Friday, January 23, 2015

ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ - ಮಾಧವ ಕುಲಕರ್ಣಿ

Ippataidu Aaida Kadambarigala Vimarshe - Madhava Kulkarni






ಇಂದ : ಕನ್ನಡ ಪ್ರಭ ದಿನಪತ್ರಿಕೆ 

ವಿಮರ್ಶೆ - ವಾಸುದೇವ ಶೆಟ್ಟಿ 


ಸೃಜನಕ್ರಿಯೆ ಮತ್ತು ವಿಮರ್ಶನ ಕ್ರಿಯೆ ಎರಡರಲ್ಲೂ ತಮ್ಮನ್ನು ಸಮನಾಗಿ ತೊಡಗಿಸಿಕೊಂಡಿರುವ ಮಾಧವ ಕುಲಕರ್ಣಿಯವರು ಕನ್ನಡದ ‘ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ’ಗಳ ಸಂಕಲನ ಹಲವು ದೃಷ್ಟಿಯಿಂದ ಮಹತ್ವದ್ದಾಗಿದೆ. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆಗೆ ಇದು ಕೆಲವು ಸೂತ್ರಗಳನ್ನು ಹೊಸದಾಗಿ ಸೇರಿಸುವುದರಿಂದ ವಿಮರ್ಶೆಯ ಅಭ್ಯಾಸಿಗಳು ಇದರ ಓದಿನಿಂದ ಲಾಭ ಪಡೆಯಬಹುದಾಗಿದೆ. ಅವರ ವಿಮರ್ಶೆಯ ಮೀಮಾಂಸೆಯನ್ನು ಗುರುತಿಸುವ ಚಿಕ್ಕ ಪ್ರಯತ್ನ ಇಲ್ಲಿದೆ. 

