Friday, August 22, 2014

ಅನುಸಂಧಾನ - ಬರಗೂರು ರಾಮಚಂದ್ರಪ್ಪ

Anusandhana -Baraguru Ramachandrappa




 ನಮ್ಮ ಸಮಕಾಲಿನ ಬರಹಗಾರರಲ್ಲಿ ಸಮಕಾಲಿನ ವಿವಾದಗಳಿಗೆ ತಕ್ಷಣವೇ ಸದಾ ಜಾಗೃತರಾಗಿರುವ ಬರಗೂರು ರಾಮಚಂದ್ರಪ್ಪನವರ ವಿವಿಧ ಕೃತಿಗೆಳಿಗೆ ಬರೆದ ಮುನ್ನುಡಿ ರೂಪದ ಬರಹಗಳ ಸಂಕಲನ 'ಅನುಸಂಧಾನ'. ಮುನ್ನುಡಿ ಬರಹವು ಸಾಹಿತ್ಯದಲ್ಲಿ  ಒಂದು ವಿಶೇಷ ಪ್ರಕಾರವಾಗಿ ಬೆಳೆದುಬರುತ್ತಿದೆ. ಅದರ ಲಕ್ಷಣ, ಸ್ವರೂಪಗಳನ್ನು ಇಂಥ ಕೃತಿಯನ್ನು ಇಟ್ಟುಕೊಂಡು ವಿರ್ವಚಿಸಬಹುದಾಗಿದೆ.

ಸಾಮಾನ್ಯವಾಗಿ ಕೃತಿಯೊಂದನ್ನು ಓದುವ ಓದುಗನಿಗೆ ಕೃತಿಯ ಮುಖ್ಯಾಂಶಗಳು ಹಾಗೂ ಆಶಯವನ್ನು ತಿಳಿಸುತ್ತ ಕೃತಿಕಾರನಿಗೆ ಶುಭಕೋರುವುದು ಈ ಬರಹದ ಒಂದು ಲಕ್ಷಣ. ಇಂಥವುಗಳಲ್ಲಿ ಕಾಟು ವಿಮರ್ಶೆಯನ್ನು ಕಾಣುವುದು ಸಾಧ್ಯವಿಲ್ಲ. ಮುನ್ನುಡಿ ಅಪೇಕ್ಷಿಸುವ ಕೃತಿಕಾರ ಕೃತಿಯ ಬಗ್ಗೆ. ತನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಬರೆಯಬೇಕು ಎಂದು ಬಯಸುವುದು ತೀರಾ ಸಹಜ. ಇಂಥ ಆಡಕ್ಕೊತ್ತಿನಲ್ಲಿ ಸಿಲುಕುವ ಮುನ್ನುಡಿಕಾರರು ತಮ್ಮ ಮಿತಿಯಲ್ಲಿಯೇ ಪುಸ್ತಕವೊಂದರ ಆಲೋಚನೆ ಮಾಡುತ್ತಾರೆ. ಸೂಕ್ಷ್ಮವಾಗಿ ಕೊರತೆಗಳನ್ನು ದಾಖಲಿಸುತ್ತಾರೆ. ಇನ್ನೊಂದು ಕೃತಿಯೊಂದಿಗೆ ಈ ಕೃತಿಯನ್ನು ಹೋಲಿಸಿ ನೋಡುತ್ತಾರೆ. ವೈಯಕ್ತಿವಾದ ಪ್ರೀತಿ ವಿಶ್ವಾಸಗಳ ನೆಲೆಯಲ್ಲಿ ಸಹೃದಯತೆಯನ್ನು ನಾವು ಮುನ್ನುಡಿಗಳಲ್ಲಿ ಕಾಣಬಹುದು.

