Tuesday, June 24, 2014

ಕರಿಸಿರಿಯಾನ - ಕೆ ಎನ್ ಗಣೇಶಯ್ಯ

Karisiriyaana K. N. Ganeshaiah




ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ನಿಧಿಯು ಹಲವಾರು ಒಗಟು-ಒಗಟಾಗಿರುವ ಸುಳಿವುಗಳಲ್ಲಿ ಅಡಗಿರುವ ಹಾಗೆ ಮತ್ತು ಕೆಲವರು ಅದನ್ನು ಬೆನ್ನಟ್ಟುವ ಹಾಗೆ ಗಣೇಶಯ್ಯನವರು ಕಥೆ ಹೆಣೆಯುತ್ತಾರೆ. ಹಾಗೆಯೇ ತಿರುಪತಿಯು ವಿಶ್ವದ ಶ್ರೀಮ೦ತ ಹಿ೦ದೂ ದೇವಸ್ಥಾನ ಹೇಗಾಯಿತು? ಎ೦ಬುದರ ಸುತ್ತಲೂ ಕತೆ ಸುತ್ತುತ್ತದೆ. ಗಣೇಶಯ್ಯನವರ ಕಾದ೦ಬರಿಯ ವಿಶೇಷವೆ೦ದರೆ ಅವರು ಕಾದ೦ಬರಿಯಲ್ಲಿ ಹೇಳುವ ಹಲವು ವಿವರಗಳಿಗೆ ಪರಾಮರ್ಶನ ಗ್ರ೦ಥಗಳಲ್ಲಿರುವ ಆಧಾರಗಳನ್ನು ಅಡಿ ಟಿಪ್ಪಣಿಯಲ್ಲಿ ಒದಗಿಸುವುದು. ಇವುಗಳ ಜೊತೆಗೆ ಸಚಿತ್ರ ವಿವರಗಳನ್ನೂ ಕೂಡಾ ಆಧಾರವಾಗಿ ನೀಡುತ್ತಾರೆ. ಹಾಗಾಗಿ ಕಲ್ಪನೆ ಮತ್ತು ನೈಜತೆಗೆ ಸಾಕಷ್ಟು ವ್ಯತ್ಯಾಸವಿರುವುದಿಲ್ಲ ಮತ್ತು ಇದು ಓದುಗನ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೆ ಪ್ರತಿಯೊ೦ದು ಅಧ್ಯಾಯದ ಮೊದಲು ಘಟನೆಯು ನಡೆಯುವ ದಿನಾ೦ಕ, ಸಮಯ ಹಾಗೂ ಸ್ಥಳವನ್ನು ಲೇಖಕರು ನೀಡುತ್ತಾರೆ. ಮೊದಲ ಕೆಲವು ಅಧ್ಯಾಯಗಳನ್ನು ಓದುವಾಗ ನನಗೆ ಇವು ಅನಗತ್ಯವೆನಿಸಿದರೂ, ನ೦ತರ ಇವು ಕಥೆಗೆ ಪೂರಕವೆನಿಸಿದವು. ಓದುಗನ ಘಟನೆಯ ಕಲ್ಪನೆಗೆ ಇನ್ನಷ್ಟು ಸಾಮಾಗ್ರಿ ಇವು ಒದಗಿಸುತ್ತವೆ.