ಗೋಕಾಕರ ಸಮರಸವೇ ಜೀವನ ಕಾದಂಬರಿಯ ಬಗ್ಗೆ ಇರುವ ಮೊದಲ ಲೇಖನದಲ್ಲಿ ಪಾತ್ರ ಸೃಷ್ಟಿ ಮತ್ತು ಮೌಲ್ಯವ್ಯವಸ್ಥೆಯ ಸೃಷ್ಟಿ ಹಾಗೂ ದ್ವಂದ್ವಗಳಿಂದಲೇ ಪಾತ್ರಗಳು ಹೇಗೆ ಪುಷ್ಟಿಯನ್ನು ಪಡೆಯುತ್ತವೆ ಎಂಬ ಮಾತನ್ನು ಹೇಳಿದ್ದಾರೆ. ‘ಕುಸುಮಾ- ನರಹರಿ, ಶೀನು- ಸುಶೀಲೆ- ಸಿಮನ್, ವಿಷ್ಣು, ಪ್ರಮೀಳೆ ಹೀಗೆ ಮೂರು ಜೋಡಿಗಳನ್ನು ಲೇಖಕರು ಜೀವನದ ಮಹಾಸಮುದ್ರದ ಮೇಲೆ ತೇಲಿಬಿಟ್ಟಿದ್ದಾರೆ. ಈ ಜೋಡಿಗಳ ತಾಕಲಾಟ ಮತ್ತು ಸಮಾನಾಂತರ ಬೆಳವಣಿಗೆಯನ್ನು ನೋಡಿದಾಗ ಪಾತ್ರಪ್ರಧಾನ ಕಾದಂಬರಿಯ ಒಂದು ಅಂಶ ಸ್ಪಷ್ಟವಾಗುತ್ತದೆ. ಸಮಾನಾಂತರ ಪಾತ್ರ ಸೃಷ್ಟಿಯ ಮೂಲಕ ಒಂದು ಮೌಲ್ಯ ವ್ಯವಸ್ಥೆಯನ್ನು ಸೃಷ್ಟಿಸುವುದು ಮತ್ತು ಈ ಮೌಲ್ಯ ವ್ಯವಸ್ಥೆಯ ಪರೀಕ್ಷೆಗಾಗಿ ಒಂದು ತಾತ್ವಿಕ ಕೇಂದ್ರವನ್ನು ನಿರ್ಮಿಸುವುದು. ಸಮರಸವೇ ಜೀವನ ಕಾದಂಬರಿ ಕೂಡ ಈ ಸ್ವೀಕೃತ ಸೂತ್ರಕ್ಕೆ ಹೊರತಾಗಿಲ್ಲ’ (ಪುಟ ೨). ಸುಬ್ಬಣ್ಣಾಚಾರ್ಯರ ಪಾತ್ರದ ಮೇಲೆ ಟಿಪ್ಪಣಿ ಮಾಡುತ್ತ, ‘ಇಂಥ ದ್ವಂದ್ವಗಳ ನಡುವೆ ಬೆಳೆಯುವ ಈ ಪಾತ್ರವು ಲೇಖಕರ ಪಾತ್ರ ರಚನೆಯ ಕೌಶಲಕ್ಕೆ ಸಾಕ್ಷಿಯಾಗಿದೆ. ಕೆಟ್ಟ, ಒಳ್ಳೆ, ದುಷ್ಟ ಮತ್ತು ಸಜ್ಜನ ಪಾತ್ರಗಳಿಂದಲೇ ತುಂಬಿದ ಸಮರಸವೇ ಜೀವನ ಕಾದಂಬರಿಯಲ್ಲಿ ಇಂಥ ಕೆಲವು ಪಾತ್ರಗಳು ಅಲ್ಲಲ್ಲಿ ಒಡಮೂಡಿರುವುದರಿಂದ ಕಾದಂಬರಿಯ ಹಂದರವು ತೂಕತಪ್ಪದಂತೆಯೂ ಮಾಡಿದೆ.’ (ಪುಟ ೪-೫). ‘ಇನ್ನು ಆದರ್ಶದ ಪಾತಳಿಯೊಂದು ಕಾದಂಬರಿಯಲ್ಲಿ ಹರಿಯುತ್ತದೆ. ಅದರ ಸ್ವರೂಪವೇನು ಮತ್ತು ಅದರಿಂದ ನಿರ್ಮಾಣವಾಗುವ ಮೌಲ್ಯದ ಅಟ್ಟಣಿಗೆಯ ಬೆಳಕಿನಲ್ಲಿ ನಾನು ಈ ವರೆಗೆ ಚರ್ಚಿಸಿದ ದ್ವಂದ್ವದ ಸ್ಥಾನವೇನೆಂಬುದನ್ನು ನೋಡೋಣ. ಏಕೆಂದರೆ ಪಾತ್ರಪ್ರಧಾನವಾದ ಕಾದಂಬರಿಯಲ್ಲಿ ಇಂಥ ಒಂದು ಶೋಧನೆ ಅವಶ್ಯವೆಂದು ನನ್ನ ಭಾವನೆಯಾಗಿದೆ.’ (ಪುಟ ೬) ಕಾದಂಬರಿ ಎನ್ನುವುದು ಲೇಖಕನ ಲೋಕ. ಆ ಸೃಷ್ಟಿಗೆ ಅವನೇ ಬ್ರಹ್ಮ. ಅಲ್ಲಿ ಅದಿರಬೇಕಿತ್ತು, ಅದು ಹಾಗೆ ತಿರುವುಪಡೆಯಬೇಕಿತ್ತು, ಅದು ಹಾಗಾಗಿದ್ದರೆ ಪರಿಣಾಮ ಬೇರೆಯಾಗುತ್ತಿತ್ತು ಎಂದೆಲ್ಲ ಚರ್ಚಿಸುವುದು ಸರಿಯಾಗಲಾರದು. ಅದಕ್ಕಾಗಿಯೇ ಮಾಧವ ಕುಲಕರ್ಣಿಯವರು, ‘ಊಹಾಧಾರಿತ ಚರ್ಚೆಯು ಸಾಹಿತ್ಯ ವಿಮರ್ಶೆಗೆ ಗೌರವ ತರಲಾರದು. ಅಂಥ ಒಂದು ಒಳ ನೋಟವು ಸಾಹಿತ್ಯ ವಿಮರ್ಶೆಯ ಒಂದು ಆಯಾಮವಾಗಬಹುದೇ ಹೊರತು ಅದೇ ಕೇಂದ್ರದಲ್ಲಿರುವ ವಿಮರ್ಶೆಯು ಸಾಹಿತ್ಯದ ಸೂಕ್ಷ್ಮತೆಯನ್ನು ನಿರ್ಲಕ್ಷಿಸಬಹುದು’ (ಪುಟ ೧೨) ಎಂಬ ಮಾತನ್ನು ಹೇಳಿದ್ದಾರೆ. 

