗಳೆಲ್ಲವೂ ಈ ಕಾರಣಕ್ಕಾಗೇ ನಾನು ತಿಳಿದವು. ಈ ಕಾರಣಕ್ಕಾಗೇ ನಾನು ನಿಮಗೆ ತಿಳಿಸುತ್ತಿರುವುದು.

ಚರಿತ್ರೆಯ ವಿಸ್ತಾರದಲ್ಲಿ ಆಸ್ಪೋಟಿಸಿ ಬಿದ್ದಂತೆ ಬಿದ್ದಿರುವ ನೂರಾರು ಸಂಗತಿಗಳನ್ನು ಅವುಗಳಿಂದ ಹೊಮ್ಮುವ ಅನೇಕ ಸೂಕ್ಷ್ಮ ಎಳೆಗಳ ಸಹಾಯದಿಂದ ನಿರಂತರ ಸರಣಿಯನ್ನಾಗಿ ಪರಿವರ್ತಿಸಿ ಕಥೆಯ ಚೌಕಟ್ಟಿಗೆ ಅಳವಡಿಸಲು ಇಲ್ಲಿ ಪ್ರಯತ್ನಿದ್ದೇನೆ. ಬಹುಶ: ಇವನ್ನೆಲ್ಲಾ ಅಭ್ಯಾಸ ಮಾಡುವಾಗಲೇ ನೂರಾರು ವಿಷಯಗಳಿಗೆ ಮನಸ್ಸು ಸೂಕ್ಷ್ಮವಾಗಿ ಕಾರ್ಯಕಾರಣ ಸಂಬಂಧವನ್ನು ಆರೋಪಿಸುತ್ತಲೇ ಅರ್ಥಮಾಡಿಕೊಳ್ಳುತ್ತಾ ಹೋಗುತ್ತದೆ ಎಂದು ಕಾಣುತ್ತದೆ. ತಿಳುವಳಿಕೆ, ಅರಿವು ಎಂದರೆ ಅವ್ಯವಸ್ಥೆಯಲ್ಲಿ ವ್ಯವಸ್ಥೆಯನ್ನು ಗುರುತಿಸುವುದೇ ಇರಬಹುದು. ಹೊಸ ವಿಚಾರಗಳ ಮೇಲೆದ್ದಂತೆಯೂ ನಮ್ಮ ವ್ಯವಸ್ಥೆಯ ಸೂತ್ರ ಬದಲಾಗುತ್ತಾ ಹೋಗಬಹುದು. ಬಹಳ ಸೂಕ್ಷ್ಮವಾಗುತ್ತಾ ಅವ್ಯಕ್ತವಾಗುತ್ತಾ ಹೋಗಬಹುದು. ಆದರೂ ಮನಸ್ಸು ಅವುಗಳಲ್ಲೊಂದು ಅಂತರ್ಗಾಮಿಯಾದ ಸಂಬಂಧ ಎಳೆಯನ್ನು ಸ್ಥಾಪಿಸುತ್ತಾಲೇ ಹೋಗುತ್ತದೆ. ಒಂದು ಪುಸ್ತಕಕ್ಕೆ ಹೆಸರು ಕೊಡುವಾಗ ಇವಿಷ್ಟೂ ಸಂಗತಿಗಳು ಏಕೆ ಇಲ್ಲಿ ಒಟ್ಟಾದುವು ಎಂದು ಯೋಚಿಸುತ್ತೇನೆ.

ಈ ಪುಸ್ತಕವನ್ನು 'ಜೀವನದ ಸಂಗ್ರಾಮ' ಎಂದು ಕರೆದರೆ ಇಲ್ಲಿರುವ ನೂರಾರು ವಿಚಾರ ಮತ್ತು ಘಟನೆಗಳ ಅಂತರ್ಗತ ಸಂಬಂಧ ನಿಮಗೆ ಹೊಳೆಯಬಹುದು ಎಂದು ತಿಳಿದ್ಡಿದ್ದೇನೆ