ಬರಗೂರರ ಈ ಕೃತಿಯಲ್ಲಿ ಮುನ್ನುಡಿಗಳ ಜೊತೆಗೆ ಕೆಲವು ಪುಸ್ತಕಾವಲೋಕನಗಳೂ ಇವೆ. ಮುನ್ನುಡಿ ಬರಹಗಳಿಗೆ ಈ ಕೃತಿಯೊಂದು ದಿಕ್ಸೋಚಿಯೂ ಆಗಬಲ್ಲದು. ಬರಗೂರರ ಬರಹದ ಒಂದು ವಿಶೇಷವೆಂದರೆ, ಅವರು ಕೃತಿಯೊಂದರಲ್ಲಿ ಪ್ರತಿಪಾದನೆಯಾದ ವಿಷಯವನ್ನು ಗ್ರಹಿಸುತಾರೆ ಮತ್ತು ಆ ವಿಚಾರವನ್ನು ವಿಸ್ತರಿಸುತ್ತಾರೆ. ಅದಕ್ಕೊಂದು ಉದಾರಹಣೆ ಈ ಕೃತಿಯ, 'ಹರಿಹರಪ್ರಿಯರ ಕೆಲವು ಕೃತಿಗಳು' ಲೇಖನ. ಅದರಲ್ಲಿ "ಅಸಹನೆ ಮತ್ತು ಆತಂಕಗಳ ನಡುವೆ ಇರುವ ಸೂಕ್ಷ್ಮಗೆರೆಯನ್ನು  ಕಂಡುಕೊಳ್ಳುವ ಸಂವೇದನಾಶೀಲತೆ ಇದ್ದಾಗ ಆತಂಕ ಮೌಲ್ಯವಾಗುತ್ತ ಅಸಹನೆ ಹಿನ್ನೆಲೆಗೆ ಸರಿಯುತ್ತದೆ. ಸಂಕಟ ಉರಿಯುತ್ತ ಸಿಟ್ಟು ಆರತೊಡಗುತ್ತದೆ. ಹರಿಹರಪ್ರಿಯ ಅವರ ಬರವಣೆಗೆಯುದ್ದಕ್ಕೂ ಆ ಸಹನೆ = ಆತಂಕ ಮತ್ತು ಸಿಟ್ಟು- ಸಂಕಟಗಳ ನಡುವೆ ತುಯ್ದಾಡುತ್ತ ಆರೋಗ್ಯಕರ ನೆಲೆಗೆ ಹಾರೈಸುವ ತಳಮಳ ಹೇಳುತ್ತಾ ಬರಗೂರರು ಸಾಹಿತ್ಯದ ಒಂದು ಸಿದ್ದಾಂತವನ್ನು ಸೂತ್ರರೂಪದಲ್ಲಿ ವಿವರಿಸುತ್ತಾರೆ.