 ಒಮ್ಮೊಮ್ಮೆ ತತ್ವಪ್ರತಿಪಾದನೆಯ ಸಾಹಿತ್ಯ ಪರಂಪರೆಯ ದೃಷ್ಟಿಕೋನದಿಂದ ಯಥಾರ್ಥ ಸ್ಥಿತಿ ಅಭಿವ್ಯಕ್ತಿಯ ಸಂಪ್ರದಾಯದ ಕಾದಂಬರಿಗಳನ್ನು ನೋಡತೊಡಗಿದಾಗ ಕೆಲವೊಂದು ಆಭಾಸಗಳು ಸಾಹಿತ್ಯ ವಿಮರ್ಶೆಯಲ್ಲಿ ನುಸುಳಬಹುದು. ಯಥಾರ್ಥ ಚಿತ್ರಣ ಮತ್ತು ತತ್ವ ಪ್ರತಿಪಾದನೆಗಳಲ್ಲಿ ಯಾವುದು ಮೇಲು ಎಂಬುದು ವಿಮರ್ಶೆಯ ಕೊನೆಯ ಮಜಲಿನಲ್ಲಿ ಎತ್ತುವ ಪ್ರಶ್ನೆಯಾಗಬಹುದು. ಆದರೆ ಕಾದಂಬರಿ ಅಥವಾ ಸಾಹಿತ್ಯ ಗ್ರಹಿಕೆಯ ಪರಿಗಳನ್ನು ವಿವರಿಸದೆ ಕೇವಲ ಕೊನೆಯ ಮಜಲಿನಲ್ಲಿ ನಿಂತು ಮಾತನಾಡತೊಡಗುವುದು ಕೇವಲ ಅಭಿಪ್ರಾಯಗಳನ್ನು ಮಂಡಿಸಿ ಕೈ ತೊಳೆದುಕೊಳ್ಳುವ ಅಪಾಯಕಾರಿ ವಿಮರ್ಶೆಯಾಗಬಹುದು (ಪುಟ ೧೨-೧೩) ಎಂದಿರುವುದು ವಿಮರ್ಶೆಕರಿಗೆ ಪಾಠವಾಗಿದೆ. 

ಒಂದು ಕೃತಿಯನ್ನು ಗ್ರಹಿಸಿದ ರೀತಿಯನ್ನು ವಿಮರ್ಶಕನಾದವನು ವಿಮರ್ಶೆಯನ್ನು ಬರೆಯುತ್ತಿರುವಾಗಲೇ ತನಗೆ ಖಚಿತಪಡಿಸಿಕೊಳ್ಳುತ್ತಾನೆ. ಈ ರೀತಿಯಾಗಿ ನಡೆಯುವ ಕ್ರಿಯೆಯೂ ಸೃಷ್ಟ್ಯಾತ್ಮಕ ಕ್ರಿಯೆಯೇ ಆಗಿರುತ್ತದೆ. ಈ ಗ್ರಹಿಸಿದ ರೀತಿಯನ್ನು ಬದಿಗಿಟ್ಟು ಬರೆದ ವಿಮರ್ಶೆ ಕೇವಲ ವ್ಯಕ್ತಿಗತ ಅಭಿಪ್ರಾಯಜನ್ಯ ವಿಮರ್ಶೆಯಾಗಿಬಿಡುತ್ತದೆ. ಇಂಥ ವಿಮರ್ಶೆಯು ಈಗ ಖ್ಯಾತನಾಮರಾದ ವಿಮರ್ಶಕರಿಂದ ಕೂಡ ಬರುತ್ತಿರುವುದರಿಂದ ಅದನ್ನು ಕುರಿತು ಎಚ್ಚರದಿಂದಿರಬೇಕಾದ ಅವಶ್ಯಕತೆ ಉಂಟಾಗಿದೆ. ಕೃತಿಯನ್ನು ಗ್ರಹಿಸಿದ ರೀತಿಯನ್ನು ವಿಮರ್ಶಾತ್ಮಕವಾಗಿಯೇ ವಿವರಿಸಿದಾಗ ಆ ಕೃತಿಯಲ್ಲಿ ಅಡಕಗೊಂಡಿರುವ ಮೌಲ್ಯವ್ಯವಸ್ಥೆಯನ್ನು ಕುರಿತು ನಂತರದಲ್ಲಿ ವಿಮರ್ಶಕ ಹೇಳಬಹುದಾದ ಎಲ್ಲ ಮಾತುಗಳೂ ವಿಮರ್ಶೆಯನ್ನು ಓದುವ ಓದುಗನ ಮನಸ್ಸಿನಾಳಕ್ಕೆ ಇಳಿಯತೊಡಗುತ್ತವೆ. ಆಗ ಸಾಹಿತ್ಯ ವಿಮರ್ಶೆ ಮತ್ತು ವಿಮರ್ಶಕರಿಬ್ಬರೂ ಸಾಹಿತ್ಯ ಕೃತಿ ಮತ್ತು ಓದುಗನನ್ನು ಜೋಡಿಸುವ ಅರ್ಥಪೂರ್ಣ ಕೊಂಡಿಯಾಗುತ್ತಾರೆ. (ಪುಟ ೧೬) 