ಚರಿತ್ರೆಯ ಎರಡು ಪತ್ರಗಳ ಉಲ್ಲೇಖದೊ೦ದಿಗೆ ಕಾದ೦ಬರಿ ಆರ೦ಭಗೊಳ್ಳುತ್ತದೆ. ನ೦ತರ ಜಾನಪದ ಹಾಡುಗಾರ್ತಿ ನ೦ಜಮ್ಮ ಮುಳುಬಾಗಿಲಿನಿ೦ದ ಚಿತ್ತೂರಿಗೆ ಹೊರಡುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಸಿಗುವ ನ೦ಗ್ಲಿಯ ತನ್ನ ಮನೆಯಲ್ಲಿ ಕೊಲೆಯಾದ ಮಾಹಿತಿ ಸಿಗುತ್ತದೆ. ವಿಜಯನಗರ ಕಾಲದ ಸಸ್ಯಗಳಿರುವ ಉದ್ಯಾನಗಳನ್ನು ಹ೦ಪಿಯಲ್ಲಿ ನಿರ್ಮಿಸುವುದು ASI ಯೋಜನೆ, ಅದಕ್ಕಾಗಿ ಹ೦ಪಿಯಲ್ಲಿರುವ ಮಣ್ಣಿನ ತಿರುಳುಗಳನ್ನು ಅಗೆದು, ವಿಜಯನಗರ ಕಾಲದ ಪರಾಗರೇಣುಗಳನ್ನು ಪಡೆದು ಪರಿಶೀಲಿಸಿ, ಆಗಿನ ಕಾಲದ ಸಸ್ಯ ಜಾತಿಗಳನ್ನು ಗುರುತಿಸುವುದರಲ್ಲಿ ಸಸ್ಯ ಶಾಸ್ತ್ರಜ್ಞ ಡಾ||ವಾಸುದೇವ್ ತೊಡಗಿದ್ದಾಗ, ಅವರ ತ೦ಡಕ್ಕೆ ಅಗೆದ ಮಣ್ಣಲ್ಲಿ ವಜ್ರಗಳು ದೊರಕುತ್ತವೆ. ’ವಿಜಯನಗರದ ರಾಜರ ಮತ್ತು ತಿರುಪತಿ ದೇವಾಲಯದ ನಡುವಿನ ನಿಗೂಢ ಆರ್ಥಿಕ ಸ೦ಬ೦ಧ’ ಎ೦ಬ ವಿಷಯದ ಕುರಿತಾಗಿ ಪೂಜಾ ಸ೦ಶೋಧನೆಯಲ್ಲಿ ತೊಡಗಿಕೊ೦ಡಿರುತ್ತಾಳೆ, ಅವಳು ತಿರುಪತಿಯ ಬೆಟ್ಟಗಳಲ್ಲಿ ಈ ಕುರಿತಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ CBI ಅವಳನ್ನು ಬ೦ಧಿಸಿ ಕರೆದೊಯ್ಯುತ್ತದೆ. ಕಾಶ್ಮೀರದ ಮ೦ಜುಪ್ರದೇಶವೊ೦ದರಲ್ಲಿ ಒ೦ದು ವಿಶಿಷ್ಟ ಜನಾ೦ಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಭಾವನಾಳನ್ನು ಭಾರತೀಯ ಸೇನೆಯು ವಿಮಾನದಲ್ಲಿ ಸೆರೆಹಿಡಿದು ಹೊತ್ತೊಯ್ಯುತ್ತದೆ. UNESCO ಘೋಷಿಸಿರುವ ವಿಶ್ವ ಪರ೦ಪರೆ ತಾಣಗಳ(World Heritage Sites) ಸ೦ರಕ್ಷಣೆಯ ಉಸ್ತುವಾರಿ ಸ೦ಸ್ಥೆಯ ಸದಸ್ಯತ್ವಕ್ಕೆ ಲಾಬಿ ನಡೆಸಿ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಲಕ್ಷ್ಮಿಕಾ೦ತ್ ಪಟೇಲ್ ಆಯ್ಕೆಯಾಗುತ್ತಾನೆ. ಅರೆರೆ, ಇದೇನಿದು ಒ೦ದಕ್ಕೊ೦ದು ಸ೦ಬ೦ಧವಿಲ್ಲದ ವಿಷಯಗಳೆನ್ನುವಿರಾ? ಇಲ್ಲಾ, ಇವಗಳನ್ನು ಒಟ್ಟಾಗಿ ಬೆಸೆದು ಕಾದ೦ಬರಿ ಮು೦ದಕ್ಕೆ ಸಾಗುತ್ತದೆ. ಇದಲ್ಲದೆ ಹಲವು ಕುತೂಹಲಕರ ಪ್ರಶ್ನೆಗಳೂ ಮೇಲೇಳುತ್ತವೆ - ವಿಜಯನಗರದ ಪತನದ ನ೦ತರ ಅಲ್ಲಿಯ ಸಿರಿ ಎಲ್ಲಿ ಹೋಯಿತು? ಹ೦ಪಿಯ ನಗರದ ರಚನೆಯಲ್ಲಿ Cosmic Geometry(ಹ೦ಪಿಯಲ್ಲಿರುವ ಪುಣ್ಯಸ್ಥಳಗಳಿಗೂ, ಆಕಾಶದಲ್ಲಿರುವ ಖಗೋಳ ಕಾಯಗಳಿಗೂ ಹಾಗೂ ನಗರದ ರಚನೆಯ ಪ್ರಾಕಾರಕ್ಕೂ ಇರುವ ಸ೦ಬ೦ಧ) ಯ ಪಾತ್ರವೇನು? ವಿಜಯನಗರದ ಸಾಮ್ರಾಜ್ಯದಲ್ಲಿ ಅಷ್ಟೊ೦ದು ಸ೦ಪತ್ತು ಶೇಖರಣೆಯಾಗಲು ಕಾರಣಗಳೇನು? ಕನ್ನಡದಲ್ಲಿ ಚಿನ್ನ/ಬೆಳ್ಳಿ ನಾಣ್ಯಗಳಿಗೆ ವರಹಗಳೆ೦ದು ಹಿ೦ದೆ ಏಕೆ ಕರೆಯುತ್ತಿದ್ದರು? ಕೃಷ್ಣದೇವರಾಯನ ಮಾತೃಭಾಷೆ ತೆಲುಗಲ್ಲದಿದ್ದರೆ ಬೇರೆ ಯಾವುದು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಕಾದ೦ಬರಿಕಾರರು ಉತ್ತರಗಳನ್ನೂ ಒದಗಿಸುತ್ತಾರೆ. 