ಬರಗೂರರ ಒಳ ನೋಟಗಳಿಗೆ ಇನ್ನೊಂದು ಉದಾಹರಣೆ 'ಮೂರು ಕಾದಂಬರಿಗಳು: ಹಾಡ್ಲಹಳ್ಳಿ ನಾಗರಾಜ್' ಲೇಖನ ನೋಡಬಹುದು. ಅಲ್ಲಿ ಅವರು ಅಕ್ಷರ ಸಂಸ್ಕೃತಿ ಸ್ಥಿ ತ್ಯಂತರಗೊಂಡ ರೀತಿಯನ್ನು ದಾಖಲಿಸುತ್ತಾರೆ. "ನಮ್ಮಲ್ಲಿ ಸಾಹಿತ್ಯ ಸಂಭ್ರಮ ಮತ್ತು ಸಮೃದ್ದಿಗಳು ಕಡಿಮೆಯಾಗಿವೆಯೆಂದು ಕೆಲವು ಪ್ರತಿಷ್ಠಿತರು   ಆಗಾಗ್ಗೆ ಹಳಹಳಿಸುತ್ತಾರೆ. ಈ ಹಳಹಳಿಕೆಗೆ ಕಾರಣವಿಲ್ಲ ಎಂದುದು ನನ್ನ ಅಭಿಪ್ರಾಯ. ನಮ್ಮ ಸಂದರ್ಭದ ಸಾಹಿತ್ಯ ಸಂಭ್ರಮ ಮತ್ತು ಸಮೃದ್ದಿಗಳು ಸ್ಥಳಾಂತರಗೊಂಡಿವೆ; ಅಕ್ಷರ ಸಂಸ್ಕೃತಿಯ 'ಸಾಮಾಜಿಕ ರೇಖೆ'ಗಳು ಅಳಿಸಿಹೋಗುತ್ತ ಹೊಸ ಅನುಭವಗಳು  ಅಕ್ಷರವಾಗತೊಡಗಿದ ಸನ್ನಿವೇಶದಲ್ಲಿ ನಾವು ಹಾದುಹೋಗುತ್ತಿದ್ದೇವೆ. ಪ್ರತಿಷ್ಠಿತ ವಲಯದ ಪ್ರತಿಗಾಮಿ ಪೀಠಗಳಿಗೆ ನಡುಕ ಹುಟ್ಟಿ ಸಂಭ್ರಮ - ಸಮೃದ್ದಿಗಳ ಅಭಾವ ಕಾಣಿಸಿಕೊಂಡಿದ್ದರೆ  ಅಂಥವರಿಗೆ ಅದು ಸಹಜ - ಸ್ವಾಭಾವಿಕ. ಆದರೆ ಸಾಂಸ್ಕೃತಿಕ ಆವರಣದಲ್ಲಿ ಅಕ್ಷರಾಕೃತಿಗಳ ಕುಣಿತಕ್ಕೆ ಕಾರಣವಾಗಿರುವ ನಿರ್ಲಷಿತ ಸಾಮಾಜಿಕ ವಲಯಗಳಿಗೆ ಸಂಭ್ರಮವೂ ಇದೆ; ಆವೇಶವು ಇದೆ; ಹದಲ್ಲೇ ಬರಬೇಕೆಂಬ ಒತ್ತಾಸೆಯೂ ಇದೆ. ಇಂಥ ವಿಶಿಷ್ಟ ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳು ಸಮೃದ್ದವಾಗಬೇಕಾಗಿದೆ...." ನಮ್ಮಲ್ಲಿರುವ ಪ್ರತಿಷ್ಠಿತ ವಿಮರ್ಶಕ ವಲಯವು ಹೊಸಬರು ಬರಹಗಳನ್ನು ಓದಿಲ್ಲ ಮತ್ತು ಬರಹಗಾರರನ್ನು ಗುರುತಿಸಿಲ್ಲ ಎಂದು ಅವರು ಹೇಳುತ್ತಾರೆ. ಕೃತಿಯೊಂದರ ಕೊರತೆಯನ್ನು ಹೇಳುವಲ್ಲಿಯೂ ಬರಗೂರರ ಹಿಂದೆಮುಂದೆ ನೋಡುವುದಿಲ್ಲ. ಇದೇ ಲೇಖನದ ಕೊನೆಯಲ್ಲಿ ಅವರು, "ಬಿಂಗಾರೆ ಕಲ್ಲು ಮತ್ತು ಕಡವೆ ಬೇಟೆ - ಹಾಡ್ಲಹಳ್ಳಿ ನಾಗರಾಜ್ ಅವರ ಉತ್ತಮ ಕತೆಗಾರಿಕೆ ಉದಾಹರಣೆಯಾಗಿ ನಿಲ್ಲುವ ರಚನೆಗಳಾಗಿವೆ. ಆದರೆ ಇದೇ ಮಾತನ್ನು 'ಕೋಕಿಲಾ' ಎಂಬ ಕಿರು ಕಾದಂಬರಿಯ ಬಗ್ಗೆ ಹೇಳಲಾರೆ. ಅದೊಂದು ಸಾಮಾನ್ಯ ಕಥಾನಕ. ವಸ್ತುವಿನಲ್ಲಿರುವ ಆದರ್ಶ, ಸ್ತ್ರೀಪರ ಸೃಷ್ಟಿಕೋನಗಳು ಮನನೀಯವಾದರೂ ಗಾಢಾವಾಗಿ ಕಾಡುವ ಕತೆಗಾರಿಕೆ ಕಾಣುವುದಿಲ್ಲ. ಮೊದಲೆರಡು ಕೃತಿಗಳ ನಾಗರಾಜ್ ಇಲ್ಲಿ ನಾಪತ್ತೆಯಾಗಿದ್ದಾರೆ...". ಈ ಕೃತಿಯನ್ನು ಇಟ್ಟುಕೊಂಡು ಬರಗೂರರ ವಿಮರ್ಶೆಯ ನೆಲೆಗಳೇನು, ಅವರ ಸಾಹಿತ್ಯ ಮೀಮಾಂಸೆಯೇನು ಎಂಬುದನ್ನು ಗುರುತಿಸಬಹುದಾಗಿದೆ. ಈ ದೃಷ್ಟಿಯಿಂದ ಇದೊಂದು ಮಹತ್ವದ ಕೃತಿ 
 




0 comments:

Post a Comment