ಒಂದು ಸಾಹಿತ್ಯ ಪ್ರಕಾರ ಯಾವ ಹಂತದ ವರೆಗೆ ಬೆಳೆದು ನಿಂತಿರುತ್ತದೋ ಅಲ್ಲಿಯ ವರೆಗೆ ಒಬ್ಬ ಸಾಹಿತಿ, ಆ ಸಾಹಿತ್ಯ ಪ್ರಕಾರದಲ್ಲಿ ಅರಳಿದ ರೀತಿಯನ್ನು ನೋಡಬೇಕೆ ಹೊರತು, ಇಂದು ಆ ಪ್ರಕಾರ ಬೆಳೆದುನಿಂತ ರೀತಿಯಲ್ಲಿ ಅದೂ ಮುಖ್ಯವಾಗಿ ಕಾದಂಬರಿ ಲೋಕದ ತಾಂತ್ರಿಕ ಬೆಳವಣಿಗೆಯ ಬೆಳಕಿನಲ್ಲಿ ಹಿಂದಿನ ಸಾಹಿತ್ಯ ಕೃತಿಗಳನ್ನು ಪರೀಕ್ಷಿಸುವುದು ಒಮ್ಮೊಮ್ಮೆ ಅಪಾಯಕಾರಿ ನಿರ್ಧಾರಗಳತ್ತ ನಮ್ಮನ್ನು ಕರೆದೊಯ್ಯಬಹುದು. ಈ ಕಾರಣಕ್ಕಾಗಿಯೇ ಮೌಲ್ಯಗಳು ವ್ಯಕ್ತವಾದ ರೀತಿಗಿಂತ ಮೌಲ್ಯಗಳ ಪುನರ್‌ಮೌಲ್ಯೀಕರಣಕ್ಕೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ (ಪುಟ೪೪) ಎಂಬಲ್ಲಿ ಕುಲಕರ್ಣಿಯವರ ವಿಮರ್ಶೆಯ ‘ಧೋರಣೆ’ಗಳನ್ನು ನಾವು ಗುರುತಿಸಬಹುದು. ಕಾರಂತರ ಐದು ಕಾದಂಬರಿಗಳ ವಿಮರ್ಶೆ ಇಲ್ಲಿದೆ. 

ಕಾರಂತರ ಒಟ್ಟೂ ಸಾಹಿತ್ಯದ ಬಗ್ಗೆ ಅವರು ಒಂದು ಸಾಮಾನ್ಯವಾದ ಅಂಶವನ್ನು ಇಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯರಲ್ಲಿ ಹುದುಗಿರುವ ಅಸಾಮಾನ್ಯ ಮತ್ತು ಅಂತರಂಗದ ವ್ಯಾಪಾರದಲ್ಲಿ ದಕ್ಕುವ ಮಾನವನ ನಿಜಸ್ವರೂಪ ಇವು ಕಾರಂತರ ಕುತೂಹಲವನ್ನು ಕೆರಳಿಸಿದ ಸಾಹಿತ್ಯಿಕ ವಸ್ತುಗಳು. ಮಂಜುಳೆ (ಮೈಮನಗಳ ಸುಳಿಯಲ್ಲಿ) ಅಂಥ ಒಂದು ಕುತೂಹಲದ ಪ್ರತಿಫಲವಾಗಿ ಮೂಡಿಬಂದ ಪಾತ್ರವಾಗಿದ್ದಾಳೆ (ಪುಟ ೭೭) ಎಂಬ ಮಾತನ್ನು ಹೇಳಿದ್ದಾರೆ. 