’ಕರಿಸಿರಿಯಾನ’ದ ಓದು ಒ೦ದು ರೋಮಾ೦ಚಕ ಅನುಭವ. ಬಹುಶ: ಕನ್ನಡದಲ್ಲಿ ಇತಿಹಾಸದೊ೦ದಿಗೆ ಬೆರೆಸಿ ಕಥೆ ಬರೆಯುವ ಇ೦ಥಾ ಪ್ರಯತ್ನ ಈ ದಿನಗಳಲ್ಲಿ ಖ೦ಡಿತಾ ಶ್ಲಾಘನೀಯ. ಗಣೇಶಯ್ಯನವರೇ, ನಿಮ್ಮಿ೦ದ ಇನ್ನಷ್ಟು ಈ ಬಗೆಯ ಕಾದ೦ಬರಿಗಳನ್ನು ನಿರೀಕ್ಷಿಸುತ್ತಿದ್ದೇವೆ.

ಮೂಲ :-  http://goo.gl/yQdpJa


Monday, June 23, 2014

ನಿರಾಕರಣ - ಎಸ್ ಎಲ್ ಭೈರಪ್ಪ

Nirakarana - S L Bhyrappa



ಒಬ್ಬ ಮನುಷ್ಯ ಹುಟ್ಟಿದ ಮೇಲೆ  ಕಷ್ಟಗಳು ತಪ್ಪಿದ್ದಲ್ಲ. ಕಷ್ಟಗಳನ್ನು ನಿವಾರಿಸಲು ಇನ್ನು ಕಷ್ಟಗಳನ್ನು ಅನುಭವಿಸುತ್ತಾರೆ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಎಲ್ಲಾ ಪ್ರಯತ್ನ ಮಾಡಿದ ಮೇಲೆ ಕಷ್ಟ ತೀರದಿದ್ದರೆ ಕೆಟ್ಟ ದಾರಿ ಹಿಡಿಯುತ್ತಾರೆ, ಅಡ್ಡ ದಾರಿ ಹುಡುಕುತ್ತಾರೆ, ಇನ್ನು ಕೆಲವರು ಕಷ್ಟ ಸಾಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಒಳ್ಳೆ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಆಗುವುದಿಲ್ಲ, ಕೆಟ್ಟ ಕೆಲಸ ಮಾಡುವುದಿಲ್ಲ ಅಂಥವರು ಸನ್ಯಸವೊ ಇಲ್ಲ ವನವಾಸಕ್ಕೋ ಹೊರಟುಬಿಡುತ್ತಾರೆ. ಇಂತವರು ತಮ್ಮ ಜವಬ್ದಾರಿಯನ್ನು ಮುಗಿಸಿ ಇಲ್ಲವೇ ಬೇರೆಯವರಿಗೆ ವಹಿಸಿ ಕೈ ತೊಳೆದುಕೊಳ್ಳುತ್ತಾರೆ. ಒಬ್ಬನೇ ತಂದೆ ಮತ್ತು ಅವನಿಗೆ ಐದು ಮಕ್ಕಳು ಹಾಗು ಹೆಂಡತಿ ಇಲ್ಲ ಎಂದರೆ ಅಂತವನು ಏನು ಮಾದುತ್ತಾನೆ.... ಮಕ್ಕಳನ್ನು ದತ್ತು ಕೊಡಲು ನಿರ್ಧರಿಸಿ ಪತ್ರಿಕೆಯಲ್ಲಿ ಜಾಹಿರಾತು ನೀಡುತ್ತಾನೆ. ಇದೆ ಭೈರಪ್ಪನವರ 'ನಿರಾಕರಣೆ'ಯಾ ಕಥೆ. 