ಅನಂತ ಮೂರ್ತಿಯವರ ‘ಭವ’ದ ಬಗ್ಗೆ ಚರ್ಚಿಸುತ್ತ, ಪಾತ್ರಗಳು ಸ್ಥಾಪಿತಗೊಳ್ಳುತ್ತಿಲ್ಲವಲ್ಲ ಎಂಬುದೇ ನನ್ನ ಆಕ್ಷೇಪ ಎಂದಿದ್ದಾರೆ. ಟೀವಿ ಎಪಿಸೋಡುಗಳ ಉದಾಹರಣೆ ನೀಡುವ ಅವರು, ಅವು ಒಟ್ಟಂದದಲ್ಲಿ ಪರಿಣಾಮ ಬೀರುವುದಕ್ಕಿಂತ ಆಯಾ ಆಖ್ಯಾನಗಳನ್ನು ಹೇಗೆ ಆಕರ್ಷಕ ಮಾಡಬೇಕೆನ್ನುವುದೇ ಮಹತ್ವದ್ದಾಗಿ ಬಿಟ್ಟಿರುತ್ತದೆ. ಈ ರೀತಿಯು ಅನಂತಮೂರ್ತಿಯವರ ಬರವಣಿಗೆಯಲ್ಲಿ ಕಂಡಾಗ ಸ್ವಲ್ಪ ಗಲಿಬಿಲಿಗೊಳ್ಳುವಂತಾಗುತ್ತದೆ. ಇದರ ಸಾಧಕ ಬಾಧಕಗಳು ನಮ್ಮ ಒಟ್ಟು ಬರವಣಿಗೆಯ ಧೋರಣೆಯ ಮೇಲೆ ಬಲವಾದ ಪ್ರಭಾವ ಬೀರಬಹುದಾದ್ದರಿಂದ ಈ ಕುರಿತು ತಲೆಕೆಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. 

ಗದ್ಯ ಬರೆವಣಿಗೆಯ ವಿಷಯದಲ್ಲಿ ಕುಲಕರ್ಣಿಯವರು ಇದರಲ್ಲಿಯೇ ಒಂದು ಮಹತ್ವದ ಮಾತನ್ನು ಹೇಳಿದ್ದಾರೆ. ‘‘ನಾವು ಗದ್ಯ ಬರವಣಿಗೆಯ ಸಂಧಿಕಾಲದಲ್ಲಿ ನಿಂತಿದ್ದೇವೆ. ವಿವರಗಳಿಗೆ ಉಪಯೋಗಿಸುವ ಭಾಷೆಯು ‘ಗದ್ಯದ ರೂಪಕ’ವಾಗಬೇಕಾದರೆ ವಿಷಯ ವಸ್ತು ಸೂಚಿಸುವ ಸನ್ನಿವೇಶದಿಂದ ಆಯ್ದ ಪದಗಳಿಂದಲೇ ಅಲಂಕರಿಸಲ್ಪಡಬೇಕಾಗುತ್ತದೆ. ಇದೊಂದು ವಿಷಯದಲ್ಲಿ ಮಾತ್ರ ಕಾದಂಬರಿಯ ಭಾಷೆಯು ಸೃಜನಶೀಲವಾಗಬೇಕಾದರೆ ಸನ್ನಿವೇಶದ ಸಂಪೂರ್ಣ ಅರಿವಿನಿಂದ ಬಂದ ‘ರಕ್ತಗತವಾದ’ ಒಂದು ಭಾಷೆ ಉದ್ಭವವಾಗಬೇಕಾಗುತ್ತದೆ. ಇಲ್ಲದಿದ್ದರೆ ಮಿದುಳಿನಿಂದ ಸೃಜಿಸುವ ಭಾಷೆಯು ಎಷ್ಟೇ ಶಕ್ತಿಯುತವಾಗಿದ್ದರೂ ಕೂಡ ಅದಕ್ಕೆ ಈ ಅರ್ಥದಲ್ಲಿ ಸೃಜನಶೀಲತೆಯು ದಕ್ಕುವುದಿಲ್ಲ.... ಜೀವನಕ್ಕೆ ಚಿಂತನೆಯನ್ನು ತೊಡಿಸಬೇಕೋ ಅಥವಾ ಜೀವನದಿಂದ ಉದ್ಭವವಾದ ಚಿಂತನೆಯೇ ಮೂರ್ತರೂಪವನ್ನು ಕಾದಂಬರಿಯಲ್ಲಿ ದಕ್ಕಿಸಿಕೊಳ್ಳಬೇಕೋ ಎಂಬುದೇ ಮೂಲ ಸಮಸ್ಯೆಯಾಗಿದೆ. ಇದಕ್ಕೆ ಸ್ಪಷ್ಟವಾದ ಉತ್ತರವನ್ನು ಕಂಡುಕೊಳ್ಳದೆ ನಮ್ಮ ಗದ್ಯ ಬರವಣಿಗೆಯು ಹೆಚ್ಚು ಸ್ವೀಕಾರಾರ್ಹವಾಗಲಾರದು....(ಪುಟ ೮೭-೮೮)’’ ಎಂಬ ಮಾತು ಕನ್ನಡ ಗದ್ಯಕಾರರಿಗೆಲ್ಲ ಮಾರ್ಗದರ್ಶನದಂತಿದೆ. 

ಭೈರಪ್ಪನವರ ಏಳು ಕಾದಂಬರಿಗಳ ವಿಮರ್ಶೆ ಇದರಲ್ಲಿದೆ. ಭೈರಪ್ಪನವರು ಕಾದಂಬರಿಗಳ ವಸ್ತು ರಮ್ಯಕಲ್ಪನೆಗಳಿಂದ ಹೇಗೆ ಮುಕ್ತವಾಗಿಲ್ಲ ಎಂಬುದನ್ನು ಉದಾಹರಣೆಗಳ ಮೂಲಕ ಹೇಳುತ್ತಾರೆ. ಎಂಥ ಬರೆವಣಿಗೆ ಸೃಜನಶೀಲತೆಗೆ ಮಾರಕವಾಗುತ್ತದೆ? ಅವಧೇಶ್ವರಿಯ ವಿಮರ್ಶೆ ಮಾಡುವ ಕುಲಕರ್ಣಿಯವರು, ‘ವೇದಕಾಲೀನ ಕಾದಂಬರಿ’ ಎಂಬ ಉಪಶಿರೋನಾಮೆಯನ್ನಿಟ್ಟುಕೊಂಡು ಬಂದ ‘ಅವಧೇಶ್ವರಿ’ ಕಾದಂಬರಿಯು ಯಾವುದೋ ಒಂದು ವರ್ಗವನ್ನು ಮತ್ತು ಒಂದು ರೀತಿಯ ಚಿಂತನೆಯನ್ನು ತೃಪ್ತಿಗೊಳಿಸಲು ಬರೆದ ಕಾದಂಬರಿಯಾಗಿ ತೋರುತ್ತದೆ. ಇಂಥ ಪ್ರಯತ್ನಗಳು ಸೃಜಶೀಲತೆಗೆ ಒಂದು ಮಾರಕವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಇವಲ್ಲದೆ ಕಂಬಾರ, ಶಾಂತಿನಾಥ ದೇಸಾಯಿ, ಶ್ರೀನಿವಾಸ ವೈದ್ಯ, ನಾ.ಮೊಗಸಾಲೆ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠರ ಕಾದಂಬರಿಗಳ ಕುರಿತೂ ವಿಮರ್ಶೆಗಳಿವೆ. ಹೇಳುವುದನ್ನು ದ್ವಂದ್ವಕ್ಕೆ ಎಡೆಯಿಲ್ಲದೆ, ಯಾರನ್ನೋ ಮೆಚ್ಚಿಸಬೇಕೆಂಬ ಉದ್ದೇಶವಿಲ್ಲದೆ, ಖಚಿತವಾಗಿ ಹೇಳುವ ಮಾಧವ ಕುಲಕರ್ಣಿಯವರು ಕನ್ನಡ ವಿಮರ್ಶೆಯನ್ನು ಮತ್ತೊಂದು ಎತ್ತರಕ್ಕೆ ಒಯ್ದಿದ್ದಾರೆ




2 comments:

  1. ಯಾರು ಬರೆದದ್ದು?

    ReplyDelete
  2. ಕನ್ನಡ ಪ್ರಭ ರವಿವಾರದ ಖುಷಿ ಪುರವಣೆಯಲ್ಲಿ ಬಂದ ವಿಮರ್ಶೆ. :-) ನೀವೇ ಬರೆದಿದ್ದು ಸರ್

    ReplyDelete