ಬೇರೆ ದಾರಿ ಕಾಣದೆ ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟು ನರಹರಿ ತನ್ನ ಮಕ್ಕಳ ಬಳಿ ಹೆಚ್ಚು ಸಮಯ ಕಳೆಯಲೆಂದು ಪ್ರತಿ ದಿನ ಸಂಜೆ ಐದಕ್ಕೆ ಆಫೀಸ್ ಇಂದ ಹೊರಡಲು ನಿರದರಿಸುತ್ತಾನೆ. ಜಾಹಿರಾತು ಕೊಟ್ಟ ಒಂದು ಎರಡು ತಿಂಗಳಲ್ಲಿ ಐದು ಮಕ್ಕಳ್ಳನ್ನು ಒಳ್ಳೆ ಒಳ್ಳೆ ಮನೆಗೆ ಶೆಣೈ ಸಹಾಯದಿಂದ ದತ್ತು ಕೊಟ್ಟು ಸನ್ಯಾಸಿಯಾಗುತ್ತಾನೆ. ಸನ್ಯಾಸಿಯಾಗಿ ಅವನು ಊರೂರು ಅಲೆಯುತ್ತಾನೆ. ಹಿಮಾಲಯ ಏರುತ್ತಾನೆ, ನದಿಯಲ್ಲಿ ಈಜುತ್ತಾನೆ, ಬಿಕ್ಷೆ ಬೇಡಿ ಊಟ ಮಾಡುತ್ತಾನೆ. ಆದರೆ ಅವನು ಪೂರ್ವದಲ್ಲಿ ನಿರ್ಧರಿಸಿದಂತೆ ತನ್ನ ಎಲ್ಲ ಸಂಭಂದಗಳನ್ನು ಕಳೆದು ಕೊಳ್ಳಲು ಆಗುವುದಿಲ್ಲ. ಅವನಿಗೆ ತನ್ನ ಮಕ್ಕಳ ನೆನಪು, ಹೆಂಡತಿಯ ನೆನಪು ಮತ್ತು ತನ್ನ ಜೀವನದ ನೆನಪು ಎಲ್ಲ ಕಡೆಯಲ್ಲೂ ಬರುತಿರುತ್ತದೆ. ತಾನು ಮಾಡಿದ ನಿರ್ಧಾರ ತಪ್ಪಿರಬಹುದು, ತಾನು ಇನ್ನು ಕಷ್ಟ ಪಟ್ಟು ಕೆಲೆಸ ಮಾಡಿದ್ದರೆ ಮಕ್ಕಳನ್ನು ಸಾಕಬಹುದಿತ್ತೇನೋ, ದತ್ತು ಕೊಟ್ಟು ತಪ್ಪು ಮಾಡಿದೆ ಎಂದನಿಸುತ್ತದೆ. ಅತ್ತ ಪೂರ್ಣ ಸನ್ಯಾಸಿಯಾಗದೆ ಇತ್ತ ಪೂರ್ತಿ ಸಂಸಾರಿಯಾಗದೆ ಒದ್ದಾಡುತ್ತಾನೆ. ಕೊನೆಗೆ ಮತ್ತೆ ಮರಳಿ ಮುಂಬೈಗೆ ಬಂದು ಸೇರುತ್ತಾನೆ. 

ಅವನು ಬಂಡ ಮೇಲೆ ಮಕ್ಕಳ ನೆನಪು ಕಾಡುತ್ತದೆ. ಆದರೆ ಅವನು ದತ್ತು ಕೊಟ್ಟ ಮೇಲೆ ನೋಡಲು ಹೋಗಬಾರದು ಎಂದು ನಿರ್ಧರಿಸುತ್ತಾನೆ. ಅವನು ಕೆಲಸ ಮಾಡುವ ಹಾಸ್ಟೆಲ್ ನ ಲೆಕ್ಕ ಬರೆಯುವ ರಾಳೆ ಅವರಿಗೆ ತಿಳಿಯದ ಹಾಗೆ ಎಲ್ಲಾ ದತ್ತು ಮಕ್ಕಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರುತ್ತಾನೆ. ಅವರು ಏಗಿದ್ದಾರೆ, ಅವರೆಲ್ಲ ಏನು ಮಾಡುತ್ತಿದ್ದಾರೆ, ಅವರ ಜೀವನದ ಸ್ಥಿತಿ ಹೇಗಿದೆ ಎನ್ನುವುದನ್ನು ಅವನಿಗೆ ಹೇಳುತ್ತಾರೆ (ಅದನ್ನು ನೀವು ಓದಿ ತಿಳಿಯಿರಿ)

’ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿಯೂ ಸೆಳೆದುಬಿಡುತ್ತದೆ - ವಿದ್ಯುತ್‍ಶಾಕ್‍ನಂತೆ. ಇಲ್ಲ, ಸ್ಪರ್ಶಕ್ಕೆ ಸಿಕ್ಕದಷ್ಟು ದೂರವೇ ಇರಬೇಕು. ಇದಕ್ಕೆ ಮಧ್ಯಮ ಸ್ಥಿತಿ ಇಲ್ಲ’ ಎಂಬ ಗ್ರಹಿಕೆಯಿಂದ ಅವನು ನಿರ್ಧರಿಸುತ್ತಾನೆ.

’ನೀರು ಹರಿಯದಿದ್ದಾಗಲೂ ಅದನ್ನು ನದಿ ಅನ್ನಬಹುದೇ?’

’ಇಲ್ಲ. ಅದು ಬರೀ ರೂಢಿಯ ಸಂಕೇತ. ಹರಿದರೆ ಮಾತ್ರ ಕಾಲ, ಹೆಪ್ಪುಗಟ್ಟಿದರೆ ಅಲ್ಲ..... ಉಷ್ಣ ಚಂಚಲ, ಶೀತ ಅಚಲ.’

ಹೆಪ್ಪುಗಟ್ಟಲೇಬೇಕೆಂದು ಬಯಲನ್ನು ನಿರಾಕರಿಸಿ ಬೆಟ್ಟವನ್ನು ಏರುತ್ತಾನೆ.

ಒಟ್ಟಿನಲ್ಲಿ ಹೇಳುವುದಾದರೆ ಕನ್ನಡ ಕಾದಂಬರೀ ಪ್ರಪಂಚದಲ್ಲಿ ಇದೊಂದು ವಿನೂತನ ಕೃತಿ.



Thursday, June 12, 2014

ಸಮೀಕ್ಷೆ - ಶಿವರಾಮ ಕಾರಂತ


Sameekshe - Shivarama Karanth




ಈ ಬರಹ, ಕೆಲವು ವ್ಯಕ್ತಿಗಳನ್ನು ತನ್ನ ಮುಂದಕ್ಕಿರಿಸಿಕೊಂಡು, ಅವರ ಬಾಳಿನ ಸಮೀಕ್ಷೆ ನಡೆಯಿಸಲೆತ್ನಿಸುತ್ತದೆ. ಯಾವುದು ಸಾರ್ಥಕ, ಯಾವುದು ನಿರರ್ಥಕ? ಈ ‘ಅರ್ಥ’ ಯಶಸ್ಸಿನ ದೃಷ್ಟಿಯಿಂದಲ್ಲ-ಜೀವನ ಅರ್ಥವತ್ತಾಗಿ, ರಸವತ್ತಾಗಿ, ಸಹ್ಯವಾಗಿ ಕಾಣಿಸಬೇಕೆಂಬ ದೃಷ್ಟಿಯಿಂದ.

ಒಬ್ಬೊಬ್ಬರ ಬದುಕಿಗೆ ಒಂದೊಂದು ಆದರ್ಶ ನೆರವಾಗಬಹುದು. ಒಂದೊಂದು ಗುರಿ ಕೈದೀವಿಗೆಯಂತೆ ನಡೆಯಿಸಿಕೊಂಡು ಹೋಗಬಹುದು. ಒಬ್ಬನ ಬೆಳಕು ಇನ್ನೊಬ್ಬನಿಗೆ ಬೆಳಕೇ ಆಗಿ ಕಾಣಿಸದಿರಲೂ ಬಹುದು. ಈ ತತ್ವವನ್ನು ಒಪ್ಪಲು ಸಿದ್ಧವಿದ್ದವರಿಗೆ - ತಮ್ಮ ಆಚೀಚೆ ಅನೇಕ ಸುಂದರ ದೃಶ್ಯಗಳು ಕಾಣಿಸಬಹುದು. ಆದರೆ, ಹುಡುಕಿ ನೋಡಬೇಕು. ಯಶಸ್ಸು ಬಾಜಾರದಲ್ಲಿ ಮೆರೆಯಬಲ್ಲದು. ಕರ್ತವ್ಯವಾಗಿ ಮಾಡಿದ್ದು ಅಷ್ಟೊಂದು ಬೆಳಕಿಗೆ ಬರಲಾರದು.

ಸೂರ್ಯಕಾಂತಿ ಹೂವು ದೊಡ್ಡದಾಗಿ ಆಡಂಬರದಿಂದ, ಸೂರ್ಯನ ಬೆಳಕು ಬೀಳುವ ಕಡೆಗೇನೆ ಮುಖ ಹಿಡಿದು 'ನಾನಿದ್ದೇನೆ' ಎಂದು ಸಾರಿ ಹೇಳುತ್ತದೆ. ಗಿಡ =, ಹೂ, ಜೀವನ - ಹೇಗೆ ಇದ್ದರೂ, ಅದರ ಇರವು, ಕೀರ್ತಿ ಊರಿಂದೂರಿಗೆ ಹಬ್ಬುತ್ತ್ತದೆ. ಆದರೆ ನೈದಿಲೆ? ಕೆಸರಲ್ಲಿ ಹುಟ್ಟಿ, ಹಗಲೆಲ್ಲ ಕಾದು, ಚಂದಿರನ ಬಯಸಿ, ದೊರೆತ ಬೆಳಕಿನಿಂದ ಸಂತೋಷ ಪದೆಯುತ್ತದೆ.

ಸೂರ್ಯಕಾಂತಿ ಅರಳಿ, ಬಾಡಿ, ಉದುರಿವ ತನಕವೂ ಬೆಳಕಿನಲ್ಲಿ ಮೆರೆದಾದುತ್ತದೆ. ನೈದಿಲೆ ಅರಳುವ ತನಕವೂ ನೇರ ಕೆಲಗೇನೆ ಇದ್ದು, ಮೊದಲ ದಿನ ಮೇಲೆ ಬಂದು, ಮೂರು ದಿನ ಸಕಾಲದಲ್ಲಿ ಅರಳಿ, ಮುಚ್ಚಿ, ಸಾವು ಸಂನಿಹಿತವಾಗುವಾಗ ನೀರಲ್ಲಿ ತಲೆ ತಗ್ಗಿಸಿಕೊಂಡು ಅಡಗುತ್ತದೆ! ಒಂದಿಷ್ಟೂ ಆಡಂಬರವಿಲ್ಲ: ಬಂದುದೂ ಗೊತ್ತಿಲ್ಲ; ಹೋದುದೂ ಗೊತ್ತಿಲ್ಲ

ಯಾವುದು ಅರ್ಥವತ್ತಾದ ಬಾಳು?

ಅರ್ಥವರಿಯಲೆತ್ನಿಸಿ, ಅದರಂತೆ ಬಾಳಲೆತ್ನಿಸಿದ ಸೋಲೂ - ಯಶಸ್ವಿಯಾದುದಲ್ಲವೇನು? ಬಾಳಿನಲ್ಲಿ ಕಾಣಿಸದ ಅರ್ಥ ಎಲ್ಲಿದ್ದರೇನು? ಎಷ್ಟಿದ್ದರೇನು? ಯಾರ ಸಲುವಾಗಿ ಅದಿರಬೇಕು?

ಈ ಪ್ರಶ್ನೆಯನ್ನು ಉತ್ತರಿಸಲು, ತಮ್ಮ ನಿಜ ಜೀವನದಿಂದ ನೆರವಾದ ಹತ್ತಾರು ಸಾಮಾನ್ಯ ಜನರು, ನನಗೆ ಈ ಕಾದಂಬರಿಯ ವಸ್ತುವನ್ನು ಒದಗಿಸಿಕೊಟ್ಟು ಉಪಕಾರ ಮಾಡಿದ್ದಾರೆ. ಅಂಥವರ ಹಿರಿತನವನ್ನು ಮರೆಯುವಂತಿಲ್ಲ.

- ಶಿವರಾಮ ಕಾರಂತ